ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ಮತ್ತು ಸಾಹಸ ಸಂಯೋಜಕನಾಗಿ ಗುರುತಿಸಿಕೊಂಡಿರುವ ಥ್ರಿಲ್ಲರ್ ಮಂಜು ಸುಮಾರು ಹದಿನೈದು ವರ್ಷಗಳ ಬಳಿಕ ಸಿನಿಮಾವೊಂದಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅಂದಹಾಗೆ, ಥ್ರಿಲ್ಲರ್ ಮಂಜು ಆ್ಯಕ್ಷನ್-ಕಟ್ ಹೇಳಿರುವ ಈ ಸಿನಿಮಾಕ್ಕೆ ‘ಡೆಡ್ಲಿ ಕಿಲ್ಲರ್’ ಎಂದು ಹೆಸರಿಡಲಾಗಿದೆ.
ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಮೂಡಿಬಂದಿರುವ ‘ಡೆಡ್ಲಿ ಕಿಲ್ಲರ್’ ಸಿನಿಮಾವನ್ನು ‘ಕೀರ್ತಿ ಸಿಲ್ವರ್ ಸ್ಕ್ರೀನ್’ ಹಾಗೂ ‘ವೇದಿಕ್ ಕಾಸ್ಮಾಸ್’ ಬ್ಯಾನರಿನಲ್ಲಿ ಪ್ರಶಾಂತ್ ಟಿ. ತಂಬ್ರಳ್ಳಿಮಠ ನಿರ್ಮಿಸಿದ್ದಾರೆ. ವಿಭಿನ್ನವಾದ ಆ್ಯಕ್ಷನ್, ಥ್ರಿಲ್ಲರ್, ಹಾರರ್ ಕಥಾಹಂದರ ಒಳಗೊಂಡ ‘ಡೆಡ್ಲಿ ಕಿಲ್ಲರ್’ ಸಿನಿಮಾ ಈಗ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ ಬಿಡುಗಡೆಗೆ ಸಿದ್ದವಾಗಿದೆ.
ಇತ್ತೀಚೆಗಷ್ಟೇ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಕೊಡದೆ ‘ಡೆಡ್ಲಿ ಕಿಲ್ಲರ್’ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಈ ಚಿತ್ರದಲ್ಲಿ ಯುವನಟ ಅಭಯ್ವೀರ್ ಹಾಗೂ ನಿವೀಕ್ಷಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಐವರು ವಿಲನ್ಗಳ ಜೊತೆ ಹುಡುಗಿಯೊಬ್ಬಳನ್ನು ಪೊಲೀಸರು ಆಂಧ್ರ ಪ್ರದೇಶದಲ್ಲಿ ಬಂಧಿಸಿ, ಕರ್ನಾಟಕಕ್ಕೆ ಕರೆತರುವಾಗ ಮಾರ್ಗ ಮದ್ಯೆ ಕಾಡಲ್ಲಿ ಅವರುಗಳು ಪೊಲೀಸರಿಂದ ಎಸ್ಕೇಪ್ ಆಗುತ್ತಾರೆ, ಅಲ್ಲಿಂದ ಅವರು ರಕ್ಷಣೆಗಾಗಿ ಕಾಡಲ್ಲಿರುವ ಮನೆಯೊಂದಕ್ಕೆ ಹೋಗುತ್ತಾರೆ. ನಂತರ ಅವರೆಲ್ಲ ಅದೇ ಮನೆಯಲ್ಲಿ ಲಾಕ್ ಆಗಿಬಿಡುತ್ತಾರೆ, ಮುಂದೇನಾಯ್ತು ಎಂಬುದೇ ಚಿತ್ರದ ಕಥಾಹಂದರ ಎನ್ನುತ್ತದೆ ಚಿತ್ರತಂಡ.
ಈ ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ವಿನು ಮನಸು ಸಂಗೀತ ಸಂಯೋಜನೆ ಮಾಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ದೀಪು ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ 7 ವಿಶಿಷ್ಠವಾದ ಸಾಹಸ ದೃಶ್ಯಗಳಿದ್ದು, ನಿರ್ದೇಶಕ ಥ್ರಿಲ್ಲರ್ ಮಂಜು ಅವರೇ ಎಲ್ಲಾ ಆಕ್ಷನ್ ಗಳನ್ನು ಕಂಪೋಜ್ ಮಾಡಿದ್ದಾರೆ. ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್ ಮುಂತಾದವರು ಈ ಚಿತ್ರದ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ‘ಡೆಡ್ಲಿ ಕಿಲ್ಲರ್’ ಚಿತ್ರವು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕ ಥ್ರಿಲ್ಲರ್ ಮಂಜು ತಿಳಿಸಿದ್ದಾರೆ.