ಲೋಕೇಶ್ ಕನಗರಾಜ್…. ಈ ಹೆಸರು ಸಿನಿದುನಿಯಾದಲ್ಲಿ ಸೃಷ್ಟಿಸಿರುವ ಸಂಚಲನ ಎಂತಹದ್ದು ಅನ್ನೋದು ಬಹುಷಃ ನಿಮ್ಮೆಲ್ಲರಿಗೂ ತಿಳಿದಿರುತ್ತೆ. ಇವತ್ತಿಗೆ ಈ ಹೆಸರು ಕೇಳಿದರೆ ಸೌತ್-ನಾರ್ತ್ ಸಿನಿದುನಿಯಾ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಬೆರಗುಗೊಳ್ಳುತ್ತೆ. ಲೋಕೇಶ್ ಕನಗರಾಜ್ ಕಲ್ಪನೆಯಲ್ಲಿ ತಯಾರಾಗುವ ಸಿನಿಮಾಗಳನ್ನು ಬರಮಾಡಿಕೊಳ್ಳೋಕೆ ಬೆಳ್ಳಿಪರದೆ ಹಾಗೂ ಬಾಕ್ಸ್ ಆಫೀಸ್ ಕೂಡ ಅಷ್ಟೇ ಕುತೂಹಲದಿಂದ ಎದುರುನೋಡುತ್ತೆ. ಅಷ್ಟರ ಮಟ್ಟಿಗೆ ಸಿನಿಮಾ ಲೋಕದಲ್ಲಿ ತಮ್ಮದೊಂದು ಛಾಪು ಮೂಡಿಸಿರುವ, ಬಜಾರ್ ನಲ್ಲಿ ಕಂಡು ಕೇಳರಿಯದ ಕ್ರೇಜ್ ಸೃಷ್ಟಿಸಿರುವ ಲೋಕೇಶ್ ಕನಗರಾಜ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅವರು ನೀಡಿದ ಸ್ಟೇಟ್ಮೆಂಟ್ ದೊಡ್ಡ ದೊಡ್ಡ ಸ್ಟಾರ್ಸ್ಗಳಿಗೆ ಮತ್ತು ಪ್ರೊಡ್ಯೂಸರ್ಸ್ ಗಳಿಗೆ ಆಘಾತವನ್ನುಂಟುಮಾಡಿದೆ. ಜೊತೆಗೆ ಸಿಲ್ವರ್ ಸ್ಕ್ರೀನ್ ಮತ್ತು ಗಲ್ಲಾಪೆಟ್ಟಿಗೆಯನ್ನ ಥಂಡಾ ಹೊಡೆಸಿದೆ. ಅಷ್ಟಕ್ಕೂ, ಲೋಕೇಶ್ ಕನಗರಾಜ್ ಕೊಟ್ಟ ಹೇಳಿಕೆಯಾದ್ರೂ ಏನು? ಅದ್ಯಾಕೆ ಇಂತಹದ್ದೊಂದು ನಿರ್ಧಾರವನ್ನು ಕೈಗೊಂಡರು? ಅವರ ಮುಂದಿನ ನಡೆಯಾದರೂ ಯಾವುದು? ಹೀಗೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದೆಲ್ಲದಕ್ಕೂ ಉತ್ತರ ಕೊಡುವ ಕಥನ ಇಲ್ಲಿದೆ ಓದಿ

ಲೋಕೇಶ್ ಕನಗರಾಜ್… ಕಾಲಿವುಡ್ನ ಸೆನ್ಸೇಷನಲ್ ಡೈರೆಕ್ಟರ್. ತಮಿಳು ಚಿತ್ರರಂಗದ ಮಾಸ್ಟರ್ ಪೀಸ್ ಡೈರೆಕ್ಟರ್ ಗಳಲ್ಲಿ ಈಗ ಇವರು ಸೇರಿಕೊಂಡಿದ್ದಾರೆ. ಕಣಕ್ಕಿಳಿದ ಆರೇಳು ವರ್ಷಗಳಲ್ಲಿ ತನ್ನ ಕ್ಯಾಲಿಬರ್ ಏನು ಅನ್ನೋದನ್ನ ಬರೀ ಕಾಲಿವುಡ್ಗೆ ಮಾತ್ರವಲ್ಲ ಭಾರತೀಯ ಚಿತ್ರರಂಗಕ್ಕೆ ತಿಳಿಸಿಕೊಟ್ಟಿದ್ದಾರೆ. ಡೈರೆಕ್ಟ್ ಮಾಡಿರುವುದು ನಾಲ್ಕೈದು ಸಿನಿಮಾಗಳಾದರೂ ಕೂಡ ಸಿನಿದುನಿಯಾದಲ್ಲಿ ಮಿಂಚಿನ ಸಂಚಲನವನ್ನೇ ಸೃಷ್ಟಿಸಿದ್ದಾರೆ. 10 ಕೋಟಿ ಬಜೆಟ್ ಹಾಕಿದರೆ 100 ಕೋಟಿ, 100 ಕೋಟಿ ಇನ್ವೆಸ್ಟ್ ಮಾಡಿದರೆ 500 ಕೋಟಿ ಕೊಳ್ಳೆಹೊಡೆದು ಕೊಡುವ ತಾಕತ್ತೂ, ತಾನು ಹೊಸೆಯೋ ಸಿನಿಮಾ ಕಥೆಗಿದೆ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಹಾಲಿವುಡ್ ಲೆವೆಲ್ ಮೇಕಿಂಗ್ ಮಾಡಿ ತೋರಿಸಿದ್ದಾರೆ. ಐದಾರು ಜನ ಸೂಪರ್ ಸ್ಟಾರ್ ಗಳನ್ನ ಒಂದೇ ಸ್ಕ್ರೀನ್ ಮೇಲೆ ತಂದು ಬಿಗ್ ಸ್ಕ್ರೀನ್ ಶೇಕ್ ಮಾಡುವುದರ ಜೊತೆಗೆ ಆಯಾ ಸ್ಟಾರ್ ನಟರ ಅಭಿಮಾನಿಗಳಿಂದ ಜೈಕಾರ ಹಾಕಿಸಿಕೊಂಡಿದ್ದಾರೆ. ಅಂದ್ಹಾಗೇ, ಐದಾರು ಜನ ಸ್ಟಾರ್ ನಟರನ್ನು ಹಾಕ್ಕೊಂಡು ಸಿನಿಮಾ ಮಾಡಿ ಗೆಲ್ಲೋದು ಅಷ್ಟು ಸುಲಭವಲ್ಲ. ಒಂದು ಪಾತ್ರದ ತೂಕ ಕೊಂಚ ಆಚೀಚೆಯಾದರೂ, ಆಯಾ ಸ್ಟಾರ್ ನಟರ ಫ್ಯಾನ್ಸ್ ರೊಚ್ಚಿಗೇಳ್ತಾರೆ. ನಮ್ ಬಾಸ್ ಗೆ ಕೊಟ್ಟಿರುವ ಪಾತ್ರ ಗತ್ತಿನಿಂದ ಕೂಡಿಲ್ಲ, ನಮ್ಮ ಬಾಸ್ ಗೆ ಸ್ಕ್ರೀನ್ ಸ್ಪೇಸ್ ಜಾಸ್ತಿಕೊಟ್ಟಿಲ್ಲ ಅಂತ ಕೆಂಡಕಾರುತ್ತಾರೆ. ಆದರೆ, ಲೋಕೇಶ್ ಕನಗರಾಜ್ `ವಿಕ್ರಮ್’ ಸಿನಿಮಾದಲ್ಲಿ ಘಟಾನುಘಟಿ ತಾರೆಯರನ್ನು ಒಟ್ಟುಗೂಡಿಸಿ ಸೈ ಎನಿಸಿಕೊಂಡರು. ಕಮಲ್ಹಾಸನ್, ಫಹಾದ್ ಫಾಸಿಲ್, ವಿಜಯ್ ಸೇತುಪತಿ, ಸೂರ್ಯ, ಕಾರ್ತಿ ಹೀಗೆ ಅತಿರಥ-ಮಹಾರಥರನ್ನೆಲ್ಲಾ ತೆರೆಮೇಲೆ ತಂದು ಇಡೀ ಮಾಯಲೋಕವನ್ನೇ ಮೆಚ್ಚಿಸಿದರು.
ಈಗ `ಲಿಯೋ’ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲು ರೆಡಿಯಾಗಿದ್ದಾರೆ. ಮಾಸ್ಟರ್ ನಂತರ ದಳಪತಿ ವಿಜಯ್ ಜೊತೆ ಕೈಜೋಡಿಸಿರುವ ಲೋಕೇಶ್, ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಣಕ್ಕಿಳಿಯಲು ಹೊರಟಿದ್ದಾರೆ. ವಿಶೇಷ ಅಂದರೆ ತಮ್ಮ `ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್’ ಕಾನ್ಸೆಪ್ಟ್ ನ `ಲಿಯೋ’ದಲ್ಲೂ ತಂದಿದ್ದಾರೆ. ಕೈಥಿ ಹಾಗೂ ವಿಕ್ರಮ್ ಸಿನಿಮಾದ ಪಾತ್ರಗಳನ್ನ `ಲಿಯೋ’ದಲ್ಲಿ ಕಂಟಿನ್ಯೂ ಮಾಡುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ಏಜೆಂಟ್ ಅರುಣ್ ಕುಮಾರ್ (ಕಮಲ್ ಹಾಸನ್), ಏಜೆಂಟ್ ಅಮರ್ (ಫಹಾದ್ ಫಾಸಿಲ್) ರೊಲೆಕ್ಸ್ (ಸೂರ್ಯ) ಸ್ಪೆಷಲ್ ಎಂಟ್ರಿ ಕುರಿತಾದ ಸುದ್ದಿ ಹೊರಬಿದ್ದಿರುವ ಕಾರಣ ಸಿನಿಮಾ ಪ್ರೇಮಿಗಳು `ಲಿಯೋ’ ನೋಡಲು ಕಣ್ಣರಳಿಸಿದ್ದಾರೆ. ಇನ್ನೂ ವಿಕ್ರಮ್ ಸಿನಿಮಾದಂತೆಯೇ `ಲಿಯೋ’ ಚಿತ್ರದಲ್ಲೂ ಅತೀ ದೊಡ್ಡ ತಾರಾಬಳಗ ಇದೆ. ಬಾಲಿವುಡ್ ಮುನ್ನಭಾಯ್ ಸಂಜಯ್ ದತ್ತ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ತ್ರಿಷಾ, ಪ್ರಿಯಾ ಆನಂದ್ ಸೇರಿದಂತೆ ಬಿಗ್ಸ್ಟಾರ್ಸ್ಗಳ ಸಮಾಗಮ ಈ ಚಿತ್ರದಲ್ಲಾಗಿದೆ. ಇದೇ ಅಕ್ಟೋಬರ್ 19ರಂದು ಐದು ಭಾಷೆಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಈ ನಡುವೆ ಲಿಯೋ ಪಾರ್ಟ್-2 ಬಗ್ಗೆ ಚರ್ಚೆಯಾಗ್ತಿದ್ದು, ಲೋಕೇಶ್ ಕನಗರಾಜ್ ಕೊಟ್ಟ ಸ್ಟೇಟ್ಮೆಂಟ್ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.
ಹೌದು, ಲಿಯೋ ಸಿನಿಮಾದ ಪ್ರಮೋಷನ್ಗಾಗಿ ಓಡಾಡ್ತಿರುವ ಲೋಕೇಶ್ ಕನಗರಾಜ್, ಸಂದರ್ಶನವೊಂದರಲ್ಲಿ ಲಿಯೋ ಸೀಕ್ವೆಲ್ ಕುರಿತಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಈಗಲೇ ಪಾರ್ಟ್2 ಬಗ್ಗೆ ಏನನ್ನು ಹೇಳಲಾರೆ ಎಂದಿರುವ ಲೋಕೇಶ್, ಮುಂದಿನ ಸಿನಿಮಾ `ತಲೈವರ್-171′ ಎಂಬುದನ್ನು ಖಚಿತಪಡಿಸಿದ್ದಾರೆ. ಈಗಾಗಲೇ ತಲೈವಾ ಹಾಗೂ ಕನಗರಾಜ್ ಕಾಂಬಿನೇಷನ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಕೈಥಿ, ಮಾಸ್ಟರ್, ವಿಕ್ರಮ್ ನಂತಹ ಬ್ಲಾಕ್ಬಸ್ಟರ್ ಹಿಟ್ ಚಿತ್ರ ಕೊಟ್ಟಿರುವ ಲೋಕೇಶ್ಗೆ ಶಿವಾಜಿ ಕಾಲ್ಶೀಟ್ ಸಿಕ್ಕಿದೆ. ಪಡೆಯಪ್ಪನಿಗೆ ಆ್ಯಕ್ಷನ್ ಕಟ್ ಹೇಳುವ ಮಹತ್ತರ ಕನಗರಾಜ್ ಕನಸು ನನಸಾಗಿದೆ. ಕಾರ್ತಿ, ದಳಪತಿ ವಿಜಯ್, ಕಮಲ್ ಹಾಸನ್, ಸೂರ್ಯ, ಫಹಾದ್ ಫಾಸಿಲ್ ರನ್ನು ನಯಾ ಅವತಾರದಲ್ಲಿ ತೋರಿಸಿ ಸಂಚಲನ ಮೂಡಿಸಿದ ಲೋಕೇಶ್ ಕನಗರಾಜ್, ಭಾಷಾನಾ ಅದೆಷ್ಟು ವಿಭಿನ್ನವಾಗಿ ತೋರಿಸಬಹುದು ಎನ್ನುವ ಲೆಕ್ಕಚ್ಚಾರ ಅಭಿಮಾನಿ ವಲಯದಲ್ಲಿ ಈಗಾಗಲೇ ಶುರುವಾಗಿದೆ. ಈ ಡೆಡ್ಲಿ ಕಾಂಬಿನೇಷನ್ ಚಿತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆಯಾದ ಸನ್ಪಿಕ್ಚರ್ಸ್ ಬಂಡವಾಳ ಹೂಡ್ತಿದೆ. ಸದ್ಯ ತಲೈವಾ `170′ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಕನಗರಾಜ್ ಲಿಯೋ ಸಿನಿಮಾ ಬಿಡುಗಡೆಗಾಗಿ ಎದುರುನೋಡ್ತಿದ್ದಾರೆ.
ಇನ್ನೂ ಲಿಯೋ ನಂತರ ತಲೈವರ್ 171 ಸಿನಿಮಾ ಕೈಗೆತ್ತಿಕೊಳ್ಳಲಿರುವ ಕನಗರಾಜ್, ಕೈಥಿ-2, ವಿಕ್ರಮ್ 2, ಮತ್ತು `ರೋಲೆಕ್ಸ್ ಸ್ಪಿನ್ ಆಫ್’ ಮಾಡುವ ಬಗ್ಗೆ ನಿರ್ಧರಿಸಿದ್ದಾರಂತೆ. ಇದರ ಜೊತೆಗೆ ಡಾರ್ಲಿಂಗ್ ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳ್ತಾರೆನ್ನುವ ಸುದ್ದಿಯಿದೆ. ಹೀಗೆ, ಪಡೆಯಪ್ಪನಿಂದ ಪ್ರಭಾಸ್ ತನಕ ಒಟ್ಟು ಐದು ಸಿನಿಮಾಗಳು ಲೋಕೇಶ್ ಕನಗರಾಜ್ ಕೈಯಲ್ಲಿವೆ. ಈ ಐದು ಸಿನಿಮಾಗಳು ಮುಗಿದರೆ ನಿರ್ದೇಶಕ ಲೋಕೇಶ್ ಕನಗರಾಜ್ ಕೊಟ್ಟ ಮಾತು ಮುಗಿಯುತ್ತೆ. ಏನದು ಮಾತು ಅಂದರೆ `ನಂಗೇನು ತುಂಬಾ ಸಿನಿಮಾಗಳನ್ನು ಮಾಡ್ಬೇಕು ಎನ್ನುವ ಕನಸಿಲ್ಲ. ಸಿನಿಮಾ ಮಾಡ್ಬೇಕು ಎನ್ನುವ ಆಸೆಯಿತ್ತು. `ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್’ನಲ್ಲಿ ಚಿತ್ರ ಮಾಡಿದರೆ ನಿರ್ಮಾಪಕರಿಗೂ ಸಹಾಯವಾಗುತ್ತೆನ್ನುವ ಬಯಕೆಯಿತ್ತು ಅದು ಈಡೇರುತ್ತಿದೆ. ಕನಿಷ್ಟ 10 ಚಿತ್ರಗಳಾದ್ಮೇಲೆ ನಿರ್ದೇಶನದಿಂದ ದೂರ ಉಳಿಯುತ್ತೇನೆ’. ಇದು ಲೋಕೇಶ್ ಕನಗರಾಜ್ ಕೊಟ್ಟಿರುವಂತಹ ಹೇಳಿಕೆ.

ಈ ಸ್ಟೇಟ್ಮೆಂಟ್ ಹಳೆಯದಾದರೂ ಕೂಡ ಸೋಷಿಯಲ್ ಲೋಕದಲ್ಲಿ ಹಾಗೂ ಸಿನಿದುನಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮಾನಗರಮ್', ಕೈಥಿ’, ಮಾಸ್ಟರ್', ವಿಕ್ರಮ್’, `ಲಿಯೋ’ ಸಿನಿಮಾ ಮಾಡಿರುವ ಲೋಕೇಶ್, ಇನ್ನೈದು ಸಿನಿಮಾ ಮಾಡಿ ಗುಡ್ ಬೈ ಹೇಳಿಬಿಟ್ಟರೆ? ಹೀಗೊಂದು ಪ್ರಶ್ನೆ ಲೋಕೇಶ್ ಸಿನಿ ಅಭಿಮಾನಿಗಳನ್ನ ಮಾತ್ರವಲ್ಲ ಸ್ಟಾರ್ಸ್ ಹಾಗೂ ಪ್ರೊಡ್ಯೂಸರ್ಸ್ ಗಳನ್ನು ಥಂಡಾ ಹೊಡೆಸಿದೆ. ಅಂದ್ಹಾಗೇ, ಇವತ್ತು ಸೌತ್ ಸಿನಿಮಾ ಇಂಡಸ್ಟ್ರಿಯಿಂದ ನಾರ್ತ್ ವರೆಗೆ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳು ಲೋಕೇಶ್ ಕನಗರಾಜ್ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಮಾತ್ರವಲ್ಲ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮಾಸ್ಟರ್ ಡೈರೆಕ್ಟರ್ ಮೇಲೆ ಕೋಟಿ ಕೋಟಿ ಬಂಡವಾಳ ಹೂಡಲು ಮುಂದೆ ಬರುತ್ತಿವೆ. ಹೀಗಿರುವಾಗ ಲೋಕೇಶ್ ಸಿನಿಮಾ ಇಂಡಸ್ಟ್ರಿ ಕ್ವಿಟ್ ಮಾಡ್ತೀನಿ ಎನ್ನುವುದು ಎಷ್ಟು ಸರೀನೋ ಗೊತ್ತಿಲ್ಲ. ಅಷ್ಟಕ್ಕೂ, 10 ಚಿತ್ರ ಆದ್ಮೇಲೆ ಡೈರೆಕ್ಷನ್ ಕ್ವಿಟ್ ಮಾಡ್ತೀನಿ ಎಂದಿರುವ ಅವರು ಮುಂದಿನ ದಿನಗಳಲ್ಲಿ ತಮ್ಮ ನಿರ್ಧಾರ ಬದಲಿಸಿಕೊಂಡರು ಅಚ್ಚರಿಯಿಲ್ಲ.ಆದರೆ, ನಿರ್ದೇಶನದಿಂದ ದೂರ ಉಳಿಬೇಕು ಅಂತ ಅವರಿಗೆ ಅನಿಸಿದ್ಯಾಕೆ? ಅವರ ಮುಂದಿನ ಗುರಿ ಏನು? ಭಾರತೀಯ ಚಿತ್ರರಂಗವನ್ನು ಕಣ್ಣರಳಿಸಿ ನೋಡುವಂತೆ ಮಾಡಿರುವ ಲೋಕೇಶ್ ಕನಗರಾಜ್ ಇನ್ಯಾವ ಕನಸಿನ ಬೆನ್ನೇರಿ ಹೊರಡಲಿದ್ದಾರೆ? ಈ ಕುತೂಹಲದ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡಬೇಕು.





