ಬಿಗ್ ಬಾಸ್ ವಿಜೇತ ನಟ ರೂಪೇಶ್ ಶೆಟ್ಟಿ ಅಭಿನಯದ ‘ಅಧಿಪತ್ರ’ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮತ್ತು ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.
ಮುಹೂರ್ತದ ಬಳಿಕ ಮಾತನಾಡಿದ ನಟ ರೂಪೇಶ್ ಶೆಟ್ಟಿ, ‘ಬಿಗ್ ಬಾಸ್ ಆದ್ಮೇಲೆ ಕನ್ನಡ ಸಿನಿಮಾ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಬಿಗ್ ಬಾಸ್ ಗೂ ಮುಂಚೆ ‘ಸರ್ಕಸ್’ ಎಂಬ ತುಳು ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದೆ. ಆ ಚಿತ್ರದ ಕೆಲಸ ತುಂಬಾ ಇತ್ತು. ಈ ಚಿತ್ರದ ಕೆಲಸ ಮುಗಿಸಿ ಬೇರೆ ಸಿನಿಮಾದ ಒಪ್ಪಿಕೊಳ್ಳುವುದು ಎಂದು ತೀರ್ಮಾನ ಮಾಡಿದ್ದೆ. ದೇವರ ದಯೆಯಿಂದ ಆ ಚಿತ್ರ ಹಿಟ್ ಆಗಿದೆ. 150 ಥಿಯೇಟರ್ ಗಳಲ್ಲಿ ಓಡಿದೆ. ‘ಅಧಿಪತ್ರ’ ಸಿನಿಮಾ ನಿರ್ದೇಶಕರು ಕಥೆ ಹೇಳಿದಾಗ ಇಂಟ್ರೆಸ್ಟ್ ಎನಿಸಿತು. ಅವರ ಮೊದಲ ಸಿನಿಮಾವಾದರೂ ಸ್ಕ್ರೀನ್ ಪ್ಲೇ ವಿವರಿಸಿದಾಗ ಎಷ್ಟು ತಯಾರಾಗಿದ್ದರೂ ಎಂದರೆ ಪ್ರತಿ ಸೀನ್ ಡ್ರಾಯಿಂಗ್ ಮಾಡಿಕೊಂಡಿದ್ದರು. ನನಗೆ ಅದನ್ನು ನೋಡಿ ತುಂಬಾ ಧೈರ್ಯ ಬಂತು. ಅವರಿಗೆ ಒಂದು ವಿಷನ್ ಇದೆ. ಈ ಕಾರಣದಿಂದ ಅಧಿಪತ್ರ ಸಿನಿಮಾ ಒಪ್ಪಿಕೊಂಡಿದ್ದೇನೆ. ಸದ್ಯದಲ್ಲಿ ಈ ಚಿತ್ರಕ್ಕಾಗಿ ನನ್ನ ಗೆಟಪ್ ಬದಲಾಗಲಿದೆ’ ಎಂದರು.
ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ, ಅಲ್ಲಿಂದ ಕಿರುತೆರೆ ರಿಯಾಲಿಟಿ ಶೋಗಳಲ್ಲಿಯೂ ಕಣಕ್ಕಿಳಿದು ಇದೀಗ ನೇರವಾಗಿ ಸಿನಿಮಾ ನಾಯಕಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರೂಪೇಶ್ ಶೆಟ್ಟಿ ‘ಅಧಿಪತ್ರ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ನಟಿ ಜಾಹ್ನವಿ ಮಾತನಾಡಿ, ‘ಈ ಸಿನಿಮಾದ ಟೈಟಲ್ ತುಂಬಾ ಕ್ಯಾಚಿಯಾಗಿದೆ. ನನ್ನ ಪಾತ್ರದ ಹೆಸರು ಬೃಹತಿ. ನನ್ನ ಪಾತ್ರದ ರೀತಿ ಸಿನಿಮಾದ ಇತರೆ ಎಲ್ಲಾ ಪಾತ್ರದ ಹೆಸರು ಕೂಡ ವಿಭಿನ್ನವಾಗಿದೆ. ಈ ಸಿನಿಮಾ ತುಂಬಾ ಪಾಸಿಟಿವ್ ಆಗಿದೆ’ ಎಂದರು.
‘ರೂಪೇಶ್ ಶೆಟ್ಟಿ ಹುಟ್ಟಹಬ್ಬಕ್ಕೆ ಟೈಟಲ್ ಅನೌನ್ಸ್ ಮಾಡಿದ್ದೆವು. ಆ ದಿನವೇ ನಮಗೆ ಒಳ್ಳೆ ಸಹಕಾರ ಸಿಕ್ಕಿದೆ. ರೂಪೇಶ್ ಶೆಟ್ಟಿ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಲಿದ್ದಾರೆ. ಗಣೇಶ್ ಹಬ್ಬದ ಬಳಿಕ ಶೂಟಿಂಗ್ ಶುರುವಾಗಲಿದೆ. ಚಿತ್ರದಲ್ಲಿ ಎರಡು ಹಾಡುಗಳಿವೆ’ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಚಯನ್ ಶೆಟ್ಟಿ. ‘ಕೆ ಆರ್ ಸಿನಿಕಂಬೈನ್ಸ್’ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ‘ಅಧಿಪತ್ರ’ ನೈಜ ಘಟನೆಯಿಂದ ಸ್ಫೂರ್ತಿ ಪಡೆದಿದ್ದು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.