ಇಡೀ ಇಂಡಿಯಾ ಮಟ್ಟದ ಸಿನಿಮಾ ಪ್ರೇಮಿಗಳ ನಡುವಲ್ಲೀಗ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಬಗೆಗಿನ ಚರ್ಚೆ ಆರಂಭವಾಗಿದೆ. ಈ ವರ್ಷದ ಆರಂಭದಸಲ್ಲಿಯೇ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಯಾವುದೆಂಬ ಬಗ್ಗೆ ಸಮೀಕ್ಷೆಯೊಂದುಇಇಇ ನಡೆದಿತ್ತು. ಅದರಲ್ಲಿ ಸಹಜವಾಗಿಯೇ ಕನ್ನಡದಯಶ್ ನಟಿಸುತ್ತಿರುವ ಟಾಕ್ಸಿಕ್ ಚಿತ್ರ ಕೂಡಾ ಬಾಲಿವುಡ್ ಸಿನಿಮಜಾಗಳನ್ನು ಹಿಂದಿಕ್ಕಿ ಮುಂಚೂಣಿಯಲ್ಲಿತ್ತು. ಅದು ಎಲ್ಲರೂ ನಿರೀಕ್ಷಿಸಿದ್ದಂಥಾ ವಿಚಾರವೇ. ಆದರೆ, ಆ ಸಾಲಿನಲ್ಲಿ ಕನ್ನಡದ ಮತ್ತೊಂದು ಚಿತ್ರವಾದ ಕಾಂತಾರಾ ಅಧ್ಯಾಯ೧ ಕೂಡಾ ಗಟ್ಟಿಯಾಗಿಯೇ ಸ್ಥಾನ ಗಿಟ್ಟಸಿಕೊಂಡು ಅಚ್ಚರಿ ಮೂಡಿಸಿತ್ತು. ಅಷ್ಟಕ್ಕೂ ವರ್ಷಗಳ ಹಿಂದೆ ಬಿಡುಗಡೆಗೊಂಡಿದ್ದ ಕಾಂತಾರಾ ಕನ್ನಡದಲ್ಲಿ ಮಾತ್ರವೇ ರೂಪುಗೊಂಡಿದ್ದ ಚಿತ್ರ. ಆದರೂ ಅದು ಕಂಟೆಂಟಿನ ಕಾರಣದಿಂದಲೇ ಪ್ಯಾನಿಂಡಿಯಾ ಮಟ್ಟಕ್ಕೇರಿತ್ತು. ಇದೀಗ ಅಧ್ಯಾಯ ಒಂದರ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ಅಕ್ಟೋಬರ್ ೨ರಂದು ಅದರ ಬಿಡುಗಡೆ ದಿನಾಂಕವೂ ನಿಗಧಿಯಾಗಿದೆ.
ಈ ಹೊತ್ತಿನಲ್ಲಿ ದೇಶಾದ್ಯಂತ ಹಬ್ಬಿಕೊಂಡಿರುವ ಕಾಂತಾರಾ೨ ಹವಾ ನಿಜಕ್ಕೂ ಬೆರಗಾಗಿಸುವಂತಿದೆ. ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಕೂಡಾ ಒಂದು ಮಟ್ಟದಲ್ಲಿ ಕ್ರೇಜ್ ಹುಟ್ಟು ಹಾಕಿರೋದು ನಿಜ. ಆದರೆ, ಸದ್ಯದ ಮಟ್ಟಿಗೆ ಕಾಂತಾರಾ ಛಾಪ್ಟರ್೨ ಕ್ರೇಜ್ ಮಾತ್ರ ಟಾಕ್ಸಿಕ್ ಅನ್ನೂ ಮೀರಿಸುವಂತೆ ಕ್ರೇಜ್ ಹುಟ್ಟು ಹಾಕಿದೆ. ಈ ಹಿಂದೆ ಕಾಂತಾರಾ ಭಾಗ ಒಂದನ್ನು ನೋಡಿದ್ದವರೆಲ್ಲರಲ್ಲೂ ಕಾಂತಾರಾ ಭಾಗ ಎರಡರಲ್ಲಿ ಮತ್ತೆಂಥಾ ಬೆರಗು ಮೂಡಿಕೊಳ್ಳಲಿದೆ ಎಂಬಂಥಾ ಕುತೂಹಲವೊಂದು ಗಾಢವಾಗಿಯೇ ಮೂಡಿಕೊಂಡಿದೆ. ಬಹುಶಃ ಯಾವ ಪ್ರಚಾರದ ಅಬ್ಬರವಿಲ್ಲದೆಯೂ ಕಡೇ ಕ್ಷಣದಲ್ಲಿ ಒಂದಷ್ಟು ಪ್ರಚಾರ ನಡೆಸಿದರೂ ಕೂಡಾ ಕಾಂತಾರ ಅಧ್ಯಾಯ ಒಂದಕ್ಕೆ ಅಭೂತಪೂರ್ವ ಗೆಲುವು ಸಿಗುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿಯೇ ಗೋಚರಿಸುತ್ತಿದೆ.
ಅಚ್ಚರಿದಾಯಕ ಗೆಲುವು
ಕೆಜಿಎಫ್ ಎರಡನೇ ಅವತರಣಿಕೆ ಬಂದೆರಗಿದ ಮೇಲೆ ಕನ್ನಡ ಚಿತ್ರರಂಗದ ಪಥವೇ ಬದಲಾಗಿ ಬಿಟ್ಟಿತೆಂಬಂಥಾ ವಿಶ್ಲೇಷಣೆಗಳೂ ಕೇಳಿ ಬಂದಿದ್ದವು. ಆದರೆ, ಆ ಮಂಧ್ರ ಬೆಳಕಿನ ಛಾಯೆಯಲ್ಲಿ ಹೊತ್ತಿಕೊಂಡಿದ್ದ ಗೆಲುವಿನ ಪ್ರಭೆ ಮಿಕ್ಕುಳಿದ ಒಂದಷ್ಟು ಚಿತ್ರಗಳಿಗೆ ಕತ್ತಲು ಕರುಣಿಸಿತೇನೋ ಎಂಬಂಥಾ ವಾತಾವರಣ ಸೃಷ್ಟಿಯಾಗಿ ಹೋಗಿತ್ತು. ಯಾಕೆಂದರೆ, ಕೆಜಿಎಫ್ ಫ್ಲೇವರನ್ನು ನರನಾಡಿಗಳಿಗೆ ಹಬ್ಬಿಸಿಕೊಂಡಿದ್ದ ಮಂದಿಗೆ ಬೇರೆ ಸಿನಿಮಾಗಳು ರುಚಿಸದೆ ಒಂದಷ್ಟು ಸಿನಿಮಾಗಳು ಬಂದಷ್ಟೇ ವೇಗವಾಗಿ ಎಗರಿಕೊಳ್ಳುವಂತಾಗಿತ್ತು. ಈ ಹಂತದಲ್ಲಿ ತಣ್ಣಗೆ ತೆರೆಗಂಡು ದೊಡ್ಡ ಮಟ್ದಲ್ಲಿ ಸದ್ದು ಮಾಡಿದ್ದ ಚಿತ್ರ ಕಾಂತಾರ. ರಿಶಭ್ ಶೆಟ್ಟಿ ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲಿಯೂ ನಟಿಸಿರುವ ಈ ಚಿತ್ರ ಕರುನಾಡಿನ ಉದ್ದಗಲಕ್ಕೂ ಹಬ್ಬಿಕೊಂಡು, ನೆರೆಯ ರಾಜ್ಯಗಳೂ ಸೇರಿದಂತೆ ಇಡೀ ವಿಶ್ಯಾದ್ಯಂತ ಎಬ್ಬಿಸಿರುವ ಹವಾ ಸಣ್ಣ ಮಟ್ಟದ್ದೇನಲ್ಲ. ತುಳುನಾಡಿನ ಅಸ್ಮಿತೆಯಂಥಾ ಆಚರಣೆ, ಅಲ್ಲಿನ ವಾತಾವರಣ ಮತ್ತು ಆ ಬಿಂದುವಿನಿಂದ ಚಲಿಸುವ ಕಥಾನಕವನ್ನು ಎಲ್ಲ ಭಾಗಗಳ ಜನರೂ ಸಂಭ್ರಮಿಸುವಂತಾದದ್ದಿದೆಯಲ್ಲಾ? ಅದು ಕಾಂತಾರ ಚಿತ್ರದ ನಿಜವಾದ ಯಶಸ್ಸೆಂಬುದರಲ್ಲಿ ಯಾವ ಸಂದೇಹವೂ ಇಲ್ಲ!
ಸ್ಟಾರ್ ನಟರ ಅಭಿಮಾನಿ ವಲಯ, ಪ್ರೇಕ್ಷಕರ ವಲಯದಲ್ಲಿರುವ ಅಭಿರುಚಿಗಳೆಲ್ಲವನ್ನೂ ಒಂದು ಸಿನಿಮಾ ಸಾರಾಸಗಟಾಗಿ ತನ್ನತ್ತ ಸೆಳೆದುಕೊಳ್ಳುತ್ತದೆಯೆಂದರೆ, ಅದು ಸಾಮಾನ್ಯದ ಸಂಗತಿಯೇನಲ್ಲ. ಅದು ಯಾವುದೇ ಚಿತ್ರರಂಗಗಳ ಪಾಲಿಗಾದರೂ ಮನ್ವಂತರದಂಥಾ ಪಲ್ಲಟ. ಅದೀಗ ಕಾಂತಾರದ ಮೂಲಕ ನಿಸ್ಸಂದೇಹವಾಗಿಯೂ ಅದು ಘಟಿಸಿದೆ. ಇದೊಂದು ರೀತಿಯಲ್ಲಿ ಕನ್ನಡ ಪ್ರೇಕ್ಷಕರ ಪಾಲಿಗೆ ಸರ್ಪ್ರೈಸಿಂಗ್ ಚಿತ್ರ. ಕೆಲ ಚಿತ್ರಗಳು ಬಿಡುಗಡೆಪೂರ್ವದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರೂ ಚಿತ್ರಮಂದಿರದಲ್ಲಿ ಸಪ್ಪೆ ಅನ್ನಿಸಿಬಿಡುತ್ತವೆ. ಆದರೆ ಆರಂಭಿಕವಾಗಿ ಹೆಚ್ಚೇನೂ ಅಬ್ಬರವಿಲ್ಲದೆ, ಚಿತ್ರಮಂದಿರದಲ್ಲಿ ವಿಜೃಂಭಿಸುತ್ತಾ, ನಾನಾ ದಾಖಲೆ ಬರೆಯೋದಿದೆಯಲ್ಲಾ? ಅದು ಕನ್ನಡದಲ್ಲಿ ತೀರಾ ಅಪರೂಪದ ವಿದ್ಯಮಾನ. ಅಂಥಾದ್ದೊಂದು ಅಚ್ಚರಿಯನ್ನು ರಿಶಭ್ ಶೆಟ್ಟಿ ಮತ್ತವರ ತಂಡ ಕಾಂತಾರದ ಮೂಲಕ ಸಮಸ್ತ ಪ್ರೇಕ್ಷಕರಿಗೆ ಕೊಡಮಾಡಿತ್ತು.
ಧ್ಯಾನಕ್ಕೆ ದಕ್ಕಿದ್ದ ಗೆಲುವು
ಅದೆಲ್ಲದರ ಫಲವಾಗಿ ಎಲ್ಲಿ ನೋಡಿದರೂ ಕಾಂತಾರ ಚಿತ್ರದ್ದೇ ಸದ್ದು ಮೊರೆಯಲಾರಂಭಿಸಿತ್ತು. ಹಾಗಾದರೆ ಕಾಂತಾರ ಅಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಕ್ಕೆ ಕಾರಣವೇನು? ಜನ ಸಾಮೂಹಿಕವೆಂಬತೆ ಈ ಚಿತ್ರವನ್ನು ಕೊಂಡಾಡುತ್ತಿರೋದರ ಹಿಂದಿರೋ ಅಸಲೀ ಶಕ್ತಿ ಯಾವುದು? ಅಷ್ಟಕ್ಕೂ ರಿಶಭ್ ಶೆಟ್ಟಿ ಕಾಂತಾರದೊಳಗೆ ಅದೆಂಥಾ ಸಮ್ಮೋಹಕ ಶಕ್ತಿಯನ್ನು ಅಡಕವಾಗಿಸಿದ್ದರು? ಇಷ್ಟೆಲ್ಲ ಪ್ರಶ್ನೆಗಳನ್ನಿಟ್ಟುಕೊಂಡು ಹೊರಟರೆ, ಕಾಂತಾರ ಚಿತ್ರವೆಂಬುದು ಅಚ್ಚರಿಗಳ ಕಟಾಂಜನದಂತೆಯೇ ಕಾಣಿಸುತ್ತದೆ. ಈವತ್ತಿಗೆ ರಿಶಭ್ ಶೆಟ್ಟಿಯ ವೈಯಕ್ತಿಕ ನಿಲುವುಗಳು, ಆತ ಅಂಟಿಸಿಕೊಂಡಿರುವ ರಾಜಕೀಯ ಅಭಿರುಚಿಗಳ ಕೇಂದ್ರದಲ್ಲಿ ಕಾಂತಾರ ಚಿತ್ರವನ್ನು ದಿಟ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲಿ ಅಚ್ಚರಿಪಡುವಂಥಾದ್ದಾಗಲಿ, ವಿರೋಧಿಸುವಂಥಾದ್ದಾಗಲಿ ಏನೂ ಇಲ್ಲ. ಆದರೆ ರಿಶಭ್ ಶೆಟ್ಟಿಯನ್ನು ಓರ್ವ ನಿರ್ದೇಶಕನಾಗಿ, ಕಲಾವಿದನಾಗಿ ಮತ್ತು ಕಾಂತಾರವನ್ನು ಒಂದು ಚಿತ್ರವಾಗಿಯಷ್ಟೇ ನೋಡಿದರೆ ನಿಜಕ್ಕೂ ಅದೊಂದು ಬೆರಗಿನಂತೆನಿಸುತ್ತದೆ.
ಸಿನಿಮಾ ರೂಪುಗೊಳ್ಳುವ ಪ್ರಕ್ರಿಯೆಯನ್ನು ಧ್ಯಾನದಂತೆ ಪರಿಭಾವಿತಿ, ಅತೀವ ಆಸ್ಥೆಯಿಂದ ಹಚ್ಚಿಕೊಳ್ಳದೇ ಹೋದರೆ ನಿಸ್ಸಂದೇಹವಾಗಿಯೂ ಕಾಂತಾರದಂಥಾ ಚಿತ್ರವೊಂದು ಜೀವತಳೆಯಲು ಸಾಧ್ಯವಿಲ್ಲ. ಸಿನಿಮಾ ಪಂಡಿತರ ಚಿಕಿತ್ಸಕ ದೃಷ್ಟಿಕೋನಗಳಾಚೆಗೂ ಈ ಚಿತ್ರ ಈ ನೆಲದ ಜನರೆಲ್ಲರ ಭಾವಕೋಶವನ್ನು ಆವರಿಸಿಕೊಂಡ ಪರಿಯೇ ಅದ್ಭುತ. ಅಂಥಾದ್ದೊಂದು ಸಮ್ಮೋಹಕ ಕುಸುರಿಯೊಂದಿಗೆ, ನೆಲಮೂಲದ ಕಥೆಯೊಂದನ್ನು ಭೂತಾರಾಧನೆಯ ಹಿನ್ನೆಲೆಯಲ್ಲಿ ಕಟ್ಟಿಕೊಡುವಲ್ಲಿ ರಿಶಭ್ ಯಶ ಕಂಡಿದ್ದಾದ್ದರು. ಅಷ್ಟಕ್ಕೂ ರಿಶಭ್ ನಿರ್ದೇಶನ, ನಟನೆಯ ಕಾಂತಾರಾ ಒಂದಷ್ಟು ಸುದ್ದಿ ಕೇಂದ್ರಕ್ಕೆ ಬಂದಿದ್ದದ್ದೇ ಇತ್ತೀಚೆಗೆ ಟ್ರೈಲರ್ ಲಾಂಚ್ ಆದ ಬಳಿಕ. ಅದರಲ್ಲಿನ ದೃಷ್ಯ ವೈಭವ ಮತ್ತು ಕಥೆಯ ಸುಳಿವುಗಳನ್ನು ಕಂಡ ಪ್ರೇಕ್ಷಕರು ನಿಜಕ್ಕೂ ಥ್ರಿಲ್ ಆಗಿದ್ದರು. ಆದರೆ ಯಾರೆಂದರೆ ಯಾರೂ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಖುದ್ದು ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರೂ ಕೂಡಾ, ಅದು ಕೆಜಿಎಫ್ ಅನ್ನೇ ಸರಿಗಟ್ಟುವಂತೆ ಸದ್ದು ಮಾಡುತ್ತದೆಯೆಂಬ ಕಲ್ಪನೆ ಯಾರಿಗೂ ಇರಲಿಲ್ಲ.
ಭೂತದ ವೈಬ್ರೇಷನ್ನು
ಯಾವಾಗ ಕಾಂತಾರ ಬಿಡುಗಡೆಯಾಯಿತೋ, ಆ ಕ್ಷಣದಿಂದಲೇ ಭೂತಾರಾಧನೆಯ ಸಂದರ್ಭದಲ್ಲಿ ಹಬ್ಬಿಕೊಳ್ಳುವಂಥಾದ್ದೇ ವೃಬ್ರೇಷನ್ ಒಂದು ಪ್ರೇಕ್ಷಕರ ನರ ನಾಡಿಗಳಿಗೆ ಪ್ರವಹಿಸಿತ್ತು. ಯಾವತ್ತೂ ಪ್ರೇಕ್ಷಕರ ಬಾಯಿಂದ ಬಾಯಿಗೆ ಹರಡಿಕೊಳ್ಳುವ ಸದಭಿಪ್ರಾಯದಷ್ಟು ಶಕ್ತವಾದ ಪ್ರಚಾರ ಬೋರೊಂದಿಲ್ಲ. ಈ ಮಾತಿಗೆ ತಕ್ಕುದಾಗಿಯೇ ಕಾಂತಾರ ಕಂಗೊಳಿಸಲಾರಂಭಿಸಿತ್ತು. ಕಾಂತಾರ ಅಂದರೇನೇ ಅದಕ್ಕೆ ದಟ್ಟವಾದ ಕಾಡೆಂಬಂಥಾ ಅರ್ಥವಿದೆ. ಪುರಾಣಕಾಲದಲ್ಲಿಯೂ ಆ ಪದ ಮತ್ತು ಅದರ ಸುತ್ತಲಿನ ಒಂದಷ್ಟು ವಿಶ್ಲೇಷಣೆಗಳಿದ್ದಾವೆ. ಇಂಥಾದ್ದೊಂದು ಕಥೆಗೆ, ಕಾಂತಾರವೆಂಬಂಥಾ ಟೈಟಲ್ ಇಡುವಲ್ಲಿಯೇ ರಿಶಭ್ ಒಂದಿಡೀ ಚಿತ್ರವನ್ನು ಅರ್ಥಪೂರ್ಣವಾಗಿಸಿದ್ದಾರೆ. ಆ ಟೈಟಲ್ಲಿಗೆ ತಕ್ಕುದಾದ ಪಥದಲ್ಲಿ, ಒಂದಷ್ಟು ಬೆರಗಿನ ಕೊಂಬೆ ಕೋವೆಗಳೊಂದಿಗೆ ಈ ಕಥೆ ಕಳೆಗಟ್ಟಿಕೊಂಡಿತ್ತು.
ಎಲ್ಲ ಕೋನಗಳಿಂದಲೂ ಇದು ನಮ್ಮ ನೆಲದ ಕಥೆ ಅನ್ನಿಸುವ ಗುಣಗಳೇ ಕಾಂತಾರವನ್ನು ಈ ಮಟ್ಟಿಗೆ ಪ್ರಜ್ವಲಿಸುವಂತೆ ಮಾಡಿದೆ. ಒಂದು ದಟ್ಟವಾದ ಕಾಡು, ದೈವಾರಾಧನೆಯ ಜೊತೆ ಜೊತೆಗೇ ಕಾಡಂಚಿನಲ್ಲಿ ಅನಿಶ್ಚಿತತೆ ಹೊದ್ದು ಬದುಕೋ ಕಾಡಿನ ಮಕ್ಕಳು, ಕಾಡಿನ ಒಂದು ತರಗೆಲೆ ಮಿಸುಕಿದರೂ ಅಲರ್ಟ್ ಆಗಿ ಕಾಡಿನ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತ ಅರಣ್ಯಾಧಿಕಾರಿ, ಉಳ್ಳವರ ದಬ್ಬಾಳಿಕೆ, ಭೂರಹಿತರ ಆರ್ತನಾದ ಅದೆಲ್ಲದರೊಂದಿಗೆ ಹೊಮ್ಮಿಕೊಳ್ಳುವ ನವಿರುಪ್ರೇಮದ ಗಂಧ… ಸದ್ಯಕ್ಕೆ ವಿವರಣೆಯ ನಿಲುಕಿಗೆ ಸಿಗೋದು ಇಷ್ಟು ವಿಚಾರಗಳು ಮಾತ್ರ. ಅದರಾಚೆಗೆ ವರ್ಣನೆಗೆ ಸಿಗದಂಥಾ ಅಮೋಘ ಶೈಲಿಯಲ್ಲಿ ರಿಶಭ್ ಕಾಂತಾರವನ್ನು ಕಟ್ಟಿ ಕೊಟ್ಟಿದ್ದಾರೆ. ಇಲ್ಲಿರುವ ಸಣ್ಣ ಪಾತ್ರವೂ ನೋಡುಗರ ಮನಸಲ್ಲಿ ದೊಡ್ಡ ಮಟ್ಟದ ಕುರುಹುಗಳನ್ನು ಉಳಿಸುತ್ತೆ. ಸಾಮಾನ್ಯವಾಗಿ ಅದೆಷ್ಟೋ ವರ್ಷಗಳಿಂದ ಕಾಡಿನೊಂದಿಗಿನ ಸಖ್ಯದಲ್ಲಿ ಬದುಕೋ ಜನರೇ ಕಾಡುಗಳ ನಿಜವಾದ ಸಂರಕ್ಷಕರು. ಆದರೆ ಅಂಥವರನ್ನೇ ಈ ಸರ್ಕಾರಗಳು ಒಕ್ಕಲೆಬ್ಬಿಸುತ್ತಿವೆ. ಅದೆಲ್ಲವೂ ಕಾಂತಾರದಲ್ಲಿ ಕಥನವಾಗಿತ್ತು.
ದೈವೀಕ ಅನುಭೂತಿ
ಇಂಥಾ ಸಂಕೀರ್ಣವಾದ ಕಥೆಯನ್ನು ಒಂದಕ್ಕೊಂದನ್ನು ಪೂರಕವಾಗಿಸಿ, ಅಂತಿಮವಾಗಿ ಭೂತಾರಾಧನೆಯ ಬಿಂದುವಿನಲ್ಲಿ ಎಲ್ಲದಕ್ಕೂ ಒಂದು ದೈವಿಕ ಸ್ಪರ್ಶ ನೀಡಿರೋದೇ ಇಡೀ ಕಾಂತಾರದ ಯಶಸ್ಸಿನ ಗುಟ್ಟೆಂದರೂ ತಪ್ಪೇನಲ್ಲ. ಇದರೊಂದಿಗೆ ರೀಶಭ್ ಶೆಟ್ಟಿ ತಾವು ಕಂಡಂಥಾ ಕರಾವಳಿ ತೀರದ ಶ್ರೀಮಂತ ಸಸ್ಕೃತಿಯನ್ನು ಸಮರ್ಥವಾಗಿ ದೃಶ್ಯದ ಚೌಕಟ್ಟಿಗೆ ಒಗ್ಗಿಸಿದ್ದರು. ವಿಶೇಷವೆಂದರೆ, ಕರಾವಳಿ ಮತ್ತು ಮಲೆನಾಡಿನ ಒಂದಷ್ಟು ಭಾಗಗಳಿಗೆ ಮಾತ್ರವೇ ಸೀಮಿತವಾದ ಈ ಸಂಸ್ಕೃತಿಯನ್ನು ಕರ್ನಾಟಕದ ಎಲ್ಲ ಭಾಗಗಳ ಜನರೂ ತಮ್ಮದೇ ನೆಲದ್ದೆಂಬಂತೆ ಸಂಭ್ರಮಿಸುತ್ತಿದ್ದಾರೆ. ಅದರ ಪ್ರಭಾವಳಿಯೀಗ ದೇಶ, ವಿದೇಶಗಳಿಗೂ ಹಬ್ಬಿಕೊಂಡಿರೋದೇ ಈ ಚಿತ್ರದ ನಿಜವಾದ ಹೆಚ್ಚುಗಾರಿಕೆ.
ಓರ್ವ ನಿರ್ದೇಶಕನಾಗಿ ಮಾತ್ರವಲ್ಲದೇ ನಟನಾಗಿಯೂ ರಿಶಭ್ ಶೆಟ್ಟಿ ಗಮನ ಸೆಳೆಯುತ್ತಾರೆ; ಬೆರಗು ಮೂಡಿಸುತ್ತಾರೆ. ಯಾವುದೋ ಒಂದು ಬಿಂದುವಿನಲ್ಲಿ ಲಯ ತಪ್ಪಿದರೂ ಇಡೀ ಚಿತ್ರವೇ ಕಸುವು ಕಳೆದುಕೊಳ್ಳುವ ಅಪಾಯವನ್ನು ರಿಶಭ್ ಜಾಣ್ಮೆಯಿಂದಲೇ ದಾಟಿಕೊಂಡಿದ್ದಾರೆ. ಪ್ರಧಾನವಾಗಿ ಅವರು ನಟನಾಗಿ ಆಪ್ತವಾಗುತ್ತಾರೆ. ಅವರಿಗೆ ಇಂಥಾದ್ದೊಂದು ಶಕ್ತಿ ಹೇಗೆ ಬಂತೆಂದು ನೋಡುಗರೆಲ್ಲ ಅವಕ್ಕಾಗುವಂತೆ ಒಂದಷ್ಟು ದೃಷ್ಯಗಳಲ್ಲಿ ಅಬ್ಬರಿಸಿದ್ದಾರೆ. ಕಡೇಯ ಅರ್ಧ ಗಂಟೆಯಂತೂ ರಿಶಭ್ರದ್ದು ಅಕ್ಷರಶಃ ಪರಕಾಯ ಪ್ರವೇಶ. ಸಾಕ್ಷಾತ್ತು ಪಂಜುರ್ಲಿ ದೈವವೇ ಧರೆಗಿಳಿದಿದೆಯೇನೋ ಎಂಬಂಥಾ ಭಾವ ಮೂಡಿಸುವಂತೆ ರಿಶಭ್ ನಟಿಸಿದ್ದಾರೆ. ರಿಶಭ್ ಬೆಲ್ಬಾಟಂ ಮುಂತಾದ ಚಿತ್ರಗಳ ಮೂಲಕ ನಟನಾಗಿಯೂ ಸೈ ಅನ್ನಿಸಿಕೊಂಡಿದ್ದಾರೆ. ಅದಾದ ಬಳಿಕ ಅದೇ ಸಾಲಿನಲ್ಲಿ ಕೆಲವಾರು ಅವಕಾಶಗಳು ಅವರನ್ನರಸಿ ಬರುತ್ತಿವೆ. ಆದರೆ ಕಾಂತಾರದಲ್ಲಿ ಅವರ ನಟನೆಯ ವಿರಾಟ್ ರೂಪದ ದರ್ಶನವಾಗುತ್ತೆ. ಅದನ್ನು ಕಂಡ ಮಂದಿ ಈ ಬಾರಿ ಶೆಟ್ಟರಿಗೆ ನ್ಯಾಷನಲ್ ಅವಾರ್ಡ್ ಪಕ್ಕಾ ಎಂಬಂಥಾ ಭವಿಷ್ಯವನ್ನೂ ಹೇಳಲಾರಂಭಿಸಿದ್ದಾರೆ. ಇದರ ಜೊತೆಗೇ ಕಿಶೋರ್, ಅಚ್ಯುತ್ ಕುಮಾರ್. ಸಪ್ತಮಿ ಮುಂತಾದವರ ಪಾತ್ರ, ನಟನೆಯೂ ಕಾಡುವಂತೆ ಮೂಡಿ ಬಂದಿದೆ.
ಹೊಂಬಾಳೆ ಹವಾ
ಹೊಂಬಾಳೆ ಫಿಲಂಸ್ ಚಿತ್ರಗಳೆಂದರೇನೇ ಅದ್ದೂರಿಯಾಗಿರುತ್ತವೆಂಬ ನಂಬಿಕೆ ಇದೆ. ಕೆಜಿಎಫ್ ನಂತರದಲ್ಲಿ ಒಂದು ಸಣ್ಣ ಮಟ್ಟದ ಬಜೆಟ್ಟಿನ ಪ್ರಾಜೆಕ್ಟಾಗಿ ವಿಜಯ್ ಕಿರಗಂದೂರು ಈ ಚಿತ್ರವನ್ನು ಆರಂಭಿಸಿದಂತಿದೆ. ಬಹುಶಃ ದೃಷ್ಯವಾಗಿ ಈ ಚಿತ್ರ ಇಷ್ಟೊಂದು ಅದ್ದೂರಿಯಾಗಿ ಮೂಡಿ ಬರುತ್ತದೆ, ಪ್ಯಾನಿಂಡಿಯಾ ಸಿನಿಮಾವಾಗಿ ನೆಲೆ ಕಂಡುಕೊಳ್ಳುತ್ತದೆಂಬ ನಿರೀಕ್ಷೆ ಕಿರಗಂದೂರಿಗೂ ಇರಲಿಲ್ಲವೇನೋ. ಆದರೆ ಸಿಕ್ಕ ಆರು ಕೋಟಿ ಬಜೆಟ್ಟನ್ನು ಹೇಗೆಲ್ಲ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದೋ, ಅಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ರಿಶಭ್ ದೃಷ್ಯ ಕಟ್ಟಿದ್ದಾರೆ. ವಿಶೇಷವಾಗಿ, ತಾಂತ್ರಿಕವಾಗಿಯೂ ಕಾಂತಾರ ಮತ್ತೊಂದು ಲೆವೆಲ್ಲಿನಲ್ಲಿದೆ. ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಮತ್ತು ಸಂಗೀತ ನಿರ್ದೇಶ ಅಜನೀಶ್ ಲೋಕನಾಥ್ ಕೈಚಳಕವೂ ಇಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದೆ. ಇದೀಗ ಟ್ಯೂನು ಕದ್ದ ಆರೋಪ ಅಜನೀಶ್ ಸುತ್ತ ಗಸ್ತು ಹೊಡೆಯುತ್ತಿದ್ದರೂ, ಒಂದು ವೇಳೆ ಅದು ಸುಳ್ಳು ಅಂತಾದರೆ ಅವರ ಕೆಲಸವೂ ಕಾಂತಾರದ ಹೈಲೈಟ್ ಅನ್ನೋದರಲ್ಲಿ ಎರಡು ಮಾತಿಲ್ಲ.
ಈಗಂತೂ ಕನ್ನಡದಲ್ಲಿ ಪ್ಯಾನಿಂಡಿಯಾ ಸಿನಿಮಾ ಹಂಗಾಮಾ ಶುರುವಾಗಿ ಬಿಟ್ಟಿದೆ. ಒಂದಷ್ಟು ಭಾಷೆಗಳಲ್ಲಿ ಏಕಕಕಾಲದಲ್ಲಿ ತಯಾರು ಮಾಡಿ, ನಾನಾ ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆಗೊಳಿಸುವ ಕನಸು ಪ್ರತಿಯೊಬ್ಬರೊಳಗೂ ಕೊನರಿಕೊಂಡಿದೆ. ಆದರೆ, ಅಂಥಾ ಯಾವ ಗೋಜಿಗೂ ಹೋಗದೆ ರೀಶಭ್ ಶೆಟ್ಟಿ ಕನ್ನಡವನ್ನಷ್ಟೇ ಕೇಂದ್ರಿತವಾಗಿಸಿಕೊಂಡು ಕಾಂತಾರವನ್ನು ರೂಪಿಸಿದ್ದರು. ಹೇಳಿಕೇಳಿ ಅದು ಭೂತಾರಾಧನೆಯೇ ಪ್ರಧಾನ ಸೆಳೆತವಾಗಿರುವ ಚಿತ್ರ. ಭೂತಾರಾಧನೆ ಎಂಬುದು ತುಳುನಾಡಿನ ಜನರ ನಂಬಿಕೆಯ ವಿಚಾರ. ನಮ್ಮದೇ ಕರ್ನಾಟಕದ ಬೇರೆ ಭೂಭಾಗಗಳಿಗೆ ಮಾಧ್ಯಮ ಮುಖೇನವಷ್ಟೇ ಅದೀಗ ಪರಿಚಯವಾಗಿದೆ. ಹಾಗಿರುವಾಗ, ಇಡೀ ಕರ್ನಾಟಕಕ್ಕೆ ಈ ಕಥಾನಕ ರುಚಿಸುತ್ತದೆಂಬಂಥಾ ನಂಬಿಕೆಯೂ ರಿಶಭ್ಗೆ ಆರಂಭಿಕವಾಗಿ ಇದ್ದಂತಿಲ್ಲ. ಆದರೆ ಅದೆಲ್ಲವೂ ಈಗ ಅದಲುಬದಲಾಗಿದೆ!
ಭೂತಾರಾಧನೆಯ ಗಂಧಗಾಳಿ ಗೊತ್ತಿಲ್ಲದ ಉತ್ತರ ಕರ್ನಾಟಕದ ಮಂದಿಯೂ ಕಾಂತಾರ ಚಿತ್ರವನ್ನು ಕಂಡು ರೋಮಾಂಚಿತರಾಗಿದ್ದಾರೆ. ಹಾಗೆ ಈ ಚಿತ್ರವನ್ನು ನೋಡಿದವರನೇಕರು ಆರಂಭದಿಂದಲೇ ಇದನ್ಯಾಕೆ ಪ್ಯಾನಿಂಡಿಯಾ ಮಟ್ಟದಲ್ಲಿ ಮಾಡಿಲ್ಲ ಅಂತೊಂದು ಪ್ರಶ್ನೆ ಕೇಳಿದ್ದರು. ಇದೆಲ್ಲದರ ನಡುವೆಯೇ ವಾರದಿಂದ ವಾರಕ್ಕೆ ಕಾಂತಾರ ಕ್ರೇಜ್ ಜ್ವರದಂತೆ ಏರುಗತಿ ಕಾಣುತ್ತಿದೆ. ಈ ವರದಿ ಸಿದ್ಧವಾಗುತ್ತಿರುವ ಈ ಘಳಿಗೆಯಲ್ಲಿ ಕಾಂತಾರದ ಒಟ್ಟಾರೆ ಕಲೆಕ್ಷನ್ನು ಐವತ್ತು ಕೋಟಿಯ ಗಡಿ ದಾಟಿದ ಸುದ್ದಿ ಸದ್ದು ಮಾಡುತ್ತಿದೆ. ಒಂದು ಬಾರಿ ಈ ಚಿತ್ರವನ್ನು ನೋಡಲೇಬೇಕೆಂಬಂಥಾ ಅತೀವ ಸೆಳೆತವೊಂದು ಸರ್ವರನ್ನೂ ಆವರಿಸಿಕೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ಕಾಂತಾರ ನೋಡ ನೋಡುತ್ತಲೇ ಪ್ಯಾನಿಂಡಿಯಾ ಸಿನಿಮಾವಾಗಿ ರೂಪಾಂತರಗೊಂಡು ಬಿಟಿತ್ತು!
ಹಿಂದಿಯಲ್ಲೂ ಅಬ್ಬರ
ಕರಾವಳಿಯ ಸೊಬಗನ್ನು, ಅಲ್ಲಿನ ದೈವಗಳ ಕಾರಣೀಕವನ್ನು ಸಾರುವ ಕಾಂತಾರ ಹಿಂದಿಗೆ ಡಬ್ ಆಗಿ ಬಿಡುಗಡೆಗೊಂಡು ಅಲ್ಲಿಯೂ ಸೂಪರ್ ಹಿಟ್ಟಾಗಿತ್ತು. ಈ ಚಿತ್ರ ಎಲ್ಲ ಭಾಷೆಗಳಲ್ಲಿಯೂ ಬಿಡುಗಡೆಯಾಗಬೇಕೆಂಬ ಪ್ರೇಕ್ಷಕರ ಪ್ರೀತಿಯ ಒತ್ತಾಯಕ್ಕೆ ಹೊಂಬಾಳೆ ಫಲಂಸ್ ತಲೆಬಾಗಿತ್ತು. ಕಾಂತಾರದ ಅಭೂತಪೂರ್ವ ಯಶಸ್ಸಿನೊಂದಿಗೆ ಕುಂದಾಪುರದ ಕೆರಾಡಿ ಸೀಮೆಯಿಂದ ಬಂದ ರಿಶಭ್ ಶೆಟ್ಟರ ಸಿನಿಮಾ ಜರ್ನಿ ಸಾರ್ಥಕ್ಯ ಕಂಡಿತ್ತು. ಈಗ ಅವರು ತಲುಪಿಕೊಂಡಿರುವ ಹಂತವನ್ನು ಗಮನಿಸಿದವರು, ರಿಶಭ್ ಚಿನ್ನದ ಚಮಚವನ್ನೇ ಬಾಯಲಿಟ್ಟುಕೊಂಡು ಬೆಳೆದವರೆಂಬ ಭಾವನೆ ಮೂಡಿದ್ದರೆ ಅಚ್ಚರಿಯೇನಿಲ್ಲ. ಆದರೆ ರಿಶಭ್ ಮಧ್ಯಮ ವರ್ಗದ ಕುಟುಂಬದಿಂದ ಬಂದು. ಕಡುಗಷ್ಟವನ್ನು ಕಂಡುಂಡು ಬೆಳೆದವರು. ಆರಂಭದಿಂದಲೂ ಯಕ್ಷಗಾನ ಮುಂತಾದ ಕಲಾ ಪ್ರಾಕಾರಗಳಲ್ಲಿ ಆಸಕ್ತಿ ಹೊಂದಿದ್ದ ರಿಶಭ್, ಆ ಕಾಲದಲ್ಲಿಯೇ ನಿರ್ದೇಶಕನಾಗುವ ಕನಸು ಕಂಡವರು. ಆ ಹಂತದಲ್ಲಿಯೇ ಬದುಕು ನಡೆಸುವ ದರ್ದಿಗೆ ಬಿದ್ದು ಸೋಲಾರ್ ವ್ಯವಹಾರ, ಬಿಸ್ಲೆರಿ ನೀರು ಮಾರುವ ಕೆಲಸವೂ ಸೇರಿದಂತೆ ಅನೇಕ ರೀತಿಯಲ್ಲಿ ಸೈಕಲ್ಲು ಹೊಡೆದ ಶೆಟ್ಟರಿಗೆ ಸಿನಿಮಾ ಜರ್ನಿ ಕೂಡಾ ಸಲೀಸಿನದ್ದಾಗಿರಲಿಲ್ಲ.
ಹಾಗೆ ಕಷ್ಟಪಟ್ಟು, ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುತ್ತಾ, ಬದುಕು ಕಾಡಿಸಿದರೂ ತಮ್ಮೊಳಗಿದ್ದ ಅತೀವವಾದ ಸಿನಿಮಾ ವ್ಯಾಮೋಹವನ್ನು ಕಾಪಿಟ್ಟುಕೊಳ್ಳುತ್ತಾ ಸಾಗಿ ಬಂದ ರಿಶಭ್ ಶೆಟ್ಟಿಯೀಗ ದೊಡ್ಡ ಮಟ್ಟದಲ್ಲಿ ಗೆದ್ದಿದ್ದಾರೆ. ಇದು ನಮ್ಮದೇ ಹಾದಿಯಲ್ಲಿ ಅವುಡುಗಚ್ಚಿ ಸಾಗಿದರೆ ನಿಧಾನಕ್ಕಾದರೂ ಪುಷ್ಕಳ ಗೆಲುವು ದಕ್ಕಿಯೇ ತೀರುತ್ತದೆಂಬುದಕ್ಕೊಂದು ತಾಜಾ ಉದಾಹರಣೆ. ಯಾರದ್ದೋ ಕೂಸಿಗೆ ಅಪ್ಪ ಅನ್ನಿಸಿಕೊಳ್ಳುವವರು, ಯಾರದ್ದೋ ಕನಸನ್ನು ತನ್ನದಾಗಿಸಿಕೊಂಡು ಮೆರೆಯುವವರು ಯಾವತ್ತಿದ್ದರೂ ಮಣ್ಣುಪಠಾಲಾಗುತ್ತಾರೆ. ಇಲ್ಲಿ ಬೆಳಗುವುದು, ಬಾಳಿಕೆ ಬರುವುದು ಸ್ವಂತದ ಪ್ರತಿಭೆಯೊಂದೇ. ಈ ಮಾತಿಗೆ ಸದ್ಯದ ತಾಜಾ ಉದಾಹರಣೆಯಾಗಿ ಕಾಣುವವರು ರಿಶಭ್ ಶೆಟ್ಟಿ. ಅವರೀಗ ಅಪ್ರಯತ್ನಾಪೂರ್ವಕವಾಗಿ ನಟನಾಗಿ, ನಿರ್ದೇಶಕನಾಗಿ ಪ್ಯಾನಿಂಡಿಯಾ ಲೆವೆಲ್ಲಿಗೆ ರೀಚ್ ಆಗಿದ್ದಾರೆ. ಕಾಂತಾರ ಒಂದು ಮಾಸ್ಟರ್ ಪೀಸ್ ಚಿತ್ರವಾಗಿ ಸಾರ್ವಕಾಲಿಕ ಸ್ಥಾನ ಗಿಟ್ಟಿಸಿಕೊಂಡಿದೆ. ಅದರ ಬೆನ್ನಲ್ಲಿಯೇ ಮತ್ತೊಂದು ಲೆವೆಲ್ಲಿನ ಕ್ರೇಜ್ ನೊಂದಿಗೆ ಕಾಂತಾರಾ ಅಧ್ಯಾಯ ಒಂದು ರೂಪುಗೊಳ್ಳುತ್ತಿದೆ.
ಉತ್ತರದಲ್ಲಿ ಕನ್ನಡದ ಕಹಳೆ!
ನಾವೆಲ್ಲ ಭಾಷೆಗಳ ಹೆಸರಲ್ಲಿ ಅದೆಷ್ಟೇ ತಕರಾರು ತೆಗೆದರೂ, ಬಡಿದಾಟಕ್ಕಿಳಿದರೂ, ಕಲೆಯೆಂಬುದಕ್ಕೆ ದೇಶ ಭಾಷೆಗಳ ಗಡಿರೇಖೆಗಳಿಲ್ಲ. ಅದರಲ್ಲಿಯೂ ಎಲ್ಲ ರೀತಿಯಿಂದಲೂ ಶಕ್ತವಾಗಿರುವ ಸಿನಿಮಾವೊಂದು ಎಲ್ಲರನ್ನೂ ಇಡಿಯಾಗಿ ಆವರಿಸಿಕೊಳ್ಳುತ್ತದೆ. ಈ ಮೂಲಕ ಅನೇಕ ದಾಖಲೆಗಳ ರೂವಾರಿಯಾಗುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಲ್ಲುವ ಚಿತ್ರ ಕಾಂತಾರ. ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಗಡಿ ವಿವಾದ ಲಾಗಾಯ್ತಿನಿಂದಲೂ ಚಾಲ್ತಿಯಲ್ಲಿದೆ. ಅಂಥಾ ನೆಲದ ಭಾಗವಾಗ ಮುಂಬೈನಲ್ಲಿ ದಕ್ಷಿಣ ಭಾರತದ ಚಿತ್ರವೊಂದು ಹಿಂದಿಗೆ ಡಬ್ ಆಗದೆ ಬಿಡುಗಡೆಗೊಂಡಿದ್ದ ಇತಿಹಾಸವೇ ಇಲ್ಲ. ಅಂಥಾದ್ದೊಂದು ಐತಿಹಾಸಿಕ ದಾಖಲೆ ಕಾಂತಾರ ಚಿತ್ರದಿಂದ ಸಾಧ್ಯವಾಗಿತ್ತು.
ಮುಂಬೈನ ಮರಾಠಾ ಚಿತ್ರಮಂದಿರದಲ್ಲಿಯೆ ಕಾಂತಾರ ಕನ್ನಡದಲ್ಲಿ ತೆರೆಗಂಡಿತ್ತು. ಅಲ್ಲಿ ಭರ್ಜರಿಯಾದ ಪ್ರದರ್ಶನವನ್ನೂ ಕಂಡಿತ್ತು. ಇದುವರೆಗೂ ಯಾವ ದಕ್ಷಿಣ ಭಾರತೀಯ ಚಿತ್ರಗಳೂ ಕಾಣಲು ಸಾಧ್ಯವಾಗದಷ್ಟು ಶೋಗಳನ್ನು ತನ್ನದಾಗಿಸಿಕೊಂಡಿತ್ತು. ಕನ್ನಡ ಚಿತ್ರ ಮರಾಠ ಚಿತ್ರಮಂದಿರದಲ್ಲಿ ಮಾಡಿದ ಈ ದಾಖಲೆ ಕಂಡು ಖುದ್ದು ಆ ಚಿತ್ರಮಂದಿರದ ಆಡಳಿತ ಮಂಡಳಿಯೇ ಬೆರಗಾಗಿ ಬಿಟ್ಟಿತ್ತು. ಮರಾಠ ಚಿತ್ರಮಂದಿರದಲ್ಲಿ ಹಿಂದಿಗೆ ಡಬ್ ಆಗದೆ ಬಿಡುಗಡೆಗೊಂಡ ಏಕೈಕ ಚಿತ್ರವೆಂಬ ಹೆಗ್ಗಳಿಕೆಗೂ ಕಾಂತಾರ ಪಾತ್ರವಾಗಿದೆ. ಕನ್ನಡದ ಅನೇಕ ಚಿತ್ರಗಳು ಹಿಂದಿಗೆ ಡಬ್ ಆಗಿ ಈ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿವೆ. ಆದರೆ ಕಾಂತಾರ ಮಾಡಿದಂಥಾ ದಾಖಲೆಗಳು ಈವರೆಗೂ ಸಾಧ್ಯವಾಗಿಲ್ಲ. ಬಹುಶಃ ಈ ಚಿತ್ರ ಮಾಡಿರುವ ಗಳಿಕೆಯ ದಾಖಲೆಯನ್ನು ಮುರಿಯುವುದು ಕೂಡಾ ಅಷ್ಟು ಸಲೀಸಿನ ಸಂಗತಿಯಲ್ಲ. ಹೀಗೆ ಎಲ್ಲ ಬಗೆಯಲ್ಲಿಯೂ ಕಾಂತಾರ ದಾಖಲೆಯ ಮೇಲೆ ದಾಖಲೆ ಬರೆದಿತ್ತು.
ಇದೀಗ ಕಾಂತಾರಾ ಅಧ್ಯಾಯ ಒಂದರ ಸರದಿ ಬಂದಿದೆ. ಈಗಿನ ವಾತಾವರಣವನ್ನು ಆಧರಿಸಿ ಹೇಳೋದಾದರೆ, ಈ ಸಿನಿಮಾ ಆರಂಭಿಕ ದಾಖಲೆಗಳನ್ನು ಪುಡಿಗಟ್ಟಿ ಮತ್ತೊಂದಷ್ಟು ಮೈಲಿಗಲ್ಲು ನೆಟ್ಟರೂ ಅಚ್ಚರಿಯೇನಿಲ್ಲ. ಒಂದು ವೇಳೆ ಜನರ ನಿರೀಕ್ಷೆಗಳಿಗೆ ತಕ್ಕುದಾಗಿ ಈ ಸಿನಿಮಾವೇನಾದರೂ ಮೂಡಿ ಬಂದದ್ದೇ ಹೌದಾದರೆ, ಎಲ್ಲರೂ ತಿರುಗಿ ನೋಡುವಂಥಾ ದಾಖಲೆಗಳಾದರೂ ಅಚ್ಚರಿಯೇನಿಲ್ಲ. ಇತ್ತ ಈ ಬಾರಿ ಚಿತ್ರೀಕರಣದ ಹಂತದಲ್ಲಿಯೇ ರಿಶಭ್ ಶೆಟ್ಟಿಗೆ ಚಿತ್ರೀಕರಣದ ವಿಚಾರದಲ್ಲಿ ಒಂದಷ್ಟು ತೊಡಕುಗಳು ಎದುರಾಗಿದ್ದವು. ಆದರೀಗ ಎಲ್ಲವೂ ಹಳಿ ಹಿಡಿದಂತಿದೆ. ಈಗಂತೂ ಪ್ಯಾನಿಂಡಿಯಾ ಮಟ್ಟದಲಲಿ ಚಿತ್ರವೊಂದು ತಾನೇ ತಾನಾಗಿ ಹೈಪ್ ಕ್ರಿಯೇಟ್ ಮಾಡೋದು ಸವಾಲಿನ ಸಂಗತಿ. ಅಂಥಾದ್ದರಲ್ಲಿ ಕಾಂತಾರಾ ಅಧ್ಯಾಯ ಒಂದರ ಕ್ರೇಜ್ ಬೆರಗಾಗಿಸುವಂತಿದೆ. ಈ ಪ್ರಭೆ ಕಂಡು ಬಾಲಿವುಡ್ ಮಂದಿಯೇ ಅವಾಕ್ಕಾಗಿರೋದಂತೂ ಸತ್ಯ!