ದೋಕ್ಲಾಮ್ ಅಥವಾ ದೋಂಗ್ಲಾಮ್ ಪ್ರಸ್ಥಭೂಮಿ ಎಂದು ಕರೆಯಲಾಗುವ ಭಾರತ-ಚೀನಾ ಗಡಿಭಾಗದಲ್ಲಿ ಚೀನಾವು ತನ್ನ ಭಾಗದಲ್ಲಿ ಕೈಗೊಂಡಿರುವ ರಸ್ತೆ ನಿರ್ಮಾಣವನ್ನು ತಡೆಗಟ್ಟಲು, ಕಳೆದ ಜೂನ್ ೨೬ರಂದು, ಭಾರತದ ಸೇನಾತುಕಡಿಗಳು ಸಿಕ್ಕಿಂ ವಿಭಾಗದಲ್ಲಿರುವ ಚೀನಾ ಗಡಿಯನ್ನು ದಾಟಿ ಮುನ್ನುಗ್ಗುತ್ತಿದ್ದ ಸಮಯದಲ್ಲೇ, ಭಾರತದ ಪ್ರಧಾನಿ ಮೋದಿಯವರು ಅಮೆರಿಕದ ವಾಷಿಂಗ್ಟನ್-ಡಿಸಿಯಲ್ಲಿ ಡೋನಾಲ್ಡ್ ಟ್ರಂಪ್ ಆಡಳಿತದ ಅಮೆರಿಕ ಫರ್ಸ್ಟ್ (ಅಮೆರಿಕವೇ ಮೊದಲು) ನೀತಿಯ ಬಗ್ಗೆ ಭಾರತಕ್ಕಿರುವ ಭಿನ್ನಾಭಿಪ್ರಾಯಗಳನ್ನು ಮರೆಮಾಚಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಮೋದಿ ಮತ್ತವರ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮಾತ್ರವಲ್ಲದೆ ಭಾರತದ ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳೂ ಸಹ ಭಾರತ ಮತ್ತು ಅಮೆರಿಕದ ವ್ಯೂಹಾತ್ಮಕ ಮೈತ್ರಿಯ ರೇಟಿಂಗ್ ಕೆಳಗಿಳಿಯಬಹುದಾದ ಸಾಧ್ಯತೆಯ ಬಗ್ಗೆ ಆತಂಕಗೊಂಡಿದ್ದವು.
ಏಕೆಂದರೆ ಮಹಾನ್ ಶಕ್ತ ರಾಷ್ಟ್ರ (ಗ್ರೇಟ್ ಪವರ್) ವಾಗಬೇಕೆಂಬ ತನ್ನ ಮಹತ್ವಾಕಾಂಕ್ಷೆಗೆ ಅಮೆರಿಕದ ಜೊತೆ ಒಂದು ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವ ಅತ್ಯಗತ್ಯವೆಂದು ಭಾರತದ ಆಳುವವರ್ಗಗಳು ಭಾವಿಸುತ್ತಾರೆ. ಪ್ರಾಯಶಃ ಅಮೆರಿಕ ಸಾಮ್ರಾಜ್ಯಶಾಹಿಯ ಜೊತೆ ಒಂದು ಚೀನಾ ವಿರೋಧಿ ಮೈತ್ರಿಯನ್ನು ರೂಪಿಸಿಕೊಳ್ಳುವ ಸಲುವಾಗಿಯೇ ಪ್ರಧಾನಿಯವರ ಹಿಂದೂತ್ವವಾದಿ ಬಲಗೈ ಭಂಟರು ಚೀನಾದ ಜೊತೆ ಮೂರನೇ ಗಡಿವಿಭಾಗದಲ್ಲೂ ಸಂಘರ್ಷವೊಂದನ್ನು ಯೋಜಿಸಿದಂತೆ ಕಾಣುತ್ತಿದೆ. ಹಿಂದಿನಿಂದಲೂ ಭಾರತಕ್ಕೆ ಚೀನಾದ ಜೊತೆ ಈಶಾನ್ಯ ಗಡಿ ಪ್ರದೇಶದಲ್ಲಿ ಮ್ಯಾಕ್ಮೋಹನ್ ಗಡಿ ರೇಖೆಗೆ ಸಂಬಂಧಪಟ್ಟಂತೆಯೂ ಮತ್ತು ವಾಯುವ್ಯ ಗಡಿಯಲ್ಲಿ ಅಕ್ಸಾಯ್ ಚಿನ್ ಪ್ರದೇಶದ ಮೇಲೆ ಹಕ್ಕಿನ ಬಗ್ಗೆಯೂ ಗಡಿ ವಿವಾದ ಉಳಿದುಕೊಂಡು ಬಂದಿದೆ. ಆದರೆ ಈ ತಂತ್ರಗಾರಿಕೆಯು ಫಲ ನೀಡುವುದೇ?
೨೦೧೪ರಲ್ಲಿ ಮೋದಿ ಸರ್ಕಾರ ಅಧಿಕಾರವನ್ನು ಪಡೆದುಕೊಂಡಾಗಿನಿಂದಲೂ ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಒಲವುಗಳ ಸಂಪೂರ್ಣ ಬಳಕೆ ಮಾಡಿಕೊಂಡ ಅಮೆರಿಕದ ಬರಾಕ್ ಒಬಾಮಾ ಆಡಳಿತವು ತನ್ನ ಚೀನಾ ವಿರೋಧಿ ನೀತಿಯಲ್ಲಿ ಭಾರತವು ಮುಂಚೂಣಿ ಪಾತ್ರ ನಿರ್ವಹಿಸುವಂತೆ ಸಿದ್ಧಗೊಳಿಸುತ್ತಿದೆ.ಅದರಲ್ಲೂ ನಿರ್ದಿಷ್ಟವಾಗಿ ಅಮೆರಿಕವು ಭಾರತವನ್ನು ಒಂದು ಪ್ರಮುಖ ಸೇನಾ ಸಹಭಾಗಿ ಎಂದು ಪರಿಗಣಿಸಿದೆ. ಭಾರತವು ಅಮೆರಿಕದ ಜೊತೆ ಸೇನಾ ಸರಂಜಾಮು ವಿನಿಮಯ ಒಪ್ಪಂದವನ್ನು ಮಾಡಿಕೊಂಡಿದ್ದು ಅದರಡಿಯಲ್ಲಿ ಅಮೆರಿಕವು ತನ್ನ ಸೇನಾ ತುಕಡಿಗಳನ್ನು ಭಾರತೀಯ ಸೇನಾ ನೆಲೆಗಳಲ್ಲಿ ನಿಯೋಜಿಸಬಹುದು. ಇದಕ್ಕೆ ಪ್ರತಿಯಾಗಿ ಅಮೆರಿಕದಿಂದ ಅಮೆರಿಕದ ಅತ್ಯಂತ ಆಪ್ತ ಸಹಭಾಗಿಗಳು ಮತ್ತು ಮಿತ್ರರ ಜೊತೆ ಮಾತ್ರ ಹಂಚಿಕೊಳ್ಳುವ ಮಟ್ಟದ ಸೇನಾ ತಂತ್ರಜ್ನಾನದ ಸಹಕಾರವನ್ನು ಪಡೆದುಕೊಳ್ಳಲು ಭಾರತ ಅರ್ಹತೆಯನ್ನು ಪಡೆದುಕೊಂಡಿದೆ. ಇವೆಲ್ಲದರ ಮೂಲಕ ಅಮೆರಿಕ ಭಾರತವನ್ನು ತನ್ನ ಜಾಗತಿಕ ವ್ಯೂಹದೊಳಗೆ ಸೆಳೆದುಕೊಂಡಿದೆ.
ಕಳೆದ ನಲವತೈದು ವರ್ಷಗಳಿಂದ ಅಮೆರಿಕ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧ ನೆಲೆ ನಿಂತಿರುವುದು ಅಮೆರಿಕ ಬೀಜಿಂಗ್ ಆಡಳಿತವನ್ನು ಮಾತ್ರ ಮಾನ್ಯ ಮಾಡಿರುವುದರಿಂದ. ಚೀನಾದ ದಕ್ಷಿಣ ತುದಿಯಲ್ಲಿ ಟೈವಾನ್ ಎಂಬ ಸಣ್ಣ ಪ್ರಾಂತ್ಯವಿದ್ದು ಅದೂ ಕೂಡಾ ಚೀನಾದ ಭಾಗವೇ ಆಗಿತ್ತು. ಆದರೆ ೧೯೪೯ರಲ್ಲಿ ಚೀನಾದಲ್ಲಿ ಕ್ರಾಂತಿಯಾದಾಗ ಅಮೆರಿಕ ಬೆಂಬಲಿತ ಸರ್ವಾಧಿಕಾರಿ ಚಿಯಾಂಗ್ ಕೈ ಶೇಕ್ ಟೈವಾನ್ಗೆ ಪಲಾಯನ ಮಾಡಿದ. ಹಾಗೂ ಅಲ್ಲಿ ಆಡಳಿತ ನಡೆಸುತ್ತಾ ಇಡೀ ಚೀನಾದ ನಿಜವಾದ ಸಾರ್ವಭೌಮತೆ ತನ್ನ ಆಡಳಿತಕ್ಕೆ ಸೇರಿದ್ದೆಂದು ಪ್ರತಿಪಾದಿಸಿದ. ಅಮೆರಿಕವು ನಲವತೈದುವರ್ಷದ ಹಿಂದಿನವರೆಗೂ ಟೈವಾನ್ ಆಡಳಿತವನ್ನು ಮಾನ್ಯ ಮಾಡಿತ್ತೇ ವಿನಃ ಬೀಜಿಂಗ್ ಆಡಳಿತವನ್ನಲ. ಅಂದರೆ ಬೀಜಿಂಗ್ ಆಡಳಿತಕ್ಕೆ ಮಾತ್ರ ಇಡೀ ಚೀನಾದ ಸಮಗ್ರ ಸಾರ್ವsಮೀ ಪರಮಾಧಿಕಾರವಿರುವ ಒಂದು ಚೀನಾ ಎಂಬ ತತ್ವವನ್ನು ಅಮೆರಿಕ ಮಾನ್ಯ ಮಾಡಿದೆ.
ಆದರೆ ೨೦೧೬ರ ಡಿಸೆಂಬರ್ ನಲ್ಲಿ ಆಗಿನ್ನೂ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಡೊನಾಲ್ಡ್ ಟ್ರಂಪ್ ಅವರು ತನ್ನ ಆಡಳಿತ ಈ ಹಿಂದಿನ ರೀತಿ ಒಂದು ಚೀನಾ ತತ್ವಕ್ಕೆ ಬದ್ಧವಾಗಿರುತ್ತದೆಂದು ಯಾರೂ ನಿರೀಕ್ಷಿಸಬೇಕಿಲ್ಲವೆಂದೂ, ಚೀನಾದ ಬಗ್ಗೆ ತನ್ನ ಆಡಳಿತದ ನಿಲುವು ಉಳಿದೆಲ್ಲಾ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚೀನಾದ ನಿಲುವು ಹೇಗಿರುತ್ತದೆ ಎಂಬುದನ್ನೇ ಆಧರಿಸಿರುತ್ತದೆಂದೂ ಹೇಳಿಕೆ ನೀಡಿದ್ದರು. ಈ ಕಾರಣಗಳಿಂದ ಚೀನಾದೊಂದಿಗೆ ಭಾರತಕ್ಕಿರುವ ಭೌಗೋಳಿಕ ತಗಾದೆಗಳೆಲ್ಲದರಲ್ಲೂ ಅಮೆರಿಕ ತಮ್ಮನ್ನೇ ಬೆಂಬಲಿಸುತ್ತದೆಂದು ನಮ್ಮ ಭದ್ರತಾ ಸಲಹೆಗಾರರು ಭಾವಿಸಿಕೊಂಡಂತೆ ಕಾಣುತ್ತದೆiದರೆ ಜಾಗತಿಕ ಮಟ್ಟದಲ್ಲಿ ಅಮೆರಿಕಾ ಆಡುತ್ತಾ ಬಂದಿರುವ ನೌಟಂಕಿ ಆಟಗಳ ಅರಿವಿರುವ ಯಾರೊಬ್ಬರೂ ಕೂಡಾ ಅದರ ನಡೆಯ ಬಗ್ಗೆ ಅನುಮಾನ ಹೊಂದದಿರಲು ಸಾಧ್ಯವೇ ಇಲ್ಲ.
ಭಾರತ ಚೀನಾದೊಂದಿಗಿನ ಎರಡು ಗಡಿ ವಿವಾದಗಳ ಬಗ್ಗೆ ಮಾತುಕತೆಯನ್ನು ಮುಂದುವರೆಸಿರುವುದು ನಿಜ. ಆದರೆ ಭಾರತ ಅಕ್ಸಾಯ್ ಚಿನ್ ಗಡಿ ವಿವಾದದಲ್ಲಿ ಇಡೀ ಅಕ್ಸಾಯ್ ಚಿನ್ ಪ್ರದೇಶವೇ ತನ್ನದೆಂದು ಪ್ರತಿಪಾದಿಸುತ್ತದೆ. ಎರಡನೆಯದಾಗಿ ಈಶಾನ್ಯ ಗಡಿಯಲ್ಲಿ ಮ್ಯಾಕ್ಮೋಹನ್ ಗಡಿ ರೇಖೆಯ ಸಿಂಧುತ್ವದ ಬಗ್ಗೆಯೇ ತಗಾದೆಯಿದ್ದರೂ ಅದೇ ಅಂತಿಮವೆಂದು ಹಠ ಹಿಡಿದಿದೆ. ಇವೆರಡೂ ವಿಷಯಗಳಲ್ಲಿ ಭಾರತವೂ ಕಿಂಚಿತ್ತೂ ಕೆಳಗಿಳಿಯಲು ಸಿದ್ಧವಿಲ್ಲವೆಂದು ಸ್ಪಷ್ಟಪಡಿಸಿದೆ. ಆದರೆ ಭೂತಾನ್ ಒಂದನ್ನು ಬಿಟ್ಟರೆ ಚೀನಾದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಉಳಿದೆಲ್ಲಾ ದೇಶಗಳು ಚೀನಾದೊಂದಿಗೆ ತಮ್ಮ ಗಡಿವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿವೆ.
ವಾಸ್ತವವಾಗಿ ಇತಿಹಾಸ ಅಂತಿಮವಾಗಿ ಗಡಿರೇಖೆಯನ್ನು ಎಲ್ಲಿಯತನಕ ತಂದು ನಿಲ್ಲಿಸಿದೆಯೋ ಅದನ್ನೇ ಮಾನ್ಯ ಮಾಡಲು ಚೀನಾ ಹೆಚ್ಚೂ ಕಡಿಮೆ ಸಿದ್ಧವಾಗಿದೆ. ತಮ್ಮ ಬಹಳಷ್ಟು ಭೂ ಪ್ರದೇಶಗಳನ್ನು ಬ್ರಿಟಿಷ ವಸಾಹತುಶಾಹಿಗಳು ತಮ್ಮ ಸಾಮ್ರಾಜ್ಯ ವಿಸ್ತರಣೆಯ ಕೊನೆಯ ಹಂತದಲ್ಲಿ ವಶಪಡಿಸಿಕೊಂಡಿರುವುದೆಂದು ಚೀನಾಗೆ ಗೊತ್ತಿದ್ದರೂ, ಮುಕ್ತ ಮಾತುಕತೆಯೊಂದಿಗೆ ನಡೆಯುವ ಯಾವುದೇ ಒಪ್ಪಂದಗಳಲ್ಲಿ ಭಾರತಕ್ಕೆ ಮ್ಯಾಕ್ ಮೋಹನ್ ರೇಖೆಯವರೆಗಿನ ಭೂ ಪ್ರದೇಶವು ದಕ್ಕುತ್ತದೆ. ಹಾಗಿದ್ದರೂ ಭಾರತವೇಕೆ ಚೀನಾದೊಡನೆ ಅನಗತ್ಯ ಘರ್ಷಣೆಗಿಳಿಯುತ್ತಾ ತನ್ನನ್ನು ತಾನು ಚೀನಾದ ಶತ್ರುವನ್ನಾಗಿಸಿಕೊಳ್ಳುತ್ತಿದೆ?
ಭಾರತ ಪಾಕಿಸ್ತಾನ, ಚೀನಾ ಮತ್ತು ಅವರಿಂದ ಪೋಷಿತರಾದ ದಂಗೆಕೋರರೊಂದಿಕೆ ಏಕಕಾಲದಲ್ಲಿ ಎರಡೂವರೆ ಯುದ್ಧವನ್ನು ನಡೆಸಲು ಭಾರತವು ಸಿದ್ಧವಿದೆಯೆಂದು ಭಾರತದ ಸೇನಾ ದಂಡನಾಯಕರಾದ ಬಿಪಿನ್ ರಾವತ್ ಅವರು ಅತ್ಯಂತ ಬೇಜವಾಬ್ದಾರಿಯಿಂದ ಕೊಚ್ಚಿಕೊಂಡಿದ್ದಾರೆ. ಚೀನಾ-ಭಾರತ-ಭೂತಾನ್ ಗಡಿರೇಖೆಯನ್ನು ಮತ್ತಷ್ಟು ದಕ್ಷಿಣಕ್ಕೆ ತಳ್ಳುವ ಉದ್ದೇಶವನ್ನು ಚೀನಾವು ಹೊಂದಿದೆಯೆಂದೂ, ಒಂದು ವೇಳೆ ಯುದ್ಧವೇ ಸಂಭವಿಸಿದಲ್ಲಿ ಪಶ್ಚಿಮ ಬಂಗಾಳ ಮತ್ತು ಏಳು ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ ಭೌಗೋಳಿಕವಾಗಿ ಜೋಡಿಸುವ , ಕೋಳಿ ಕತ್ತು ಎಂದೇ ಬಣ್ಣಿಸಲ್ಪಡುವ ಸಿಲಿಗುರಿ ರಹದಾರಿಯನ್ನು ವಶಪಡಿಸಿಕೊಂಡು ಅವಕ್ಕೆ ಭಾರತದೊಂದಿಗೆ ಭೂ ಸಂಪರ್ಕವನ್ನು ಇಲ್ಲದಂತೆ ಮಾಡುವ ಯುದ್ಧತಂತ್ರವಿದೆಂದೂ ಭಾರತ ಸರ್ಕಾರ, ಭಾರತದ ದೊಡ್ಡ ಮಾಧ್ಯಮ ಸಂಸ್ಥೆಗಳು ಮತ್ತು ಕೆಲವು ಸ್ವಘೋಷಿತ ಸೇನಾ ಪರಿಣಿತರು ಅಭಿಪ್ರಾಯ ಪಡುತ್ತಿದ್ದಾರೆ. ಇಂಥಾ ಒಂದು ಅಸಂಭವವಾದ ಊಹಾಪೋಹವೇ ಭಾರತವನ್ನು ಚೀನಾದ ನಿಯಂತ್ರಣದಲ್ಲಿರುವ ಮತ್ತು ಚೀನಾ ತನ್ನದೆಂದು ಪ್ರತಿಪಾದಿಸುವ ಭೂಭಾಗದ ಮೇಲೆ ದಾಳಿಗೆ ಸಮರ್ಥನೆ ಒದಗಿಸುತ್ತಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಚೀನಾದೊಡಗಿನ ವೈಷಮ್ಯ ಯಾವ ಪ್ರಮಾಣಕ್ಕೆ ಬೆಳೆದಿದಿದೆಯೆಂಬುದನು ಸೂಚಿಸುತ್ತದೆ. ಹಾಗೆಯೇ ಅಮೆರಿಕದೊಂದಿಗೆ ಅದು ಮಾಡಿಕೊಂಡಿರುವ ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವದಲ್ಲಿ ಎಷ್ಟರಮಟ್ಟಿಗೆ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಬಿಟ್ಟುಕೊಟ್ಟಿದೆಯೆಂಬುದನ್ನೂ ಸೂಚಿಸುತ್ತದೆ.
ಆದರೆ, ನಮ್ಮ ದೇಶದ ಆಡಳಿತಗಾರರ ಎಣಿಕೆಗೆ ವಿರುದ್ಧವಾಗಿ ಟ್ರಂಪ್ ಆಡಳಿತ ಚೀನಾದ ಜೊತೆಗೆ ಈಗ ಸಂಘರ್ಷದ ಬದಲಿಗೆ ಇನ್ನೂ ಹೆಚ್ಚಿನ ಒಳಗೊಳ್ಳುವ ನೀತಿಯನ್ನು ಅನುಸರಿಸುತ್ತಿದೆ. ಏಕೆಂದರೆ ಚೀನಾವು ಅಮೆರಿಕದೊಂದಿಗೆ ಹೊಂದಿರುವ ವಾಣಿಜ್ಯದಲ್ಲಿ ಅತ್ಯಧಿಕ ಹೆಚ್ಚುವರಿಯನ್ನು ಹೊಂದಿರುವುದು ಅಮೆರಿಕದ ಆರ್ಥಿಕತೆಗೆ ಸಂಕಷ್ಟವನ್ನು ತಂದೊಡ್ಡಿದೆ. ಹೀಗಾಗಿ ಅದನ್ನು ಇಳಿಸುವಂತೆ ಒಲಿಸುವುದೂ ಹಾಗೂ ಉತ್ತರ ಕೊರಿಯಾವು ಅಣ್ವಸ್ತ್ರ ಮತ್ತು ಕ್ಷಿಪಣಿಗಳ ವಿಷಯದಲ್ಲಿ ಅಮೆರಿಕದ ಶರತ್ತುಗಳನ್ನು ಒಪ್ಪಿಕೊಳ್ಳುವಂತೆ ಮಾಡಲು ಚೀನಾ ಒತ್ತಡ ಹೇರುವಂತೆ ಮಾಡುವುದರಲ್ಲೇ ಸದ್ಯಕ್ಕೆ ಅಮೆರಿಕದ ಹಿತಾಸಕ್ತಿಯಡಗಿದೆ. ಗಮನಾರ್ಹವಾದ ವಿಷಯವೆಂದರೆ ಭಾರತವು ಚೀನಾದೊಂದಿಗೆ ತೆಗೆದಿರುವ ಈ ಮೂರನೇ ಗಡಿ ತಗಾದೆಯ ಬಗ್ಗೆ ಅಮೆರಿಕವಾಗಲೀ, ಜಪಾನ್ ಆಗಲೀ ಈವರೆಗೆ ಯಾವ ಹೇಳಿಕೆಯನ್ನೂ ನೀಡಿಲ್ಲ.
ಅಮೆರಿಕವು ಬೆಂಬಲಕ್ಕೆ ಬರಬಹುದೆಂಬ ಸಾಧ್ಯತೆ ಇಲ್ಲವಾಗುತ್ತಿರುವುದರಿಂದ ಚೀನಾ ನಿಯಂತ್ರಣದಲ್ಲಿರುವ ದೋಕ್ಲಾಮ್ ಪ್ರದೇಶದಿಂದ ಭಾರತದ ಸೇನಾ ತುಕಡಿಗಳನ್ನು ಮೋದಿಯವರು ಸದ್ದಿಲ್ಲದೆ ಹಿಂದಕ್ಕೆ ಕರೆಸಿಕೊಳ್ಳುತ್ತಾರೆಯೇ? ೧೯೬೨ರ ಭಾರತ ಚೀನಾ ಸಮರ ಸನ್ನಿವೇಶ ರಿಪೀಟ್ ಆಗುತ್ತಿದೆಯೆ? ಅರುಣಾಚಲದ ಜೊತೆಗೆ ಮಣಿಪುರದ ಗಡಿಯಲ್ಲೂ ೧೫ ಸಾವಿರ ಸೈನಿಕರ ನಿಯುಕ್ತಿ. ಅರುಣಾಚಲದಲ್ಲಿ ೩೦ ಸಾವಿರ ಸೈನಿಕರ ಜಮಾವಣೆ. ಲಡಾಖ್ನಲ್ಲಿ ಎರಡು ಸಲ ಗಡಿ ಉಲ್ಲಂಘನೆ ಮಾಡಿದ ಚೀನಾ ತಂದಿಟ್ಟ ತಲೆನೋವಿಗೆ ಭಾರತದ ರಕ್ಷಣಾ ಮುಖ್ಯಸ್ಥರಲ್ಲಿ ಗಡಿಬಿಡಿ; ಆತಂಕ. ಹೊರಗೇನೋ ಸಮಾಧಾನದ ಮುಖ; ಒಳಗೆ ಕುದಿಯುತ್ತಿದೆ ಉದ್ವೇಗ.
ಈ ವಿವರಗಳನ್ನು ನೀವು ಪಾಕಿಸ್ತಾನದ ಡೈಲಿ ಟೈಮ್ಸ್ನಲ್ಲಿ ಒದಬಹುದು. ಗಡಿಗುಂಟ ಚೀನಾ ನಿರ್ಮಿಸಿರುವ ಹೆದ್ದಾರಿ, ೫೦ ಸಾವಿರ ಸೈನಿಕರೊಂದಿಗೆ ಟಿಬೆಟ್ ಭಾರತ ಗಡಿಯುದ್ದಕ್ಕೂ ನಡೆಸಿರುವ ತುಂಟಾಟಗಳು ಏನು ಹೇಳುತ್ತಿವೆ? ಭಾರತವು ಮತ್ತೆರಡು ಡಿವಿಜನ್ಗಳನ್ನು ಕಟ್ಟಲು ರಜೆಯಲ್ಲಿದ್ದ ಸೇನಾ ಸಿಬ್ಬಂದಿಗಳಿಗೆ ತುರ್ತು ಕರೆ ಕಳಿಸಿದೆಯಂತೆ. ೧೯೬೨ರ ಪ್ರಮಾಣದಲ್ಲಿ ಅಲ್ಲದಿದ್ದರೂ, ಅಂದಿನಂತೆಯೇ ಚೀನಾ ಏನೋ ಭಾನಗಡಿ ನಡೆಸಲು ಮುಂದಾಗಿದೆ ಎಂದು ರಕ್ಷಣಾ ತಜ್ಞರು ಎಚ್ಚರಿಸಿದ್ದಾರಂತೆ. ಅಕ್ಟೋಬರಿನಲ್ಲಿ ಇವೆಲ್ಲವೂ ನಿರ್ಣಾಯಕ ಘಟ್ಟಕ್ಕೆ ಬಂದು.॒.. ಚಕಮಕಿ ಶುರುವಾಗಿ…
ಹೌದೆ? ಮತ್ತೆ ಚೀನಾ ಭಾರತ ಯುದ್ಧ ನಡೆಯುವುದೆ? ಪಾಕಿಸ್ತಾನ ಏನು ಮಾಡುತ್ತೆ? ಅಮೆರಿಕಾ ಸುಮ್ಮನಿರುತ್ತ? ರಶ್ಯಾ ನೆರವಿಗೆ ಬರುತ್ತ? ಚೀನಾಗೆ ಅಷ್ಟೆಲ್ಲ ಶಕ್ತಿ ಇದೆಯೆ? ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಅನುಮಾನಗಳು ಹಬ್ಬುತ್ತಿವೆ. ಕೊಲ್ಕೊತಾದಲ್ಲಿ ಯು ಎ ಇ ದೇಶದ ವಿಮಾನವೊಂದು ಇಂಧನಕ್ಕಾಗಿ ಇಳಿದಾಗ, ಅದರಲ್ಲಿ ಚೀನಾಗೆ ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಿದ್ದುದು ತಿಳಿದುಬಂತು. ಭಾರತವು ಗೂಢಚರ್ಯೆ ನಡೆಸುತ್ತಿದೆ ಎಂದು ಚೀನಾದ ರಕ್ಷಣಾ ತಜ್ಞ ಕಟುವಾಗಿ ಟೀಕಿಸಿದ್ದಾನೆ. ಚೀನಾದ ಕಮ್ಯನಿಸ್ಟ್ ಮುಖವಾಣಿ ದಿ ಪೀಪಲ್ಸ್ ಡೈಲಿಯಲ್ಲೂ ಇಂಥದ್ದೇ ಟೀಕೆ ಪ್ರಕಟವಾಗಿದೆ. ಇತ್ತ ಉತ್ತರಾಖಂಡದಲ್ಲೂ ಚೀನಾ ಸೇನೆಯು ಗಡಿ ಉಲ್ಲಂಘಿಸಿದೆ ಎಂದು ಮುಖ್ಯಮಂತ್ರಿ ರಮೇಶ್ ಪೊಖ್ರಿಯಾಲ್ ಹೇಳಿದ್ದಾರೆ.
ಗ್ಯಾ ಪರ್ವತದೊಳಕ್ಕೆ ಒಂದೂವರೆ ಕಿಮೀ ನುಗ್ಗಿದ ಚೀನೀಯರು ಅಲ್ಲೂ ಕಲ್ಲುಗಳ ಮೇಲೆ ಚೀನಾ ಎಂದು ಕೆತ್ತಿದ್ದಾರೆ. ಈ ವರ್ಷಗಳಲ್ಲಿ ಚೀನಾ ಸೇನಾಬಲವನ್ನು ಹೆಚ್ಚಿಸಿಕೊಂಡಿದೆ. ಆರ್ಥಿಕವಾಗಿ ಸುದೃಢವಾಗಿದೆ. ಈಗ ಅಮೆರಿಕಾದ ಏಶ್ಯಾ ನೀತಿಯಲ್ಲಿ ಚೀನಾಕ್ಕೇ ಮೊದಲ ಮಣೆ. ಭಾರತೀಯ ನೌಕಾಪಡೆಯ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಸುರೇಶ್ ಮೆಹ್ತಾ ಹೇಳುತ್ತಾರೆ: ಚೀನಾ ಭಾರತದ ನಡುವಣ ಕಂದರ ದಿನದಿನವೂ ಹೆಚ್ಚುತ್ತಲೇ ಇದೆ. ರಕ್ಷಣಾ ಸನ್ನಿವೇಶದ ಬಗ್ಗೆಯೇ ಹೇಳುವುದಾದರೆ, ಎತ್ತರದ ಹಿಮಾಲಯ ಶ್ರೇಣಿಯಲ್ಲಿ ಚೀನೀಯರು ಕೂತಿದ್ದಾರೆ. ಅವರನ್ನೇನಾದರೂ ಬಗ್ಗು ಬಡಿಯಬೇಕೆಂದರೆ ಭಾರತೀಯ ಸೈನಿಕರು ಕತ್ತೆತ್ತಿ ನೋಡುತ್ತ ಮೇಲೆ ಹತ್ತಬೇಕು. ೪೦೫೭ ಕಿಮೀ ಗಡಿಯುದ್ದಕ್ಕೂ ಸರಿಸುಮಾರು ಇದೇ ಸ್ಥಿತಿ. ಅಂದಮೇಲೆ ಯುದ್ಧ ನಡೆದಿದ್ದೇ ಆದರೆ ಏನಾದೀತೆಂದು ಊಹಿಸುವುದು ಕಷ್ಟವೆ?
ಸ್ವಿಜರ್ಲ್ಯಾಂಡ್ ಗಾತ್ರದ ಆಕ್ಸಾಯ್ ಚಿನ್ ಪ್ರದೇಶವನ್ನು ಕಬಳಿಸಿಯಾಗಿದೆ. ಐವತ್ತರ ದಶಕದಲ್ಲೇ ಟಿಬೆಟನ್ನೇ ನುಂಗಿ ನೀರು ಕುಡಿದ ಚೀನಾಗೆ ಆಕ್ಸಾಯ್ ಚಿನ್ ತಿಂದಮೇಲೆ ತೇಗು ಬರಬೇಕಿತ್ತಲ್ಲವೆ? ಹಾಗಾಗುವುದಿಲ್ಲ. ಮಾವೋ ಯಾವಾಗಲೋ ಹೇಳಿದ್ದಾನೆ: ನೇಪಾಳ, ಲಡಾಖ್, ಭೂತಾನ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳು ಚೀನಾದ ಐದು ಬೆರಳುಗಳು. ಇದಾವುದೂ ಇನ್ನೂ ಚೀನಾ ವಶವಾಗಿಲ್ಲ. ನೇಪಾಳದಲ್ಲಿ ಮಾವೋವಾದಿಗಳ ಪ್ರಭಾವದ ಬಗ್ಗೆ ಸೆಪ್ಟೆಂಬರ್ ೧೩ರ ಸಾಪ್ತಾಹಿಕದಲ್ಲಿ ಬಂದ ಲೇಖನ ನೋಡಿ. ಭೂತಾನ್ ಹೇಳಿಕೇಳಿ ಭಾರತದ ನೆರಳಿನಲ್ಲೇ ಇರುವ ಹೊಸ ಪ್ರಜಾತಂತ್ರ. ಸಿಕ್ಕಿಂ, ಅರುಣಾಚಲ ಮತ್ತು ಲಢಾಖ್ ಮೂರೂ ಭಾರತದ ಅವಿಭಾಜ್ಯ ಅಂಗವಾಗಿವೆ.
೧೯೮೧ರಿಂದಲೂ ಚೀನಾ ಭಾರತದ ಗಡಿ ವಿವಾದ ಚರ್ಚೆ ಈಗಲೂ ನಡೆಯುತ್ತಲೇ ಇದೆ. ಈ ಮಾತುಕತೆ ಆಧುನಿಕ ದೇಶಗಳ ಇತಿಹಾಸದಲ್ಲೇ ಒಂದು ದಾಖಲೆ ನಿರ್ಮಿಸಿದೆ. ವಿಪರೀತ ವಿಳಂಬಕ್ಕಾಗಿ. ಈ ಚರ್ಚೆಯ ಮೇಲೆ ಪೂರ್ಣ ಹಿಡಿತ ಸಾಧಿಸುವುದೇ ಚೀನಾದ ಕುತಂತ್ರ ಎಂದು ರಕ್ಷಣಾ ತಜ್ಞರು ಹೇಳುತ್ತಾರೆ. ಚೀನಾಜ ಬೇಡಿಕೆ ಸರಳ: ಅರುಣಾಚಲ ಪ್ರದೇಶದ ಕೇವಲ ಶೇ. ೨೮ರಷ್ಟು ಪ್ರದೇಶವನ್ನು ಕೊಟ್ಟರೆ ಸಾಕು. ಇದು ಚೀನಾ ಇನ್ನೂ ನುಂಗಬೇಕಿರುವ ಟೈವಾನ್ ದೇಶದ ಗಾತ್ರಕ್ಕೆ ಸಮ. ೧೯೪೯ರಲ್ಲಿ ಶಿನ್ಜಿಯಾಂಗ್ ವಶ, ೧೯೫೦ರಲ್ಲಿ ಟಿಬೆಟ್ ಆಕ್ರಮಣ, ಅದೇ ವರ್ಷ ದಕ್ಷಿಣ ಕೊರಿಯಾದ ಮೇಲೆ ದಾಳಿ, ೧೯೬೨ರಲ್ಲಿ ಭಾರತದ ಮೇಲೆ ಏಕಾಏಕಿ ಆಕ್ರಮಣ, ೧೯೬೯ರಲ್ಲಿ ಸೋವಿಯೆತ್ ರಶ್ಯಾದೊಂದಿಗೆ ಮಿಲಿಟರಿ ಸಂಘರ್ಷ, ೧೯೭೯ರಲ್ಲಿ ವಿಯೆಟ್ನಾಮ್ ಮೇಲೆ ದಾಳಿ ಇವಿಷ್ಟು ಹೊಸ ಚೀನಾದ ರಕ್ತದಾಹಿ ಇತಿಹಾಸ. ಚೀನಾ ಎಂದರೆ ಮಾದರಿ ದೇಶ ಎಂದೆಲ್ಲ ಹಾಡಿ ಹೊಗಳುವವರು, ಚೀನಾದ ಗ್ರಾಮೀಣ ಕ್ರಾಂತಿಯ ಬಗ್ಗೆ ಗಂಟೆ ಬಜಾಯಿಸುವವರು, ಚೀನಾ ಎಂದರೆ ಸಮಾಜವಾದದ ಬೃಹತ್ ಯಶಸ್ಸು ಎಂದು ಘೋಷಿಸುವವರು ಎಲ್ಲರೂ ಚೀನಾದ ನಿಜಬಣ್ಣವನ್ನು ಅರಿತರೆ ಬೆಚ್ಚಿಬಿದ್ದಾರು.
ಚೀನಾದಲ್ಲಿ ಹಸಿವೆಯೇ ಇಲ್ಲ ಎಂದು ಇತ್ತೀಚೆಗಷ್ಟೆ ನಮ್ಮ ಒಬ್ಬ ಹಿರಿಯ ಪ್ರಾಧ್ಯಾಪಕರು ಲೇಖನ ಬರೆದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರಿಗೆ ಲಾಗೋಯ್ ಗೊತ್ತಿಲ್ಲವೇನೋ. ಚೀನಾದ ಜನಸಂಖ್ಯಾ ನೀತಿಯನ್ನು ನಮ್ಮ ಮುಖ್ಯಮಂತ್ರಿ ಯೆಡ್ಯೂರಪ್ಪ ಕರ್ನಾಟಕದಲ್ಲೂ ಪ್ರಕಟಿಸಲಿದ್ದಾರಂತೆ. ಚೀನೀ ಹಾನ್ ಜನಾಂಗವೇ ಮೆರೆಯಬೇಕೆಂದು ಚೀನಾ ಸರ್ಕಾರ ನಡೆಸಿದ ಮನುಕುಲದ ಅತಿ ಭೀಕರ ಜನಸಂಖ್ಯಾ ಅದಲು ಬದಲಿನ ಸಂಚುಗಳು ಅವರಿಗೆ ಅರಿವಿಲ್ಲವೇನೋ. ದೇಶದ ಪ್ರಮುಖ ಆಂಗ್ಲ ಪತ್ರಿಕೆಯ ಸಂಪಾದಕರೊಬ್ಬರು ಕೆಲವು ಕಲ್ಲುಗಳ ಮೇಲೆ ಚೀನಾ ಅಂತ ಬರೆದಿದ್ದಕ್ಕೇ ಇಷ್ಟು ಗಾಬ್ರಿಯಾಗ್ಬೇಕಾ. ನಮ್ಗೆಲ್ಲ ಚೀನಾ ಅನ್ನೋದು ಫೋಬಿಯಾ ಆಗ್ಬಿಟ್ಟಿದೆ ಕಣ್ರೀ, ಸುಮ್ನೆ ನೀವೆಲ್ಲ ಓವರ್ ರಿಯಾಕ್ಟ್ ಮಾಡ್ತಿದೀರಾ? ಎಂದು ಮುಖ್ಯಲೇಖನ ಬರೆದೇಬಿಟ್ಟಿದ್ದಾರೆ. ಹೋದರೆ ಹೋಗಲಿ, ಒಂದಷ್ಟು ಕಲ್ಲು ಎಂಬುದು ಅವರ ಅಭಿಮತ. ೨೦೧೦ರಲ್ಲಿ ಭಾರತ ಚೀನಾ ಮಿತ್ರದೇಶವಾದ ೬೦ನೇ ವರ್ಷವನ್ನು ಅದ್ಧೂರಿಯಿಂದ ಆಚರಿಸಲು ತೀರ್ಮಾನಿಸಿದೆ. ಹೌದು ಬಿಡಿ, ಚೀನಾ ಟಿಬೆಟನ್ನು ನುಂಗಿ ೬೦ ವರ್ಷಗಳಾಗುತ್ತವೆ. ಚೀನಾ ನೋಡಲು ಭವ್ಯ, ದಿವ್ಯ. ಅದರೊಳಗಿನ ದೃಶ್ಯಗಳು ವಿವರಿಸಲೇ ಅಸಹ್ಯ. ಮುಂದಿನ ಮೂರು ದಿನ ಚೀನಾನ ನಿಜ ಸನ್ನಿವೇಶವನ್ನು ಅಂಗೈ ಹುಣ್ಣಿನಂತಿರುವ ಸಾಕ್ಷ್ಯಾಧಾರಗಳ ಮೇಲೆ ತಿಳಿಯೋಣ. ೧೯೬೨ರಲ್ಲಿ ಭಾರತವನ್ನು ಬಗ್ಗುಬಡಿದಿದ್ದ ಚೀನಾ ಎಂದಿಗೂ ನಂಬಲನರ್ಹ ನೆರೆದೇಶ ಎಂಬುದನ್ನು ಮರೆಯದಿರೋಣ.