ಈ ರಂಗಿನ್ ದುನಿಯಾ ಹೊರಗಿನಿಂದ ಎಷ್ಟು ಕಲರ್ ಫುಲ್ ಆಗಿದೆಯೋ ಅಷ್ಟೇ ಕರಾಳತೆಯನ್ನ ತನ್ನೊಡಲೊಳಗೆ ಅವಿತಿಟ್ಟುಕೊಂಡಿದೆ. ಈಗಾಗಲೇ ಹಲವು ಕಲಾವಿದೆಯರು ಸಿನಿಲೋಕದ ಆ ಕರಾಳ ಮುಖದ ದರ್ಶನ ಮಾಡಿಸಿದ್ದಾರೆ. ಪಾತ್ರಕ್ಕಾಗಿ ಪಲ್ಲಂಗಕ್ಕೆ ಕರೆಯುವ, ಅವಕಾಶಕ್ಕಾಗಿ ಹಾಸಿಗೆ ಏರಿ ಎನ್ನುವ ಕೀಚಕರ ಕರಾಳ ಮುಖವನ್ನ ಬಟಾಬಯಲು ಮಾಡಿದ್ದಾರೆ. ಹಲವರು ಹಣದ ಆಮಿಷೆಗೆ, ಅವಕಾಶಗಳ ಆಸೆಗೆ ಬಲಿಯಾದರೆ, ಕೆಲವರು ನೀವು ಕೊಡುವ ದುಡ್ಡು ಬೇಡ, ನಿಮ್ಮ ಚಾನ್ಸು ಬೇಡ ಅಂತ ಮೈಕೊಡವಿಕೊಂಡು ಅಲ್ಲಿಂದ ಎದ್ದುಬಂದಿದ್ದಾರೆ. ಕಾಸ್ಟಿಂಗ್ ಕೌಚ್ ಹೆಸ್ರಲ್ಲಿ ನಡೆಯುವ ಕರಾಳ ದಂಧೆಯನ್ನ ಜಗಜ್ಜಾಹೀರು ಮಾಡೋದಲ್ಲದೇ, ಮೀಟೂ ಕೇಸ್ ಜಡಿದು ಜಗತ್ತಿನ ಮುಂದೆ ಅವ್ರನ್ನೆಲ್ಲಾ ಬೆತ್ತಲ್ಲಾಗಿಸಿದ್ದಾರೆ. ಕೆಲವು ಹೆಸರು ಹೇಳೋದಕ್ಕೆ ಆಗದೇ ತಮಗಾಗ ಕಹಿ ಅನುಭವ ಹಂಚಿಕೊಂಡು ಕಣ್ಣೀರು ಸುರಿಸಿದ್ದಾರೆ. ಈ ಸಾಲಿಗೆ ನಟಿ ಲತಾ ರಾವ್ ಸೇರ್ಪಡೆಗೊಂಡಿದ್ದಾರೆ.
ಲತಾ ರಾವ್ ಬಹುಭಾಷಾ ನಟಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಪಂಚಭಾಷೆಯಲ್ಲೂ ನಟಿ ಸೈ ಎನಿಸಿಕೊಂಡಾಕೆ. ಸಿನಿಮಾ, ಸೀರಿಯಲ್ನಲ್ಲಿ ಅಭಿನಯಿಸಿ ಅಪಾರ ಅಭಿಮಾನಿ ಬಳಗ ಸಂಪಾದನೆ ಮಾಡಿಕೊಂಡಿರುವ ಈ ನಟಿ ಕೂಡ ಅವಕಾಶಗಳ ಕೊರತೆಯನ್ನ ಎದುರಿಸಿದ್ದಾರೆ.ಒಂದು ಕಾಲದಲ್ಲಿ ಅನೇಕ ಅವಕಾಶಗಳನ್ನು ಹೊಂದಿದ್ದ ಲತಾ ಅವರು ಇದೀಗ ಅವಕಾಶಗಳಿಂದ ವಂಚಿತರಾಗಿದ್ದು ತೆರೆಮರೆಗೆ ಸರಿದಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣವೇ ಮತ್ತೊಮ್ಮೆ ನಮ್ಮನ್ನು ದಿಗ್ಭ್ರಾಂತಗೊಳಿಸುವಂತಿದೆ . ಹೌದು ಈ ವರೆಗೂ ಹಲವು ನಿರ್ಮಾಪಕರು,ನಿರ್ದೇಶಕರು,ನಟರು ಅವಕಾಶ ಕೊಡುವುದಾಗಿ ಹೇಳಿ ಈ ನಟಿಯನ್ನೂ ಮಂಚಕ್ಕೆ ಕರೆದಿದ್ದಾರಂತೆ. ಆದರೆ ಈವರೆಗೂ ಅಂತಹ ರಾಜಿಗೆ ಒಗ್ಗಿಕೊಂಡಿಲ್ಲವಾಗಿ ನಟಿ ಹೇಳಿಕೊಂಡಿದ್ದಾರೆ.
ಕೆಲವು ನಟಿಯರು ಅವಕಾಶವನ್ನು ಗಿಟ್ಟಿಸಿಕೊಳ್ಳಲು ಮಂಚವನ್ನುಹಂಚಿಕೊಳ್ತಾರೆ. ಅಷ್ಟಕ್ಕೂ,ಸಿನಿ ಲೋಕದಲ್ಲಿ ಇದು ಹೊಸದೇನಲ್ಲ. ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಅನಿಷ್ಟ ಪದ್ಧತಿ ಇತರೆ ಕ್ಷೇತ್ರಗಳಿಗೂ ಆವರಿಸುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ರಾಜಿಗಳನ್ನು ಕೆಲವು ವ್ಯಕ್ತಿಗಳು ಒಂದು ಹೆಗ್ಗುರುತನ್ನು ಪಡೆಯಲು ಅಥವಾ ತಮ್ಮ ವೃತ್ತಿಜೀವನದ ಉತ್ತುಂಗಕ್ಕೆ ಏರಲು ಮಾಡುತ್ತಾರೆ ಎಂದು ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಇಂತಹ ಕೆಟ್ಟ ಆಚರಣೆಯ ಭಾಗವಾಗದಿರುವ ನನ್ನ ನಿರ್ಧಾರದಿಂದ ನಾನು ಅನೇಕ ಅವಕಾಶಗಳನ್ನು ಕಳೆದುಕೊಂಡಿರುವೆ. ಮಂಚ ಹಂಚಿಕೊಳ್ಳುವಂತೆ ನನಗೂ ಒತ್ತಾಯ ಮಾಡಿದ್ದರು. ಆದರೆ, ನಾನು ಯಾವ ಆಮಿಷಕ್ಕೂ ಬಲಿಯಾಗಲಿಲ್ಲ ಎಂದು ಹೇಳುವ ಮೂಲಕ ಆತಂಕಕಾರಿ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ.
ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೀರಿಯಲ್ಸ್ನಲ್ಲಿ ನಟಿಸಿರುವ ನಟಿ ಲತಾ ರಾವ್ ಅವರು ಕನ್ನಡ ಕೋಟಿಗೊಬ್ಬ 2 ಹಾಗೂ ತಮಿಳಿನಲ್ಲಿ ಜಯಂ ರವಿ ಅಭಿನಯದ ಥಿಲ್ಲಾಲಂಗಡಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಸಿನೆಮಾ ಮಾತ್ರವಲ್ಲದೇ ಸೀರಿಯಲ್ಸ್ ನಟನೆಯ ಮೂಲಕ ಜನಪ್ರಿಯರಾಗಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವೆಂದರೆ ತಪ್ಪಲ್ಲ. ಇಂಥಹ ಅಸಹ್ಯ ಎಲ್ಲಾ ಕ್ಷೇತ್ರಕ್ಕೂ ಹಬ್ಬಿಕೊಳ್ತಿರೋದನ್ನು ಒಗ್ಗಟ್ಟಾಗಿ ತಡಯಲೇ ಬೇಕಾಗಿದೆ ಎಂದಿದ್ದಾರೆ.