Adhithya Shashikumar: ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಈಗ ಆದಿತ್ಯ ಶಶಿಕುಮಾರ್(Adhithya Shashikumar) ಅಂತ ಹೆಸರು ಬದಲಾಯಿಸಿಕೊಂಡಿದ್ದು, ‘ಕಾದಾಡಿ’(Kaadaadi) ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಬಿಡುಗಡೆಗೆ ಸಜ್ಜಾಗಿರುವ ಸಿನಿಮಾತಂಡವೀಗ ಹಾಡುಗಳ ಮೂಲಕ ಸಿನಿಮಾಗೆ ಆಮಂತ್ರಣ ನೀಡಲು ಆರಂಭಿಸಿದೆ.
ಈಗಾಗಲೇ ‘ಕಾದಾಡಿ’(Kaadaadi) ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿ ಗಾನ ಪ್ರಿಯರ ಮನಸ್ಸು ಗೆದ್ದಿವೆ. ಇದೀಗ ಚಿತ್ರದ ಐಟಂ ಸಾಂಗ್ ಬಿಡುಗಡೆ ಮಾಡಿದೆ ಚಿತ್ರತಂಡ. ಕೃಷ್ಣ ಸಾಹಿತ್ಯದಲ್ಲಿ ಅರಳಿರುವ ‘ನೂರು ಪುಟದ ಜೀವನ, ಒಂದು ಏಳೆಯ ಕಾಗದ’ ಹಾಡಿಗೆ ಅನನ್ಯ ಭಟ್ ಧ್ವನಿಯಾಗಿದ್ದು, ನಾಯಕನೊಂದಿಗೆ ಬಾಂಬೆ ನಟಿ ಸೋನಿ ಚೇರಿಸ್ಟ ಹೆಜ್ಜೆ ಹಾಕಿದ್ದಾರೆ. ದಿನದ ಅಂತ್ಯದಲ್ಲಿ ಪ್ರತಿಯೊಬ್ಬರು ತ್ಯಾಗಮಯಿಯಾಗುತ್ತಾರೆ. ನಾವೆಲ್ಲರೂ ಕಾದಾಡುತ್ತಾ ಒಂದು ದಿನ ಸಾಯುತ್ತೇವೆ. ಆದರೆ ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.
ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರು. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್ ಮನೋಹರ್, ಶ್ರವಣ್ ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಡಿ.ಯೋಗಿಪ್ರಸಾದ್ ಛಾಯಾಗ್ರಹಣ, ಅರ್ಜುನ್ ಸೂರಿಸೆಟ್ಟಿ ಕಲೆ, ಪ್ರಕಾಶ್ ತೋಟ ಸಂಕಲನ, ರಾಜ್ಪಿಡಿ-ರಾಜ್ಕೃಷ್ಣ ನೃತ್ಯ, ಬಿ.ಎಲ್.ಸತೀಶ್-ವಿನ್ಚೇನ್ಆಂಜಿ-ಬಿಂಬಸಾರ-ರಾಮಕೃಷ್ಣ-ರಾಮಸುಂಕರ ಸಾಹಸ ಚಿತ್ರಕ್ಕಿದೆ. ಗೋವಾ, ಚಿಕ್ಕಮಗಳೂರು, ಹೈದರಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಾದಾಡಿ ಜುಲೈ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.