ಕರುನಾಡಿನ ಅನರ್ಘ್ಯ ರತ್ನವೊಂದು ಕಣ್ಮರೆಯಾಗಿದೆ. ಕಾಡಿನೊಂದಿಗೆ ಕಳ್ಳುಬಳ್ಳಿಯ ನಂಟು ಹೊಂದಿದ್ದ, ಲಕ್ಷಾಂತರ ಗಿಡಗಳನ್ನು ನೆಟ್ಟು ಬೆಳೆಸಿದ್ದ, ಈ ನಿಸ್ವಾರ್ಥ ನಡೆಯಿಂದಲೇ ವೃಕ್ಷಮಾತೆಯೆಂದು ಕರೆಸಿಕೊಂಡಿದ್ದ ಪದ್ಮಶ್ರೀ ಪುರಸೃತ ತುಳಸಿಗೌಡ ನಿಧನ ಹೊಂದಿದ್ದಾರೆ. ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದ ವೃಕ್ಷಮಾತೆ ಕೋಟಿ ಮನಸುಗಳ ಹರಕೆ, ಹಾರೈಕೆಗಳ ನಡುವೆಯೂ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ಕಾರವಾರದ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಕಾಡಿನ ವಿಶ್ವಕೋಶದಂತಿದ್ದವರು. ಥಳುಕು ಬಳುಕಿನ ಸೋಂಕಿಲ್ಲದ, ಪ್ರಚಾರದ ಗುಂಗಿಲ್ಲದ ಈ ಜೀವ ಎಂಬತ್ನಾಲಕ್ಕು ವರ್ಷಗಳ ತುಂಬು ಜೀವನ ನಡೆಸಿತ್ತು. ತಲೆಮಾರುಗಳಾಚೆಗೂ ಪ್ರವಹಿಸಬಲ್ಲ ಕಾರ್ಯಗಳ ಮೂಲಕ ಪದ್ಮಶ್ರೀ ಪುರಸ್ಕಾರವನ್ನೂ ತುಳಸಿ ಗೌಡ ಪಡೆದುಕೊಂಡಿದ್ದರು. ಎಲ್ಲವೂ ಸ್ವಾರ್ಥದ ಸಂಕೋಲೆಯಲ್ಲಿ ಬಂಧಿಯಾಗಿರುವ ಈ ದಿನಮಾನದಲ್ಲಿ ಗಿಡ ಮರ ಬೆಳೆಸಿ, ಅದನ್ನೇ ಬದುಕಾಗಿಸಿಕೊಂಡು ಕಣ್ಮರೆಯಾದ ತುಳಸಿ ಗೌಡ ಧೈತ್ಯ ಶಕ್ತಿಯಂತೆಯೂ, ಸದಾ ಕಾಡುವ, ಮಾದರಿಯಾಗುವ ಅಚ್ಚರಿಯಂತೆಯೂ ಕಾಣಿಸುತ್ತಾರೆ.
ತುಳಸಿ ಗೌಡ ಗಿಡ ನೆಡುವ ಅರಣ್ಯ ಇಲಾಖೆಯ ದಿನಗೂಲಿ ಉದ್ಯೋಗದಿಂದಲೇ ಇಡೀ ದೇಶಕ್ಕೆ ಪರಿಚಯವಾದವರು. ಅದನ್ನೊಂದು ಕಸುಬೆಂದುಕೊಳ್ಳದೆ, ಆತ್ಮದಂತೆ ಹಚ್ಚಿಕೊಳ್ಳುವ ಮೂಲಕ ಮಾದರಿಯಾದವರು. ಅಕೋಲೆಯೆಂಬ ಊರನ್ನೇ ಅಕ್ಷರಶಃ ಪ್ರಪಂಚವೆಂಬಂತೆ ಪರಿಭಾವಿಸಿಕೊಂಡು ಬದುಕಿದವರು ಉತ್ತರಕನ್ನಡದ ಹಾಲಕ್ಕಿ ಸಮೂದಾಯದ ತುಳಸಿಗೌಡ ಎಂಬ ಅಮಾಯಕ ಅಜ್ಜೆಮ್ಮ. ಅವರ ಪರಿಸರದ ಕಾಳಜಿ, ಬದುಕಿನುದ್ದಕ್ಕೂ ಲಕ್ಷಾಂತರ ಗಿಡ ನೆಟ್ಟು ಬೆಳೆಸಿದ ಕಾರಣಕ್ಕಾಗಿಯೇ ೧೯೯೯ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಪದ್ಮಶ್ರೀ ಪ್ರಶಸಿಗಳು ಅವರನ್ನು ಅರಸಿ ಬಂದಿದ್ದವು. ತುಂಬಿದ ಸಭೆಯಲ್ಲಿ ಬರಿಗಾಲಲ್ಲಿ ತೆರಳಿ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದರಿಂದ ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ರಾಷ್ಟ್ರಾದ್ಯಂತ ಗಮನ ಸೆಳೆದಿದ್ದರು. ನಿಡುಮಾಮಿಡಿ ಸದ್ಭಾವನಾ ಪ್ರಶಸ್ತಿ, ಇಂಡವಾಳು ಎಚ್. ಹೊನ್ನಯ್ಯ ಸಮಾಜದ ಸೇವಾ ಪ್ರಶಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿಗಳು ಸೇರಿದಂತೆ ಸಾಕಷ್ಟು ಪ್ರಶಸ್ತಿಗಳಿಗೆ ಭಾಜನರಾಗಿದ್ದ ತುಳಸಿ ಗೌಡ ಯಾವುದನ್ನೂ ತಲೆಗೇರಿಸಿಕೊಳ್ಳದೆ, ಗಿಡ ಮರಗಳನ್ನು ಮಕ್ಕಳಂತೆ ಅವುಚಿಕೊಂಡು ಬದುಕಿದ ರೀತಿ ನಿಜಕ್ಕೂ ಬೆರಗು ಮೂಡಿಸುವಂತಿದೆ.
ಕಾರವಾರ ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ಅತ್ಯಂತ ಅಮಾಯಕ, ಇವತ್ತಿಗೂ ಬಡತನಜ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಹಾಲಕ್ಕಿ ಒಕ್ಕಲಿಗರಿದ್ದಾರೆ. ಅಂಥಾ ಸಮುದಾಯದಲ್ಲಿ ಹುಟ್ಟಿದವರು ತುಳಸಿಗೌಡ. ತಮ್ಮ ಜನಾಂಗದ ಹೆಣ್ಣು ಮಕ್ಕಳಂತೆಯೆ ಸಾಂಪ್ರದಾಯಿಕವಾಗಿ ಸೀರೆಯನ್ನು ಉಟ್ಟು, ಕೈ ತುಂಬ ಬಳೆ ಹಾಗೂ ಕೊರಳ ತುಂಬ ಕರಿಮಣಿಯ ಸರಗಳನ್ನು ಹಾಕಿಕೊಂಡು ಸಾದಾಸೀದಾ ಜೀವನ ನಡೆಸಿದವರು ತುಳಸಿ ಗೌಡ. ಇವತ್ತಿಗೂ ಆ ಸಮುದಾಯ ಆಧುನಿಕತೆಯಿಂದ ದೂರವುಳಿದಿದೆ. ಆದರೆ ಕಾಡಿನ ವಿಷಯದಲ್ಲಿ ಮಾತ್ರ ಅಗಾಧ ಜ್ಞಾನ, ಅಲ್ಲಿ ಬೆಳೆಯುವ ಗಿಡಗಳ ಕುರಿತು ಕರಾರುವಾಕ್ಕಾದ ಮಾಹಿತಿಗಳು ಅವರಿಗೆ ಹುಟ್ಟಿನಿಂದ ಬಂದಿರುವ ಬಳುವಳಿ. ಒಂದು ಗಿಡದ ಹುಟ್ಟಿನಿಂದ, ಬೆಳವಣಿಗೆ, ಅದರ ನಿಖರ ವಯಸ್ಸು ಹಾಗೂ ಆ ಗಿಡದ ಕುರಿತು ತಮ್ಮ ಗೌಟಿ ಭಾಷೆಯಲ್ಲಿ ಮೂಗಿನ ಮೇಲೆ ಬೆರಳಿಡುವಂತೆ ಸಂಪೂರ್ಣ ಜೀವನವನ್ನೇ ತೆರೆದಿಟ್ಟು ಬಿಡುತ್ತಾರೆ.
ಅಂಕೋಲಾ ತಾಲೂಕಿನ ಗಂಗಾವಳಿ ನದಿಯ ತೀರದ ಉಳುವರೆ ಎಂಬ ಗ್ರಾಮದಲ್ಲಿ ಅಪರೂಪದ ಹಾಲಕ್ಕಿ ಸಮುದಾಯದಲ್ಲಿ ಜನಸಿದ್ದವರು ತುಳಸಿ ಗೌಡ. ತೀರಾ ಸಣ್ಣವರಿದ್ದಾಗಲೇ ಈ ವೃಕ್ಷ ಮಾತೆಯ ತಂದೆ ನಾರಾಯಣಗೌಡರು ತೀರಿಕೊಂಡಿದ್ದರು. ತಾಯಿ ನೀಲಿಗೌಡ ಕಿತ್ತು ತಿನ್ನುವ ಬಡತನದಲ್ಲಿ ತಮ್ಮ ಎರಡು ಹೆಣ್ಣು ಮಕ್ಕಳೊಟ್ಟಿಗೆ ತವರುಮನೆ ಶಿರೂರಿಗೆ ವಾಪಸ್ಸಾದವರು. ಆ ನಂತರ ಇಬ್ಬರು ಮಕ್ಕಳೂ ಅಜ್ಜನ ಆಶ್ರಯದಲ್ಲಿ ಬೆಳೆದಿದ್ದರು. ಬಡತನದಿಂದಾಗಿ ಶಾಲೆಗೆ ಹೋಗಲಾರದ ಸ್ಥಿತಿ ಅವರನ್ನು ಆವರಿಸಿಕೊಂಡಿತ್ತು. ಅನಂತರ ಒಂದಿಷ್ಟು ಸ್ವಂತದ ಜಮೀನು ಮಾಡಿಕೊಂಡು ಪಕ್ಕದ ಹೊನ್ನಳ್ಳಿ ಗ್ರಾಮಕ್ಕು ಸ್ಥಳಾಂತರವಾಗಿದ್ದರು. ಹದಿನಾಲ್ಕನೇ ವಯಸ್ಸಿನಲ್ಲಿ ಗೋವಿಂದಗೌಡರ ಜೊತೆ ತುಳಸಿಗೌಡರ ಮದುವೆ ನಡೆದಿತ್ತು. ಬಳಿಕ ಈ ದಂಪತಿ ಹೊನ್ನಳ್ಳಿ ಗ್ರಾಮದಲ್ಲಿಯೆ ಸಣ್ಣದಾಗಿ ಕೃಷಿ ಮಾಡಿಕೊಂಡು ಬದುಕಲಾರಂಭಿಸಿದ್ದರು.
ತಮ್ಮ ಇಪ್ಪತೈದನೇ ವಯಸ್ಸಿನಲ್ಲಿ ಮನೆಯಲ್ಲಿಯ ಕಿತ್ತು ತಿನ್ನುವ ಬಡತನದಿಂದಾಗಿ ಗ್ರಾಮದ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಸಸಿಗಳನ್ನು ಬೆಳೆಸುವ ಕೆಲಸಕ್ಕೆ ತುಳಸಿ ಗೌಡ ಹೋಗಲಾರಂಭಿಸಿದ್ದರು. ಶುರುವಿನಲ್ಲಿ ಅವರಿಗಿದ್ದ ವೇತನ ದಿನಕ್ಕೊಂದು ರೂಪಾಯಿ. ತಾವು ನೆಡುತ್ತಿದ್ದ ಗಿಡಗಳ ಜೊತೆಗೆನ ಪ್ರೀತಿ, ಅವುಗಳನ್ನು ದೊಡ್ಡದು ಮಾಡುವಾಗಿನ ಕಾಳಜಿ ಮತ್ತು ಆ ಗಿಡದೊಟ್ಟಿಗಿನ ಬಾಂಧವ್ಯ ಹಾಗೂ ಪರಿಸರದ ಮೇಲಿನ ಅವರ ಅಗಾಧ ವಾತ್ಸಲ್ಯಗಳು ಅವರನ್ನು ದೊಡ್ಡ ಮಟ್ಟದಲ್ಲಿ ಬೆಳೆಸುತ್ತಲೆ ಹೋದವು. ಗಿಡಗಳನ್ನು ಮಕ್ಕಳಂತೆ ಬೆಳೆಸುವ ಅವರ ಪ್ರವೃತ್ತಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ ಅನ್ನುವ ಮಟ್ಟಕ್ಕೆ ತುಳಸಿಗೌಡ ತಮ್ಮ ಜೀವನ ಪರ್ಯಂತ ಗಿಡಗಳ ಜೊತೆಗೆಯೇ ಬದುಕಿ ಬೆಂಡಾದವರು. ಇವತ್ತಿಗೂ ಅವರು ಬೆಳಸಿರುವ ಲಕ್ಷಾಂತರ ಲೆಕ್ಕದ ಗಿಡಗಳ ಲೆಕ್ಕೆವೆ ಅವರಲ್ಲಿರಲಿಲ್ಲ.
ತುಳಸಿಗೌಡರನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಗುರುತಿಸಿದ ನಂತರ ಅವರನ್ನು ಕಾಡಿನ ವಿಶ್ವಕೋಶ ಅಂತಲೂ ಕರೆಯಲಾಯಿತು. ಕೆಲವು ವಿದ್ಯಾರ್ಥಿಗಳು ಅವರ ಜೀವನದ ಕುರಿತು ಪಿಎಚ್ಡಿ ವಿಷಯಗಳನ್ನಾಗಿ ಆರಿಸಿಕೊಂಡರು. ಪ್ರಾಥಮಿಕ ಹಾಗೂ ವಿಶ್ವವಿದ್ಯಾಲಯದ ಪಠ್ಯದಲ್ಲಿ ಅವರ ಬಗ್ಗೆ ಪಾಠವನ್ನು ಅಳವಡಿಸಲಾಯಿತು. ದೇಶದ ಪ್ರತಿಷ್ಠಿತ ಕಂಪನಿಗಳು ಗೌಟಿ ಭಾಷೆಯಲ್ಲಿ ಪರಿಸರದ ಕುರಿತು ಅವರಿಂದ ಸಾಕಷ್ಟು ಸೇಮಿನಾರುಗಳನ್ನು ಮಾಡಿಸಿದರು. ಇವತ್ತಿಗೂ ತುಳಸಿಗೌಡ ತಮ್ಮ ಸ್ವಗ್ರಾಮ ಹೊನ್ನಳ್ಳಿಯಲ್ಲಿ ಒಂದು ಸುಸಜ್ಜಿತ ಮನೆಯನ್ನು ಕಟ್ಟಲಿಲ್ಲ. ಇದ್ದ ಮನೆಗೆ ಹೊಗಲು ಸುಲಭವಾಗಿ ವಾಹನ ತೆರಳಲು ಸರಿಯಾದ ರಸ್ತೆಯೂ ಇರಲಿಲ್ಲ. ಕೊನೆಯ ಉಸಿರು ಎಳೆಯುವವರೆಗೂ ಬಡತನ ಅವರಿಗೆ ಜಹಗೀರು ಅನ್ನುವಂತಿತ್ತು.
ತುಳಸಿ ಗೌಡ ಭಾರತದ ಪ್ರಸಿದ್ಧ ಪರಿಸರವಾದಿ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಜನಿಸಿದರು. ೧೯೪೪ರಲ್ಲಿ ನಾರಾಯಣ ಮತ್ತು ನೀಲಿ ದಂಪತಿಗಳಿಗೆ ಜನಿಸಿದ ತುಳಸಿ, ಹಾಲಕ್ಕಿ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಬಡತನದಲ್ಲಿ ಬೆಳೆದ ಅವರು ಔಪಚಾರಿಕ ಶಿಕ್ಷಣ ಪಡೆಯಲಿಲ್ಲ, ಆದರೆ ಪರಿಸರದ ಬಗ್ಗೆ ಅಪಾರ ಜ್ಞಾನವನ್ನು ಗಳಿಸಿ, ಅರಣ್ಯದ ವಿಶ್ವಕೋಶ ಎಂದೇ ಖ್ಯಾತರಾದರು. ತಮ್ಮ ಜೀವನದ ಬಹುತೇಕ ಭಾಗವನ್ನು ಮರಗಳನ್ನು ನೆಡುವುದಕ್ಕೆ ಮತ್ತು ಪರಿಸರ ಸಂರಕ್ಷಣೆಗೆ ಮೀಸಲಿಟ್ಟ ತುಳಸಿ ಗೌಡರು, ವೃಕ್ಷಮಾತೆ ಎಂಬ ಬಿರುದಿಗೆ ಪಾತ್ರರಾದರು.ತುಳಸಿ ಗೌಡರ ಬಾಲ್ಯ ತೀರಾ ಕಷ್ಟದಾಯಕವಾಗಿತ್ತು. ಎರಡು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡ ಅವರು, ತಾಯಿಯೊಂದಿಗೆ ಕೂಲಿ ಕೆಲಸ ಮಾಡುತ್ತಾ ಬೆಳೆದರು. ಚಿಕ್ಕ ವಯಸ್ಸಿನಲ್ಲೇ ಗೋವಿಂದ ಗೌಡ ಎಂಬುವವರನ್ನು ಮದುವೆಯಾದರೂ, ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡು ವಿಧವೆಯಾದರು.
ಈ ಎಲ್ಲಾ ಸವಾಲುಗಳ ನಡುವೆಯೂ, ತುಳಸಿ ಗೌಡರು ತಮ್ಮ ಜೀವನವನ್ನು ಪರಿಸರಕ್ಕಾಗಿ ಅರ್ಪಿಸಿದರು. ಅವರು ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡುತ್ತಾ ಜೀವನ ಸಾಗಿಸಿದರು ಮತ್ತು ಅರಣ್ಯ ಇಲಾಖೆಯ ಮತ್ತಿಘಟ್ಟ ನರ್ಸರಿಯಲ್ಲಿ ಸೇವೆ ಸಲ್ಲಿಸಿದರು. ಆರಂಭದಲ್ಲಿ ದಿನಕ್ಕೆ ಕೇವಲ ರೂಪಾಯಿ ಕೂಲಿಗೆ ಸಸಿಗಳನ್ನು ನೆಡುವ ಕೆಲಸ ಮಾಡಿದ ಅವರು, ಪ್ರತಿಫಲದ ಆಸೆ ಇಲ್ಲದೆ ತಮ್ಮ ಕಾರ್ಯವನ್ನು ಮುಂದುವರೆಸಿದರು.ತುಳಸಿ ಗೌಡರು ತಮ್ಮ ಜೀವನದಲ್ಲಿ ಲಕ್ಷಾಂತರ ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಿಗೆ ಗಿಡ-ಮರಗಳ ಬಗ್ಗೆ ಆಳವಾದ ಜ್ಞಾನವಿತ್ತು; ಯಾವ ಮರ ಯಾವ ಸಮಯದಲ್ಲಿ ಬೆಳೆಯುತ್ತದೆ, ಯಾವ ಗಿಡಕ್ಕೆ ಎಷ್ಟು ನೀರು ಬೇಕು ಎಂಬುದನ್ನು ಅವರು ನಿಖರವಾಗಿ ತಿಳಿದಿದ್ದರು. ಸಾಗವಾನಿ, ಬೀಟೆ, ಅತ್ತಿ, ಆಲ, ಹುನಾಲು ಮುಂತಾದ ಮರಗಳ ಬಗ್ಗೆ ಅವರಿಗೆ ವಿಶೇಷ ಪರಿಣತಿ ಇತ್ತು. ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರವೂ, ಅವರು ತಮ್ಮ ಕಾರ್ಯವನ್ನು ಮುಂದುವರೆಸಿದರು ಮತ್ತು ಯುವ ತಲೆಮಾರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದರು.ತುಳಸಿ ಗೌಡರ ಪರಿಸರ ಪ್ರೀತಿ ಮತ್ತು ಸಾಧನೆಗೆ ಅನೇಕ ಗೌರವಗಳು ಸಂದಿವೆ.
೧೯೮೬-೮೭ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ೧೯೯೯ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ರಾಜ್ಯ ಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಿದವು. ೨೦೨೧ರಲ್ಲಿ ಭಾರತ ಸರ್ಕಾರವು ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತು. ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.೨೦೨೪ರ ಡಿಸೆಂಬರ್ ೧೬ರಂದು, ೮೬ರ ವಯಸ್ಸಿನಲ್ಲಿ ತುಳಸಿ ಗೌಡರು ವಯೋಸಹಜ ಕಾಯಿಲೆಯಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದರು. ತುಳಸಿ ಗೌಡರು ತಮ್ಮ ಸರಳ ಜೀವನ ಮತ್ತು ಅಪಾರ ಸಾಧನೆಯ ಮೂಲಕ ಪರಿಸರ ಸಂರಕ್ಷಣೆಗೆ ಮಾದರಿಯಾಗಿ ಉಳಿದಿದ್ದಾರೆ. ಅವರ ಕೊಡುಗೆ ಭಾರತದ ಪರಿಸರ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನೆಲೆಗೊಂಡಿದೆ.
ಈಗಂತೂ ಸುತ್ತಮುತ್ತಮ ಇರುವ ಅರಣ್ಯವನ್ನೆಲ್ಲ ಮುಲಾಜಿಲ್ಲದೆ ಕಡಿದು ಅದರಲ್ಲಿ ಸೌಧ ಕಟ್ಟಿಕೊಳ್ಳುವ ವ್ಯಾವಹಾರಿಕ ಬುದ್ಧಿಯೇ ನಿತ್ಯೋತ್ಸವ ಆಚರಿಸುತ್ತಿದೆ. ಒಂದು ವ್ಯವಸ್ಥಿತವಾದ ಅರಣ್ಯ ಸೃಷ್ಟಿಯಾಗಬೇಕೆಂದರೆ, ನೂರಾರು ವರ್ಷಗಳೇ ಬೇಕಾಗುತ್ತವೆ. ಅದರೊಳಗಿನ ಜೀವ ವೈವಿಧ್ಯವನ್ನು ಕೋಟಿ ಕೋಟಿ ಸುರಿದರೂ ಕೂಡಾ ಮರುಸೃಷ್ಟಿ ಮಾಡಲು ಸಾಧ್ಯವೇ ಇಲ್ಲ. ಅರಣ್ಯವೊಂದು ರೂಪುಗೊಳ್ಳುವ ಸಂಕೀರ್ಣತೆಯ ಅರಿವಿರುವವರಿಗೆಲ್ಲ ಸಹಜವಾಗಿಯೇ ಅರಣ್ಯನಾಶದ ಬಗ್ಗೆ ಕೇಳಿದಾಗ, ನೋಡಿದಾಗ ಗಾಬರಿಯಾಗುತ್ತದೆ. ವಿಶೇಷವೆಂದರೆ ಯುಆವ ಅಕ್ಷರದ ಅರಿವೂ ಇಲ್ಲದ ತುಳಸಿ ಗೌಡ ಥರದ ಸಾಧಕರು ಅರಣ್ಯದ ಕಿಮ್ಮತ್ತನ್ನು ಸರಿಕಟ್ಟಾಗಿಯೇ ಗ್ರಹಿಸಿದ್ದಾರೆ. ಈ ಕಾರಣದಿಂದಲೇ ಗಿಡ ಮರಗಳನ್ನೇ ಸ್ವಂತ ಮಕ್ಕಳೆಂದುಕೊಂಡು ಪ;ಒರೆದು ಕಾಪಾಡಿಕೊಂಡಿದ್ದಾರೆ. ಈ ಮೂಲಕವೇ ಸಾವಿನಾಚೆಗೂ ಅಜರಾಮರವಾಗಿದ್ದಾರೆ.
ಹೀಗೆ ಹಸಿರಿಗಾಗಿಯೇ ಉಸಿರು ಮುಡಿಪಾಗಿಟ್ಟಿದ್ದ ತುಳಸಿ ಗೌಡ ಏಪ್ರಿಲ್ ತಿಂಗಳಲ್ಲಿ ಪಾರ್ಶ್ವವಾಯು ಪೀಡಿತರಾದರು. ಸಾಕಷ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ವೈದ್ಯರು ಕೈಚೆಲ್ಲಿದ್ದರು. ಕಡೆಗೂ ಅವರ ಆಸೆಯಂತೆ ಅವರನ್ನು ವಾಪಸ್ಸು ಸ್ವಗ್ರಾಮಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಅದೊಂದು ಸಾಯಂಕಾಲ ಪುತ್ರ ಸುಬ್ಬರಾಯ, ಪುತ್ರಿ ಸೋಮಿಯರನ್ನು ಬಿಟ್ಟು ಅಗಲಿದ ತುಳಸಿಗೌಡ ತಮ್ಮ ಜೊತೆಗೆ ಅಪಾರವಾದ ಕಾಡಿನ ಹಾಗೂ ವೃಕ್ಷಗಳ ಜ್ಞಾನ ಬಂಢಾರವನ್ನೆ ಬಿಟ್ಟು ಹೊಗಿದ್ದಾರೆ. ದೆಹಲಿಯಲ್ಲಿ ಭೇಟಿಯಾಗಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಅಂಕೋಲಾದಲ್ಲಿ ಕಂಡಿದ್ದ ಪ್ರಧಾನಿ ನರೇಂದ್ರ ಮೋದಿ ತುಳಸಿಗೌಡರ ಅಮಾಯಕತೆ ಹಾಗೂ ಅರಣ್ಯದ ಕುರಿತಾದ ಪಾಂಡಿತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಾದರಿಯಾಗಿ ಬದುಕಿ ಬಾಳಿದ್ದ ಆ ಹಿರಿಯ ಜೀವಕ್ಕೊಂದು ಶ್ರದ್ಧಾಂಜಲಿ.