ಮೋಹಕ ತಾರೆ ರಮ್ಯ ಈಗ ನಿರ್ಮಾಪಕ ರಾಗಿ ಚಿತ್ರರಂಗದಲ್ಲಿ ಸಕ್ರೀಯ ರಾಗಿರೋದು ಗೊತ್ತಿರೋ ವಿಚಾರ. ಇವರ ಬ್ಯಾನರ್ ನಲ್ಲಿ ಮೂಡಿಬರ್ತಿರುವ
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಟೈಟಲ್ ವಿವಾದಕ್ಕೆ ಗುರಿಯಾಗಿತ್ತು. ಈ ಟೈಟಲ್ ತಮ್ಮದೆಂದು, ತಾವು ಅದೇ ಹೆಸರಿನ ಸಿನೆಮಾ ಮಾಡುತ್ತಿರುವುದಾಗಿ, ಹಾಗು ಆ ಚಿತ್ರದ ಚಿತ್ರೀಕರಣ ಅರ್ಧಕ್ಕೆ ನಿಂತಿರೋದ್ರಿಂದ ಈ ಟೈಟಲ್ ಅನ್ನು ಬೇರೆಯವರಿಗೆ ನೀಡಬಾರದೆಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತಮ್ಮ ಲಾಯರ್ ಮೂಲಕ ಪತ್ರವೊಂದನ್ನು ಕಳುಹಿಸಿ,ಈ ಸಲುವಾಗಿ ಅವರು ಕೋರ್ಟ್ ಮೆಟ್ಟಿಲೇರಿದ್ದರು.ಆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದ್ದು, ರಾಜೇಂದ್ರ ಸಿಂಗ್ ಬಾಬು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ‘ನನ್ನ ಕಕ್ಷಿದಾರರು ನಿರ್ಮಿಸುವ ಮೇಲ್ಕಂಡ ಸ್ವಾತಿ ಮುತ್ತಿನ ಮಳೆ ಹನಿಯೆ’ ಹೆಸರಿನ ಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದು. ಶೇಕಡಾ 80ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಮೇಲ್ಕಂಡ ಚಿತ್ರದ ನಾಯಕ ನಟ ಅಂಬರೀಶ್ ನಿಧನ ಹೊಂದಿ ನಂತರ ಚಿತ್ರದ ಚಿತ್ರೀಕರಣವು ಕಾರಣಾಂತರಗಳಿಂದ ನಿಂತಿದೆ. ನನ್ನ ಕಕ್ಷಿದಾರರು ಹೇಳುವ ಹಾಗೆ ಮೇಲ್ಕಂಡ ಚಿತ್ರ ಶೀರ್ಷಿಕೆ ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿರುತ್ತದೆ’ ಎಂದು ಸಿಂಗ್ ಬಾಬು ಪರ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಕೂಡ ಪತ್ರ ಬರೆದಿದ್ದರು.
ಅಲ್ಲದೇ, ತಾವು ನಿರ್ಮಿಸುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಶಿರ್ಷಿಕೆಯನ್ನಾಗಲಿ, ಹಾಡನ್ನಾಗಲಿ ಯಾವುದೇ ರೀತಿ ಉಪಯೋಗಿಸಲು ಅಥವಾ ನೋಂದಾಯಿಸಲು ನನ್ನ ಕಕ್ಷಿದಾರರ ವಿನಃ ಯಾರಿಗೂ ಯಾವುದೇ ವಿಧವಾದ ಹಕ್ಕು ಇರುವುದಿಲ್ಲ. ಒಂದು ವೇಳೆ ನಾನು ನೀಡಿರುವ ಈ ವಕೀಲರ ನೋಟಿಸಿನ ನಂತರವೂ ನೀವು ಬೇರೆ ನಿರ್ಮಾಪಕರಿಗೆ ಈ ಚಿತ್ರದ ಶೀರ್ಷಿಕೆಯನ್ನು ನೋಂದಾವಣೆ ಮಾಡಿಕೊಡಲು ಮತ್ತು ಚಿತ್ರ ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದೆ ಆದರೆ, ನನ್ನ ಕಕ್ಷಿದಾರರು ನೊಂದಾಣಿಕೆ ಮಾಡಿರುವ ಶೀರ್ಷಿಕೆಯ ಕೃತಿ ಚೌರ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದರು.
ಆದರೆ, ಬಾಬು ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದ ಬೆನ್ನಲ್ಲೇ ಆ ಟೈಟಲ್ ಬಗ್ಗೆ ಪರಿಶೀಲಿಸಿದಾಗ ಅಸಲಿಯಾಗಿ ಅದು ರಾಜೇಂದ್ರ ಸಿಂಗ್ ಬಾಬು ಅವರ ಹೆಸರಿನಲ್ಲಿ ಇರಲಿಲ್ಲ ಎನ್ನುವುದು ಗೊತ್ತಾಗಿತ್ತು. ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಮಾಡುತ್ತಿರುವ ಬಿ.ಕೆ.ಗಂಗಾಧರ್ ಅವರು ಈ ಟೈಟಲ್ ಅನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ. ಅಲ್ಲದೇ, ರಮ್ಯಾ ಸಿನಿಮಾ ಮಾಡುತ್ತೇನೆ ಎಂದಾಗ, ಅವರಿಗೆ ಆ ಟೈಟಲ್ ಅನ್ನು ವರ್ಗಾಯಿಸಿದ್ದಾರೆ ಎಂದು ಸ್ವತಃ ವಾಣಿಜ್ಯ ಮಂಡಳಿಯ ಅಧ್ಯಕ್ಷರೇ ತಿಳಿಸಿದ್ದರು.
ಒಟ್ನಲ್ಲಿ ಇಬ್ಬರ ವಾದ ವಿವಾದಗಳ ಆಲಿಸಿದ ಕೋರ್ಟ್ ಸತ್ಯಾ ಸತ್ಯತೆ ತಿಳಿದು ನಟಿ, ರಮ್ಯಾ ಪರ ತಮ್ಮ ತೀರ್ಪು ನೀಡಿದೆ.ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದ್ದು, ರಾಜೇಂದ್ರ ಸಿಂಗ್ ಬಾಬು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.