‘ಮನಸುಗಳ ಮಾತು ಮಧುರ’ ಖ್ಯಾತಿಯ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಅವರದೇ ನಿರ್ಮಾಣ ಹಾಗೂ ನಿರ್ದೇಶನದ ‘ವರಾಹಚಕ್ರಂ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಬೆಂಗಳೂರಿನ ಚಂದ್ರಾ ಲೇಔಟ್ ನ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನೆರವೇರಿದ ‘ವರಾಹಚಕ್ರಂ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಮಾಜಿ ಸಚಿವ ಆರ್. ಅಶೋಕ್ ಸಿನಿಮಾದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಈಗಿನ ಡಿಜಿಟಲ್ ಜಗತ್ತಿನಲ್ಲಿ ಏನೇನೆಲ್ಲ ಅನ್ಯಾಯ, ಮೋಸ, ಅಕ್ರಮಗಳು ನಡೆಯುತ್ತಿವೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳ ಹೊರಟಿರುವ ನಿರ್ದೇಶಕರು ಐವರು ನಾಯಕರನ್ನು ಇಟ್ಟುಕೊಂಡು ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ.

ತೆಲುಗು ನಟ ಭಾನುಚಂದರ್, ಹಿರಿಯನಟಿ ಪ್ರೇಮಾ, ನಟ ಸಾಯಿಕುಮಾರ್, ಚಿ. ಗುರುದತ್, ಶೋಭರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಅರ್ಜುನ್ ದೇವ್, ರಾಣಾ, ಇಮ್ರಾನ್ ಷರೀಫ್, ಆರ್ಯನ್ ಹಾಗೂ ಪ್ರತೀಕ್ ಗೌಡ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಶೋಭಾರಾಣಿ, ಪ್ರಿಯಾ ತರುಣ್, ಅನನ್ಯ, ಜಾಹ್ನವಿ, ದೀಕ್ಷಾ, ಚೈತ್ರಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಜೊತೆಗೆ ಪ್ರಮುಖ ಪಾತ್ರವೊಂದಕ್ಕೆ ಸೋನು ಸೂದ್ ರನ್ನು ಕರೆತರುವ ಪ್ರಯತ್ನವೂ ನಡೆದಿದೆ. ‘ಲಾವಣ್ಯ ಗ್ರೂಪ್’ ಸಹಯೋಗದೊಂದಿಗೆ ‘ಮನ್ವಂತರಿ ಮೂವಿಮೇಕರ್ಸ್’ ಬ್ಯಾನರಿನಡಿ ಅಡಿ ‘ವರಾಹ ಚಕ್ರಂ’ ಸಿನಿಮಾವನ್ನು ನಿರ್ಮಾಣವಾಗುತ್ತಿದೆ.
‘ವರಾಹ ಚಕ್ರಂ’ ಮುಹೂರ್ತ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ‘ಈ ಚಿತ್ರದಲ್ಲಿ ಕಥೆಯೇ ನಾಯಕ, ವರಾಹ ವಿಷ್ಣುವಿನ ಒಂದು ಅವತಾರ, ಬೆಂಗಳೂರಿನಲ್ಲಿ ಡಿಜಿಟಲೈಜೇಶನ್ ನಿಂದ ಕೆಲವು ದುರುಪಯೋಗಗಳಾಗುತ್ತಿವೆ. ಅವ್ಯವಸ್ಥಿತ ನಿಯಮಗಳು, ದೌರ್ಜನ್ಯಗಳಿಗೆ ಅಂತ್ಯ ಹಾಡುವ ಕಾನ್ಸೆಪ್ಟ್ ವರಾಹಚಕ್ರಂ ಚಿತ್ರದಲ್ಲಿದೆ. ಕಣ್ಣು, ಗನ್ನು, ಪೆನ್ನು ಈ ಮೂರನ್ನೂ ಇಟ್ಟುಕೊಂಡು ಏನೋ ಮಾಡಲು ಹೊರಟಿದ್ದೇನೆ ಬಳ್ಳಾರಿ, ಹಿರಿಯೂರು, ಬೆಂಗಳೂರು, ಚಿತ್ರದುರ್ಗ, ತಮಿಳುನಾಡಿನ ಪೊಲ್ಲಾಚ್ಚಿ ಅಲ್ಲದೆ ಉತ್ತರ ಪ್ರದೇಶದ ವಾರಣಾಸಿ, ಕಾಶಿಯಲ್ಲೇ 20 ದಿನ ಶೂಟಿಂಗ್ ನಡೆಸುವ ಯೋಚನೆಯಿದೆ’ ಎಂದರು. ಆ್ಯಕ್ಷನ್ ಕಂ ಫ್ಯಾಮಿಲಿ ಎಂಟರ್ ಟೈನಿಂಗ್ ಶೈಲಿಯ ‘ವರಾಹ ಚಕ್ರಂ’ ಚಿತ್ರದ 5 ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದು, ಚಿತ್ರಕ್ಕೆ ಶರತ್ಕುಮಾರ್ ಜಿ. ಛಾಯಾಗ್ರಹಣ, ಭಾರ್ಗವ ಸಂಕಲನವಿದೆ.





