ನಟ ಪ್ರಥಮ್ ಅಭಿನಯಿಸಿ, ನಿರ್ದೇಶಿಸಿರುವ ‘ಕರ್ನಾಟಕದ ಅಳಿಯ’ ಸಿನಿಮಾದ ಮೊದಲ ರೊಮ್ಯಾಂಟಿಕ್ ಹಾಡು, ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ನಟ ಶಶಿಕುಮಾರ್ ‘ಕರ್ನಾಟಕದ ಅಳಿಯ” ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಕರ್ನಾಟಕದ ಅಳಿಯ’ ಸಿನಿಮಾದ ‘ಮನಸಿಗೆ ಹಿಡಿಸಿದನು ಇವನು…’ ಎಂಬ ಈ ಹಾಡಿಗೆ ಕೆ. ರಾಮನಾರಾಯಣ್ ಸಾಹಿತ್ಯವಿದ್ದು, ಪ್ರದ್ಯೊತನ್ ಸಂಗೀತ ಸಂಯೋಜಿಸಿದ್ದಾರೆ. ಅದಿತಿ ಸಾಗರ್ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ವಿದೇಶದಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಲಾಗಿದ್ದು, ನಾಯತ ನಟ ಪ್ರಥಮ್ ಜೊತೆಗೆ ನಾಯಕಿ ಅಕ್ಷಿತಾ ಬೋಪಯ್ಯ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
‘ಕರ್ನಾಟಕದ ಅಳಿಯ’ ಕಾಮಿಡಿ ಕಂ ಹಾರರ್-ಥ್ರಿಲ್ಲರ್ ಶೈಲಿಯ ಸಿನಿಮಾ. ಇಡೀ ಸಿನಿಮಾದ ಕಥಾಹಂದರ ವಾಮಾಚಾರದ ಕುರಿತಾಗಿ ನಡೆಯುತ್ತದೆ. ಸುಮಾರು ಮೂವತ್ತು ವರ್ಷಗಳ ಹಿಂದೆ, ಇದೇ ಥರದ ಕಥೆಯನ್ನು ಹೊಂದಿದ್ದ, ‘ತುಳಸಿದಳ’ ಎಂಬ ಸಿನಿಮಾ ಬಂದಿತ್ತು. ಅದಾದ ನಂತರ ದೀರ್ಘವಾಗಿ ವಾಮಾಚಾರದ ಕುರಿತು ಬಂದಿರುವ ಸಿನಿಮಾ ಇದೇ ಆಗಿದೆ ಎಂಬುದು ನಾಯಕ ನಟ ಕಂ ನಿರ್ದೇಶಕ ಪ್ರಥಮ್ ಮಾತು.

‘ಕರ್ನಾಟಕದ ಅಳಿಯ’ ಸಿನಿಮಾದಲ್ಲಿ ನಟ ಪ್ರಥಮ್ ಜೊತೆಗೆ ಹಿರಿಯ ನಟ ರಾಘವೇಂದ್ರ ರಾಜಕುಮಾರ್, ಜ್ಯೊತಿ, ಸ್ಪರ್ಶ ರೇಖಾ, ಓಂಪ್ರಕಾಶ್ ರಾವ್, ರಾಮಕೃಷ್ಣ, ಕೋಟೆ ಪ್ರಭಾಕರ್, ಶ್ರೀಧರ್, ವಿ. ಮನೋಹರ್, ರಮೇಶ್ ಭಟ್ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಹಾಡಿನ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ‘ಕರ್ನಾಟಕದ ಅಳಿಯ’ ಇದೇ ನವೆಂಬರ್ ವೇಳೆಗೆ ಥಿಯೇಟರಿಗೆ ಬರುವ ಯೋಚನೆಯಲ್ಲಿದ್ದಾನೆ.





