ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮಾಲ್ಡೀವ್ಸ್ ಗೆ ಟಕ್ಕರ್ ಕೊಟ್ಟ ವಿದ್ಯಮಾನದ ನಂತರ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಪ್ರವಾಸಿ ತಾಣ ಲಕ್ಷ ದ್ವೀಪ. ಭಾರತದಲ್ಲಿ ವಿದೇಶಿಗರನ್ನೂ ಕೂಡಾ ಬೆರಗಾಗಿಸುವ ಅದೆಷ್ಟೋ ಚೆಂದದ ತಾಣಗಳಿದ್ದಾವೆ. ಒಂದು ಕಾಲದಲ್ಲಿ ಅವೆಲ್ಲವೂ ಅತ್ಯಂತ ಸುಸಜ್ಜಿತವಾಗಿ, ಸ್ವಚ್ಛವಾಗಿದ್ದದ್ದು ಸತ್ಯ. ಯಾವುದೇ ಪ್ರದೇಶಕ್ಕಾದರೂ ಮಾನವನ ಪ್ರವೇಶವಾದರೆ ಅಲ್ಲಿಗೆ ಅದರ ಪ್ಯೂರಿಟಿ ಕೊನೆಯಾಯ್ತೆಂದೇ ಅರ್ಥ. ಹಾಗಿರುವಾಗ ವರ್ಷಕ್ಕೆ ಲಕ್ಷಗಟ್ಟಲೆ ಪ್ರವಾಸಿಗರು ಒಂದು ತಾಣಕ್ಕೆ ಭೇಟಿ ಕೊಡುತ್ತಾರೆಂದರೆ, ಅದನ್ನು ಪ್ರಕೃತಿ ಸಹಜವಾಗಿ ಕಾಪಾಡಿಕೊಳ್ಳೋದು ಕಷ್ಟದ ವಿಚಾರ. ಹಾಗಿದ್ದರೂ ಕೂಡಾ ಒಂದು ಪ್ರವಾಸಿ ತಾಣ ಸ್ವಚ್ಛವಾಗಿಯೇ ಉಳಿದಿದೆ ಎಂದರೆ ಅದು ನಿಜಕ್ಕೂ ಆಧುನಿಕ ಜಗತ್ತಿನ ಮಹಾ ಮ್ಯಾಜಿಕ್ಕಿನಂತೆ ಕಾಣಿಸುತ್ತದೆ.
ಅಂಥಾದ್ದೊಂದು ಅಚ್ಚರಿಗೆ ಪಾತ್ರವಾದ ಪ್ರದೇಶ ಲಕ್ಷ ದ್ವೀಪ. ಈ ದ್ವೀಪ ಸಮೂಹ ಭಾರತಕ್ಕೆ ಪ್ರಕೃತಿ ಕೊಟ್ಟ ವರವೆಂದರೂ ತಪ;ಪೇನಿಲ್ಲ. ನಮ್ಮ ದೇಶದ ನಾನಾ ಕಿನಾರೆಗಳಲ್ಲಿ ಅಚ್ಚರಿ ಮೂಡಿಸುವಂಥಾ ಅನೇಕ ದ್ವೀಪಗಳಿದ್ದಾವೆ. ಸಾಮಾನ್ಯವಾಗಿ ಒಂದು ಕಿನಾರೆಯಲ್ಲಿ ಇಂಥಾ ಒಂದೆರಡು ದ್ವೀಪಗಳಿರುತ್ತವೆ. ಆದರೆ, ಇಲ್ಲಿ ಮಾತ್ರ ಕಣ್ಣು ಹಾಯಿಸಿದಷ್ಟೂ ದೂರ ದ್ವೀಪಗಳೇ ಕಾಣಿಸುತ್ತವೆ. ಅದರತ್ತ ಸುಳಿದಾಡೋದೇ ಪ್ರವಾಸಿಗರ ಪಾಲಿಗೆ ಅಕ್ಷರಶಃ ದೈವೀಕ ಅನುಭೂತಿ ಮೂಡಿಸುತ್ತದೆ. ಈ ಕಾರಣದಿಂದಲೇ ಈ ಲಕ್ಷದ್ವೀಪಕ್ಕೆ ಬದುಕಿನಲ್ಲಿ ಒಮ್ಮೆಯಾದರೂ ಭೇಟಿ ಕೊಡಬೇಕೆಂಬುದು ಬಹುತೇಕರ ಜೀವಮಾನದ ಕನಸಾಗಿರುತ್ತೆ. ಬಾರತದಲ್ಲಿ ಮಾತ್ರವಲ್ಲದೆ ವಿದೇಶದ ಮಂದಿಯೂ ಇಲ್ಲಿಗೆ ಬರಲು ಸದಾ ಕಾತರರಾಗಿರುತ್ತಾರೆ.
ಬೆರಗಿನ ದ್ವೀಪ ಸಮೂಹ ಎಂಬುದು ಪ್ರಕೃತಿ ಸೃಷ್ಟಿಸಿದ ಸಜೀವ ಅಚ್ಚರಿಯಂತೆ ಕಾಣಿಸುತ್ತದೆ. ಈ ಹೆಸರೇ ಸೂಚಿಸುವಂತೆ ಅದೊಂದು ದ್ವೀಪಗಳ ಬಹುದೊಡ್ಡ ಸಮೂಹ. ನಮ್ಮ ದೇಶದ ಅರಬ್ಬೀ ಸಮುದ್ರದಲ್ಲಿ ಸರಿ ಸುಮಾರು ಮೂವತ್ತಾರು ಹವಳದ ಬಂಡೆಗಳ ದ್ವೀಪ ಸಮೂಹವೇ ಲಕ್ಷ ದ್ವೀಪವಾಗಿ ಪ್ರಸಿದ್ಧಿ ಪಡೆದುಕೊಂಡಿದೆ. ನಮ್ಮ ದೇಶದ ತುಂಬಾನೇ ಪ್ರಾಚೀನವಾದ, ನೈಸರ್ಗಿಕವಾಗಿ ವರ್ಣಿಸಲು ಸಾಧ್ಯವಾಗದಷ್ಟು ಶ್ರೀಮಂತವಾಗಿರುಜವ, ಆ ಬೆರಗಿಗೆ ತಕ್ಕುದಾದ ಸ್ವಚ್ಛತೆ ಕಾಪಾಡಿಕೊಂಡಿರುವ ಈ ಪ್ರದೇಶದಲ್ಲಿ ನೀರೆಂಬುದು ಸ್ಪಟಿಕದಷ್ಟೇ ಶುದ್ಧ ಸ್ಪಷ್ಟವಾಗಿದೆ. ಅಂಥಾ ನೀರಿನಲ್ಲಿ ರೋಮಾಂಚಕ ಹವಳದ ಬಂಡೆಗಳು ಕಾಣಿಸುತ್ತವೆ. ಸದಾ ಪ್ರಜ್ವಲಿಸುವ ಕರಾವಳಿ ತೀರ ಈ ದ್ವೀಪ ಸಮೂಹಗಳಲ್ಲಿ ಇದೆ. ಈ ಎಲ್ಲ ಕಾರಣಗಳಿಂದಾಗಿ ನಮ್ಮ ದೇಶದ ಸ್ವಚ್ಚ ಕರಾವಳಿ ತೀರ ಂಬ ಖ್ಯಾತಿ ಲಕ್ಷ ದ್ವೀಪಕ್ಕಿದೆ. ಈ ಕಾರಣದಿಂದಲೇ ಇದು ದೇಶ ವಿದೇಶಗಳ ಪ್ರವಾಸಿಗರ ಪಾಲಿನ ನೆಚ್ಚಿನ ತಾಣವಾಗಿದೆ!
ಬುಡಕಟ್ಟು ಜನಾಂಗ
ನಮ್ಮ ದೇಶದಲ್ಲಿ ಅದೆಷ್ಟೋ ಸುಂದರ ತಾಣಗಳು ಒಂದು ಕಾಲದಲ್ಲಿ ಬುಡಕಟ್ಟು ಜನಾಂಗಗಳ ದೇಖಾರೇಖಿಯಲ್ಲಿತ್ತು. ಇಂಥಾ ಬುಡಕಟ್ಟು ಜನಾಂಗಗಳು ಪ್ರಕೃತಿಯನ್ನೇ ದೇವರೆಂದು ನಂಬೋದರಿಂದ ಅದಕ್ಕೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ. ಅಂಥಾ ಬುಡಕಟ್ಟು ಜನಾಂಗಗಳ ಕಾರಣದಿಂದಲೇ ಲಕ್ಷ ದ್ವೀಪ ಪಾವಿಕತ್ರ್ಯ ಉಳಿಸಿಕೊಂಡಿದೆ ಅನ್ನೋದು ನಿರ್ವಿವಾದ. ಈ ದ್ವೀಪ ಸಮೂಹ ವಿಮಾನ ಮತ್ತು ಸಮುದ್ರ ಮಾರ್ಗದ ಮೂಲಕವಷ್ಟೇ ಸಂಪರ್ಕ ಹೊಂದಿದೆ. ಯಾರೇ ಈ ದ್ವೀಪ ಪ್ರದೇಶಕ್ಕೆ ತೆರಳಬೇಕೆಂದರೂ ಕೇರಳದ ಕೊಚ್ಚಿನ್ ಮತ್ತು ಕರ್ನಾಟಕದ ಮಂಗಳೂರು ಮೂಲಕ ಸಮುದ್ರ ಮಾರ್ಗದಿಂದ ಅಥವಾ ವಿಮಾನದ ಮೂಲಕ ತೆರಳಬೇಕಾಗುತ್ತೆ. ಈ ದ್ವೀಪ ಸಮೂಹದಲ್ಲಿ ಸರಿಸುಮಾರು ತೊಂಬತ್ತು ಭಾಗದಷ್ಟು ದಟ್ಟವಾದ ಕಾಡಿದೆ. ಅಲ್ಲಿನ ಹೆಚ್ಚಿ ಪ್ರದೇಶಗಳು ರಕ್ಷಿತ ವಲಯಕ್ಕೆ ಸೇರಿದ್ದಾವೆ. ಅಲ್ಲಿನ ಕೆಲವಾರು ಭಾಗಗಳಲ್ಲಿ ಮಾತ್ರವೇ ಜನ ವಸತಿ ಇದೆ. ಹಾಗೆ ಇಲ್ಲಿ ವಾಸವಿರುವ ಜನರೆಲ್ಲ ಅಳಿವಿನಂಚಿನಲ್ಲಿರುವ ಬುಡಕಟ್ಟು ಜನಾಂಗದವರು. ಇಲ್ಲಿರುವ ಅಷ್ಟೂ ದ್ವೀಪಗಳಲ್ಲಿ ಹನ್ನೊಂದು ದ್ವೀಪಗಳಲ್ಲಿ ಮಾತ್ರವೇ ಅಂಥಾ ಬುಡಕಟ್ಟು ಜನರು ವಾಸವಿದ್ದಾರಂತೆ.
ಪ್ರತ್ಯೇಕ ಅಸ್ತಿತ್ವ
ಈ ಲಕ್ಷ ದ್ವೀಪಗಳಿಗೆ ಪೌರಾಣಿಕ ಹಿನ್ನೆಲೆಯೂ ಇದೆ. ಲಾಗಾಯ್ತಿನಿಂದಲೂ ಇದು ಭಾರತದ ಭೂಭಾಗವಾಗಿಯೇ ಉಳಿದುಕೊಂಡು ಬಂದಿದೆ. ಹಾಗಾದರೆ ಈ ದ್ವೀಪ ಸಮೂಹದಲ್ಲಿ ಅದೆಷ್ಟು ಜನ ವಾಸಿಸುತ್ತಿದ್ದಾರೆಂಬ ಕುತೂಹಲ ಕಾಡೋದು ಸಹಜ. ಈ ದಿಕ್ಕಿನಲ್ಲಿ ತಲಾಷಿಗಿಳಿದರೆ ಈ ದ್ವೀಪ ಸಮೂಹದಲ್ಲಿ ಇದೀಗ ಸರಿ ಸುಮಾರು ಎಪ್ಪತ್ತು ಸಾವಿರದಷ್ಟು ಮಂದಿ ವಾಸವಿದ್ದಾರೆ. ಅದೊಂದು ರೀತಿಯಲ್ಲಿ ಸರ್ವ ಧರ್ಮಗಳ ಸಮನ್ವಯ ಪ್ರದೇಶ. ಇಲ್ಲಿ ಎಲ್ಲ ಧರ್ಮಗಳವರೂ ಇದ್ದಾರಾದರೂ ಹಿಂದೂ ಸಮುದಾಯದ ಸಂಖ್ಯೆ ಅಧಿಕವಿದೆ. ಸದರಿ ದ್ವೀಪಗಳಲ್ಲಿ ಜೆಸ್ಸೆರಿ, ಮಲಯಾಳಂ, ಮಹಲ್ ಭಾಷೆಗಳನ್ನು ಮಂದಿ ಮಾತಾಡುತ್ತಾರೆ. ಮುಂದುವರೆದು ನೋಡಿದರೆ, ಉತ್ತರ ದ್ವೀಪಗಳ ಜನರು ತಮಿಳು ಮತ್ತು ಅರೇಬಿಕ್ ಪ್ರಭಾವಿತ ಮಲಯಾಳಮ್ಮಿನ ಉಪಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಮಾತಾಡುತ್ತಾರೆ. ಇಲ್ಲಿನ ವ್ಯವಹಾರಗಳು ಬಹುತೇಕ ಈ ಭಾಷೆಯಲ್ಲಿಯೇ ನಡೆಯುತ್ತವೆ.
ಇಂಥಾ ದ್ವೀಪ ಒಂದಷ್ಟು ಕಾಲದಿಂದಲೂ ಆಡಳಿತಾತ್ಮಕವಾಗಿ ಒಂದಷ್ಟು ಸವಾಲುಗಳನ್ನು ಬಎದುರಿಸುತ್ತಾ ಬಂದಿತ್ತು. ಹೇಳಿಕೇಳಿ ಅದು ಭೂ ಭಾಗದಿಒಂದ ಕಳ>ಚಿಟ್ಟುಕೊಂಡಂತಿರುವ ಪ್ರತ್ಯೇಕ ಪ್ರದೇಶ. ಅದನ್ನು ಯಾವ ವ್ಯಾಒಪ್ತಿಗೆ ತರುವುದೂ ಕಷ್ಟ. ಈ ಭಾಗವನ್ನು ಆಡಳಿತಾತ್ಮಕವಾಗಿ ಒಳಗೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನಗಳು, ಪ್ರಯೋಗಗಳು ನಡೆದಿವೆ. ಅದ್ಯಾವುದೂ ಪರಿಣಾಮಕಾರಿ ಅನ್ನಿಸದಿದ್ದಾಗ ಭಾರತ ಸರ್ಕಾರ ೧೯೫೬ರಲ್ಲಿ ಪ್ರತ್ಯೇಕವಾದ ಅಸ್ತಿತ್ವ ಕೊಟ್ಟಿತ್ತು. ಈ ದ್ವೀಪಕ್ಕೆ ಲಕ್ಷದ್ವೀಪ ಎಂದು ಅಧಿಕೃತವಾಗಿ ನಾಮಕರಣ ಮಾಡಿ, ಇದನ್ನು ಕೇಂದ್ರಾಡಳಿತ ಪ್ರದೇಶವೆಂದು ಅಧಿಕೃತವಾಗಿ ನಮೂದಿಸಲಾಗಿತ್ತು. ಈ ಮೂಲಕ ಬೌಗೋಳಿಕವಾಗಿ ಭಿನ್ನವಾಗಿದ್ದ ಲಕ್ಷದ್ವೀಪ ಆಡಳಿತಾತ್ಮಕವಾಗಿಯೂ ವಿಶೇಷತೆ ಪಡೆದಂತಾಗಿತ್ತು.
ಆಡಳಿತ ಹೇಗೆ ನಡೆಯುತ್ತೆ?
ಇಂಥಾ ದ್ವೀಪಗಳನ್ನು ಕಾನೂನು, ರೀತಿ ರಿವಾಜು ಮತ್ತು ಅಭಿವೃದ್ಧಿ ವ್ಯಾಪ್ತಿಯಲ್ಲಿ ಮುನ್ನಡೆಸೋದು ಸವಾಲಿನ ಸಂಗತಿ. ಎಪ್ಪತ್ತು ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಈ ದ್ವೀಪ ಸಮೂಹದ ಜನರನ್ನು ಪ್ರತಿನಿಧಿಸಲು ಒಬ್ಬ ಸಂಸದರಿರುತ್ತಾರೆ. ಅದು ನಾಮ್ ಕಾ ವಾಸ್ತೆ ಮಾತ್ರ. ಅದರ ಸಂಪೂರ್ಣ ದೇಖಾರೇಖಿಯನ್ನು ಪಂಚಾಯತ್ ವ್ಯವಸ್ಥೆಯ ಮೂಲಕವೇ ಸಂಭಾಳಿಸುವ ಪರಿಪಾಠ ಬೆಳೆದು ಬಂದಿದೆ. ಇಲ್ಲಿನ ಜನ ಮತ ಚಲಾಯಿಸುವ ಮೂಲಕ ಪಂಚಾಯತ್ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಇಲ್ಲಿ ಸ್ಥಳೀಯ ಆಡಳಿತವೇ ನಿರ್ಣಾಯಕ. ಮಿಕ್ಕಿದ್ದನ್ನು ಐಪಿಎಸ್ ಐಎಎಸ್ ಮಟ್ಟದ ಅಧಿಕಾರಿಗಳೇ ನಿಭಾಯಿಸುತ್ತಾ ಬಂದಿದ್ದಾರೆ. ಈ ಪರಿಪಾಠ ಸ್ವಾತಂತ್ರ್ಯಾ ನಂತರದಿಂದ ಇಲ್ಲಿವರೆಗೂ ಯಥಾ ಪ್ರಕಾರವಾಗಿ ನಡೆದುಕೊಂಡು ಬಂದಿದೆ.
ಇಲ್ಲಿನ ಜನ ಜೀವನ ಹೇಗಿರುತ್ತೆಂಬುದೂ ಕೂಡಾ ಕುತೂಹಲಕರ ವಿಚಾರವೇ… ಈ ಭಾಗದ ಜನರು ವ್ಯಾಪಾರ ವ್ಯವಹಾರಗಳಿಗೆ ಹಾಗೂ ಉನ್ನತ ವ್ಯಾಸಂಗಕ್ಕಾಗಿ ಕೇರಳ, ಕರ್ನಾಟಕದ ಕರಾವಳಿ ಪ್ರದೇಶವನ್ನೇ ನಂಬಿಕೊಂಡಿದ್ದಾರೆ. ತೊಂಬತ್ತರ ದಶಕದಲ್ಲಿ ದಶಕದಲ್ಲಿ ಈ ಭಾಗದ ಸಂಸದರಾಗಿದ್ದ ಪಿ.ಎಂ ಸಯೀದ್ ಉನ್ನತ ವ್ಯಾಸಂಗ ಪೂರೈಸಿದ್ದದ್ದು ಮಂಗಳೂರಿನಲ್ಲಿ. ಈ ಕಾರಣದಿಂದಲೇ ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಹೆಚ್ಚಾಗಿ ಮಂಗಳೂರಿನತ್ತ ಬರುತ್ತಾರೆ. ನಮ್ಮ ಕರ್ನಾಟಕದಲ್ಲಿ ಓದಿ, ಕನ್ನಡದ ಬಗ್ಗೆ ಅರಿವಿರುವವರು ಲಕ್ಷದ್ವೀಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಅದು ಕನ್ನಡಿಗರೆಲ್ಲರ ಪಾಲಿಗೆ ಹೆಮ್ಮೆಯ ವಿಚಾರ.
ಬೌದ್ಧರ ಆಗಮ
ಈ ಲಕ್ಷ ದ್ವೀಪಗಳ ಜನವಸತಿಯ ಸಂಬಂಧವಾಗಿ ಸುದೀರ್ಘವಾದ ಐತಿಹ್ಯವೇ ಇದೆ. ಸರಿ ಸುಮಾರು ಐದನೇ ಶತಮಾನದವರೆಗೂ ಇಲ್ಲಿ ಬುಡಕಟ್ಟು ಜನಸಮುದಾಯದ ಸಂಖ್ಯೆ ಹೆಚ್ಚಿತ್ತು. ಅವರೆಲ್ಲ ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ, ಐದು ಮತ್ತು ಆರನೇ ಶತಮಾನಗಳ ನಡುವೆ ಒಂದಷ್ಟು ಪಲ್ಲಟಗಳು ನಡೆದಿದ್ದವು. ಈ ಕಾಲಮಾನದಲ್ಲಿ ಲಕ್ಷದ್ವೀಪಕ್ಕೆ ಬೌದ್ಧರು ಆಗಮನವಾಗಿತ್ತು. ಹಾಗೆ ಬಂದವರು ಇಲ್ಲಿಯೇ ನೆಲೆ ಕಂಡುಕೊಂಡಿದ್ದರು. ನಂತರ ಏಳನೇ ಶತಮಾನದ ಅಂಚಿನ ಹೊತ್ತಿಗೆಲ ಇಸ್ಲಾಂ ಧರ್ಮದ ಮಂದಿ ಆಗಮಿಸಿದ್ದರು. ನಂತರ ಈ ದ್ವೀಪಕ್ಕೆ ಪೋರ್ಚುಗೀಸರು ಪ್ರವೇಶಿಸಿ ಅಲ್ಲಿಯ ಜನರಿಗೆ ತೆಂಗಿನ ನಾರಿನ ಉತ್ಪಾದನೆ ಕಲಿಸಿದ್ದರು. ಇದರೊಂದಿಗೆ ವ್ಯಾವಹಾರಿಕ ಮನ್ವಂತರವೊಂದಕ್ಕೆ ನಾಂದಿ ಹಾಡಿದ್ದರು.
ಇಷ್ಟೆಲ್ಲ ಬೆಳವಣಿಗೆಗಳ ನಂತರ ಬ್ರಿಟೀಷರ ಕಣ್ಣೂ ಈ ಸ್ವರ್ಗದಂಥಾ ದ್ವೀಪ ಪ್ರದೇಶದ ಮೇಲೆ ಬಿದ್ದಿತ್ತು. ಈ ಕಾರಣದಿಂದ ಬ್ರಿಟಿಷರೂ ಕೂಡಾ ಈ ದ್ವೀಪಗಳನ್ನು ದೀರ್ಘ ಕಾಲ ಸುಪರ್ಧಿಯಲ್ಲಿಟ್ಟುಕೊಂಡಿದ್ದರು. ಇಲ್ಲಿರುವ ದ್ವೀಪಗಳ ಹೆಸರೂ ಕೂಡಾ ಆ ಭಾಗದ ಭಾಷೆಗಳ ಆಧಾರದಲಲಿ ಹುಟ್ಟಿಕೊಂಡಿವೆ. ಅಗಟ್ಟಿ, ಅಮಿನಿ, ಅನ್ಡ್ರೊಟ್, ಬಂಗಾರಂ, ಬಿತ್ರ, ಚೆತ್ಲಾತ್, ಕದ್ಮತ್, ಕಲ್ಪೇನಿ, ಕವರತ್ತಿ, ಕಿಲ್ತಾನ್, ಮಿನಿಕಾಯ್ ಅಂತೆಲ್ಲ ಕರೆಯಲಾಗುತ್ತೆ. ಸದರಿ ದ್ವೀಪಗಳು ಇದ್ದುದರಲ್ಲಿಯೇ ಹೆಚ್ಚಿನ ಅಭಿವೃದಿ ಹೊಂದಿವೆ. ಈ ಕಾರಣದಿಂದಲೇ ಅವು ಪ್ರವಾಸಿಗರನ್ನು ಸೆಳೆದುಕೊಂಡಿವೆ. ಇಲ್ಲಿನ ಆಡಳಿತ ಅಧಿಕಾರಿಗಳಾಗಿ ಬರುತ್ತಿದ್ದ ಐಪಿಎಸ್, ಐಎಎಸ್ ಮಟ್ಟದ ಅಧಿಕಾರಿಗಳು ತಮ್ಮ ಆಡಳಿತಾವಧಿಯಲ್ಲಿ ಹೆಚ್ಚಿನ ಬದಲಾವಣೆ ತರುವಂಥಾ ಯಾವ ಪ್ರಯತ್ನಗಳನ್ನೂ ಮಾಡಿರಲಿಲ್ಲ.
ಅವರ ಪಾಲಿಗೆ ಅಧಿಕಾರಾವಧಿ ಎಂಬುದು ಮಜವಾದ ಅನುಭವ ನೀಡುತ್ತಿತ್ತು. ಇಲ್ಲಿನ ಚೆಂದದ ಪ್ರಕೃತಿ ತಾಣಗಳಲ್ಲಿ ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಾ ಸ್ಥಳೀಯರ ಜೊತೆ ಬೆರೆತು ಹೊರಡುತ್ತಿದ್ದರು. ಆದರೆ ಅಂಥವರ ಕಡೆಯಿಂದ ಬದಲಾವಣೆ ಮಾತ್ರ ಶೂನ್ಯವಾಗುತ್ತಿತ್ತು. ವರ್ಷಗಳ ಹಿಂದೆ ಲಕ್ಷದ್ವೀಪದಲ್ಲಿ ಭಾರತದ ಇಂಟಲಿಜೆನ್ಸ್ ಬ್ಯೂರೋ ಮುಖ್ಯಸ್ಥರಾಗಿ ಹೆಸರು ಮಾಡಿದ್ದ ದಿನೇಶ್ವರ್ ಶರ್ಮಾ ಆಡಳಿತ ಅಧಿಕಾರಿಯಾಗಿ ಜನ ಮೆಚ್ಚುವಂತೆ ಕಾರ್ಯ ನಿರ್ವಹಿಸಿದ್ದರು. ಬಳಿಕ ಅವರು ನಿವೃತ್ತಿಯಾದ ಬಳಿಕ ಲಕ್ಷದ್ವೀಪಕ್ಕೆ ಆಡಳಿತಾಧಿಕಾರಿಯಾಗಿ ರಾಜಕೀಯ ಹಿನ್ನಲೆಯ ಪ್ರಫುಲ್ ಪಟೇಲ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತ್ತು. ಈ ಪ್ರಫುಲ್ ಪಟೇಲ್ ಈ ಹಿಂದೆ ಗುಜರಾತಿನಲ್ಲಿ ಗೃಹ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ನೇಮಕದ ನಂತರ ಲಕ್ಷ ದ್ವೀಪದ ನಸೀಬು ಬದಲಾದಂತೆ ಕಾಣಿಸುತ್ತಿದೆ.
ಅಭಿವೃದ್ಧಿ ಭೂತ
ಪ್ರಫುಲ್ ಪಟೇಲ್ ಬಂದ ನಂತರ ಸುಂದರ ಲಕ್ಷದ್ವೀಪದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹಾಗೆ ಬಂದ ಪ್ರಫುಲ್ ಪಟೇಲರು ತಿಂಗಳುಗಳ ಕಾಲ ಅಧ್ಯಯನ ನಡೆಸಿದ್ದರು. ನಂತರ ಹವಾಯಿ ದ್ಚೀಪ ಹಾಗೂ ಮಾಲ್ಡೀವ್ಸ್ ಗಿಂತಲೂ ಮಿಗಿಲಾಗಿರೋ ಈ ಸುಂದರ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೆಲ ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಲಕ್ಷದ್ವೀಪ ಡೆವಲಪ್ಮೆಂಟ್ ಅಥಾರಿಟಿಯ ತಂದು ಲಕ್ಷದ್ವೀಪದ ಜನರನ್ನು ಬೆರಗಾಗಿಸಿದ್ದಾರೆ. ಮೂವತ್ತಾರು ಕಿಲೋಮೀಟರ್ ವಿಸ್ತ್ರೀರ್ಣದದೀ ದ್ವೀಪ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸುವ ಸಲುವಾಗಿ ಕಾಡುಗಳನನು ಕಡಿಯುತ್ತಾರೆಂಬ ಆತಂಕ ಈ ಭಾಗದ ಮಂದಿಯಲ್ಲಿದೆ. ಯಾಕೆಂದರೆ ಅವರು ಪ್ರಕೃತಿಯಲ್ಲಿಯೇ ದೇವರನ್ನು ಕಾಣುತ್ತಾರೆ. ಕಾಡು ನಾಶವನ್ನು ಯಾವ ಕಾರಣಕ್ಕೂ ಅವರು ಒಪ್ಪಲು ಸಾಧ್ಯವಿಲ್ಲ.ತಿಂಥಾ ಅಭಿವೃದ್ಧಿ ಭೂತ ಈ ದ್ವೀಪ ಸಮೂಹಕ್ಕೆ ಕುತ್ತುಂಟು ಮಾಡುವ ಲಕ್ಷಣಗಳು ಕಾಣಿಸುತ್ತಿವೆ. ಆಡಳಿತಾತ್ಮಕವಾಗಿಯೂ ಕೆಲವು ವ್ಯತಿರಿಕ್ತವಾದ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಅಲ್ಲಿನ ಜನರಿಗೆ ಆಘಾತ ನೀಡಿದೆ. ಕೇರಳದಿಂದ ಇನ್ನೂರು ಕಿಲೋಮೀಟರ್ ದೂರದಲ್ಲಿರುವರೀ ದ್ವೀಪ ಸಮೂಹದಲ್ಲಿ ತರಕಾರಿ, ಸೊಪ್ಪುಗಳನ್ನು ಕೇರಳ ಇಲ್ಲವೇ ಕರ್ನಾಟಕದ ಕರಾವಳಿ ಪ್ರದೇಶದಿಂದ ಆಮದು ಮಾಡಿಕೊಳ್ಳಬೇಕಿದೆ.
ಲಾಗಾಯ್ತಿನಿಂದಲೂ ಈ ವಹಿವಾಟು ನಡೆದುಕೊಂಡು ಬಂದಿದೆ. ಇಲ್ಲಿನ ಎಲ್ಲ ಮತ ಧರ್ಮಗಳವರೂ ಕೂಡಾ ಆ ಕಾಲದಿಂದ ಇಕಲ್ಗಿಯವರೆಗೂ ಸಾಮರಸ್ಯದಿಂದ ಬಾಳಿ ಬದುಕುತ್ತಾ ಬಂದಿದ್ದಾರೆ. ಆ ಪುಟ್ಟ ಪ್ರದೇಶದಲ್ಲಿ ಯಾವತ್ತೂ ಕೂಡಾ ಜನಾಂಗೀಯ ಸಂಣಘರ್ಷ ನಡೆದಿದ್ದೇ ಇಲ್ಲ. ಇಂಥಾ ಪ್ರದೇಶದಲ್ಲಿ ಇತ್ತೀಚೆಗೆ ಆಹಾರದ ವಿಚಾರದಲ್ಲಿ ಕೊಂಚ ರಂಪಾಟ ನಡೆದದ್ದೂ ಇದೆ. ಆದರೆ ಅದೆಲ್ಲವೂ ಸ್ಥಳೀಯವಾಗಿಯೇ ತಿಳಿಯಾಗಿದೆ. ಯಾಕೆಂದರೆ ಸಹಿಷ್ಟುತೆ ಎಂಬುದು ಅಲ್ಲಿನ ವಾತಾವರಣದಲ್ಲಿಯೇ ಬೆರೆತು ಹೋಗಿದೆ. ಅಂಥಾ ದೈವೀಕ ವಾತಾವರಣದಲ್ಲಿ ಮನುಷ್ಯ ಸಹಜ ಮತ್ಸರ, ವೈಮನಸ್ಸುಗಳೆಲ್ಲವೂ ಗೌಣವಾಗುತ್ತವೆ.
ಆಡಳಿತದ ಬಗೆ
ಇಲ್ಲಿನ ಆಡಳಿತ ವ್ಯವಸ್ಥೆ ಭಿನ್ನವಾದರೂ ಭಾರತದ ಇತರೇ ಭಾಗಗಳಿಗೆ ಸಾಮ್ಯತೆ ಹೊಂದಿದೆ. ಭಾರತದ ಬಹುತೇಕ ಇತರೇ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇರುವಂತೆಯೇ ಇಲ್ಲಿನ ಸ್ಥಳಿಯ ಚುನಾವಣೆಯಲ್ಲಿಯೂ ಕೆಲ ಕಟ್ಟುನಿಟ್ಟಾದ ಕ್ರಮಗಳು ಚಾಲ್ತಿಯಲ್ಲಿದ್ದಾವೆ. ಸಮುದ್ರದ ನಡುವಿನಲ್ಲಿರುವ ಭಾರತದ ಅನೇಕ ನೌಕಾ ಕೇಂದ್ರಗಳ ಶಾಖೆಗಳು ಅಲ್ಲಿರುವ ಕಾರಣ ದೇಶದ ಹಿತದೃಷ್ಟಿಯಿಂದಾಗಿ ಇಲ್ಲಿನ ಭೂ ಪ್ರದೇಶ ಮಹತ್ವ ಪಡೆದುಕೊಂಡಿದೆ. ನಮ್ಮ ರಕ್ಷಣಾ ಪಡೆಗಳು ಅಲ್ಲಿ ಕಣ್ಗಾವಲಿಟ್ಟು ಕಾಯುತ್ತಿವೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಲಕ್ಷದ್ವೀಪದಲ್ಲಿ ನಿಷೇಧವಿದ್ದ ಮದ್ಯ ಮಾರಾಟವನ್ನು ತೆರವುಗೊಳಿಸಿರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅದುವರೆಗೂ ಪ್ರವಾಸೋದ್ಯಮಕ್ಕೆ ಕೇರಳದ ಕೊಚ್ಚಿನ್ ಕಡೆಯಿಂದಲೇ ಹಡಗು ವಿಮಾನಗಳ ಹಾರಾಟವಿತ್ತು. ಈಗ ಕರ್ನಾಟಕಕ್ಕೂ ಕೂಡಾ ಮುಕ್ತ ಪ್ರವೇಶ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ.
ದ್ವೀಪಗಳ ಹುಟ್ಟು ಹೇಗೆ?
ಸಾಮಾನ್ಯವಾಗಿ ಪ್ರತೀ ಕಡಲಂಚಿನಲ್ಲಿಯೂ ಕೂಡಾ ಇಂಥಾ ದ್ವೀಪ ಪ್ರದೇಶಗಳಿರುತ್ತವೆ. ಅಂಥಾ ದ್ವೀಪಗಳತ್ತ ಸಹಜವಾಗಿಯೇ ಪ್ರವಾಸಿಗರು ಆಕರ್ಷಿತರಾಗುತ್ತಾರೆ. ಹಾಗಾದರೆ ಇಂಥಾ ದ್ವೀಪ ಪ್ರದೇಶಗಳು ಅದು ಹೇಗೆ ಸೃಷ್ಟಿಯಾಗುತ್ತವೆ. ಇಂಥಾ ದ್ವೀಪಗಳ ಇತಿಹಾಸವೇನು? ಅಂಥಾ ದ್ವೀಪಗಳಲ್ಲಿ ಅದು ಹೇಗೆ ಜನ ವಸತಿ ಶುರುವಾಯ್ತು ಹೀಗೆ ಬೆರಗಿನ ಕಣ್ಣು ಹೊಂದಿರುವವರಿಗೆಲ್ಲ ಹತ್ತಾರು ಪ್ರಶ್ನೆಗಳು ಮೂಡಿಕೊಳ್ಳುತ್ತವೆ. ಇದಕ್ಕೆ ಉತ್ತರ ಹುಡುಕುತ್ತಾ ಹೋದರೆ ವೈಜ್ಞಾನಿಕ ತಳಹದಿಯ ಆಸಕ್ತಿದಾಯಕವಾದ ಒಂದಷ್ಟು ವಿಚಾರಗಳು ತಂತಾನೇ ಜಾಹೀರಾಗುತ್ತವೆ. ಸಮುದ್ರದ ಗರ್ಭದಿಂದ ಇಂಥಾ ದ್ವೀಪಗಳ ಹೇಗೆ ಸೃಷ್ಟಿಯಾಗುತ್ತವೆಂದು ವಿಶ್ವದ ನಾನಾ ವಿಜ್ಞಾನಿಗಳು ಸುದೀರ್ಘವಾದ ಸಂಶೋಧನೆ, ಅಧ್ಯಯನ ನಡೆಸಿದ್ದಾರೆ.
ಭೂ ಗರ್ಭದಿಂದ ಸಮುದ್ರದ ಮಧ್ಯದಲ್ಲಿ ಬೆಂಕಿಯ ಉಂಡೆಗಳು ಚಿಮ್ಮುವ ಮೂಲಕ ಇಂಥಾ ದ್ವೀಪಗಳು ಸೃಷ್ಟಿಯಾಗಿವೆ ಎಂಬ ವಿಚಾರೆವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದಕ್ಕೆ ಮತ್ತೊಂದಷ್ಟು ಕಾರಣಗಳನ್ನೂ ಅವರು ಕಂಡುಕೊಂಡಿದ್ದಾರೆ. ಅಂಥಾ ಕಾರಣಗಳು ಹತ್ತಾರಿದ್ದರೂ ದ್ವೀಪ ರಚನೆಯ ಹಿಂದಿರೋ ಪ್ರಧಾನ ಕಾರಣ ಲಾವಾರಸ ಸ್ಫೋಟ. ಹೀಗೆ ಸಾಗರದ ಆಳದಿಂದ ಲಾವಾ ರಸ ಸ್ಫೋಟವಾದಾಗ ಅದು ಮೇಲೈಗೆ ನೀರಿನ ಮೂಲಕ ಚಿಮ್ಮಿ ದಾಗ ಇಂಥಾ ದ್ವೀಪಗಳ ಸೃಷ್ಟಿ ನಡೆಯುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ. ಹಾಗೆ ಮೇಲ್ಮೈ ಕಡೆ ಚಿಮ್ಮುವ ಲಾವಾರಸಕ್ಕೆ ಸೀ ಮೌಂಟ್ ಎಂಬ ಹೆಸರಿದೆ. ಹಾಗೆ ಚಿಮ್ಮಿ ಬರೋ ಸೀ ಮೌಂಟಿನಲ್ಲಿ ಮಣ್ಣಿನ ಪದರವೂ ಇರುತ್ತದೆ.
ಹಾಗೆ ಸೃಷಿಯಾದ ಸೀ ಮೌಂಟ್ ಮೇಲಿನ ಮಣ್ಣಿನಲ್ಲಿ ಕಾಡಿನ ಪ್ರದೇಶ ವರ್ಷಗಳ ಅವಧಿಯಲ್ಲೇನೂ ಸೃಷ್ಟಿಯಾಗೋದಿಲ್ಲ. ಅದಕ್ಕೆ ಶತಮಾನಗಳೇ ಬೇಕಾಗಬಹುದು. ಇಂಥಾ ಸೀ ಮೌಂಟ್ ಮೇಲ್ಪದರದ ಮೇಲೆ ಸತ್ತ ಸಾಗರ ಜಹೀವಿಗಳ ದೇಹ ಬಂದು ಹರಡಿಕೊಂಡು, ಅಲ್ಲಿಯೇ ಕೊಳೆತಾಗ ಅದರ ಮೇಲೆ ಹುಲ್ಲುಗಳಂಥವು ಹುಟ್ಟಿಕೊಳ್ಳುತ್ತವೆ. ಆ ನಂತರ ಮರಗಳು ಸೃಷ್ಟಿಯಾಗುತ್ತವೆ. ಹೀಗೆ ಒಂದು ಲಾವಾರಸ ಚಿಮ್ಮಿ, ಅದರ ಮೇಲೆ ಕಾಡು ಬೆಳೆದು, ಒಂದು ದ್ವೀಪವಾಗೋದಕ್ಕೆ ಸಾವಿರಾರು ವರ್ಷಗಳೇ ಬೇಕಾಗುತ್ತದೆ ಅಂತ ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಲಕ್ಷ ದ್ವೀಪಗಳೂ ಕೂಡಾ ಹಾಗೆಯೇ ಸೃಷ್ಟಿಯಾಗಿವೆ. ಅವುಗಳ ಮೇಲೆ ಒಂದೂವರೆ ಸಾವಿರ ವರ್ಷಗಳಿಂದಲೂ ಜನರು ವಾಸವಿದ್ದರೆಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ!