Nasaab: ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಚಿತ್ರಗಳು ಹೆಚ್ಚು ಬರ್ತಿವೆ. ಅಂತಹುದೇ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾ ‘ನಸಾಬ್’. ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆಯಾಗಿ ಗಮನ ಸೆಳೆಯುತ್ತಿವೆ. ಬಂಜಾರ ಶಕ್ತಿಪೀಠದ ಶ್ರೀ ಕುಮಾರ ಮಹಾರಾಜರು, ಮಾಜಿ ಉಪ ಸಭಾಪತಿ ರುದ್ರಪ್ಪ ಎಂ ಲಮ್ಮಾಣಿ, IAS ಅಧಿಕಾರಿ ಜಗದೀಶ್ ಜಿ, ಮಾಜಿ ಶಾಸಕ ಪಿ.ರಾಜೀವ್, ಡಾ.ಶೋಭ ಜಿ , ಶೋಭಾ ಟಿ.ಆರ್, ಹರೀಶ್ ಮುಂತಾದವರು ನಸಾಬ್ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇದು ನನ್ನ ಜೀವನದ ಕಥೆ ಎಂದು ಮಾತಮಾಡಿದ ಕಿಶೋರ್ ಕುಮಾರ್ ನಾಯ್ಕ್, ನಮ್ಮ ತಂದೆ ತಾಯಿಗೆ ಹದಿನಾಲ್ಕು ಜನ ಮಕ್ಕಳು. ಬಡತನ ಬೇರೆ. ಅಂತಹ ಬಡ ಕುಟುಂಬದಲ್ಲಿ ಹುಟ್ಟಿದ ಬಂಜಾರ ಸಮುದಾಯದ ಹುಡುಗನೊಬ್ಬ ಚೆನ್ನಾಗಿ ಓದಿ ವಿದ್ಯಾವಂತನಾಗಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆ. ಇದೇ ಚಿತ್ರದ ಕಥಾಹಂದರ. ನಾನು, ನನ್ನ ಜೀವನದ ಕಥೆಯನ್ನು ‘ನಸಾಬ್’(Nasaab) ಎಂದು ಪುಸ್ತಕ ರೂಪದಲ್ಲಿ ಹೊರತಂದೆ. ‘ನಸಾಬ್’ ಎಂದರೆ ಲಮ್ಮಾಣಿ ಭಾಷೆಯಲ್ಲಿ ನ್ಯಾಯ ಎಂದು ಅರ್ಥ. ಇದನ್ನು ಓದಿದ್ದ ಮಿತ್ರ ಹರೀಶ್, ಈ ಕೃತಿಯನ್ನು ಸಿನಿಮಾ ಮಾಡೋಣ ಎಂದರು. ಈ ಸಿನಿಮಾ ಆಗಲು ಹರೀಶ್ ಅವರೆ ಮುಖ್ಯ ಕಾರಣ ಎಂದು ತಿಳಿಸಿದ್ರು.
ಕಿಶೋರ್ ಕುಮಾರ್ ನಾಯ್ಕ್ ಪುತ್ರ ಕೀರ್ತಿ ಕುಮಾರ್ ನಾಯ್ಕ್(Keerthi Kumar Naik) ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ನಾಯಕನಾಗಿ ಅಭಿನಯಿಸಿದ್ದಾರೆ. ಶೆಫಾಲಿ ಸಿಂಗ್ ಸೋನಿ ಈ ಚಿತ್ರದ ನಾಯಕಿ. ಬಿ.ಜಯಶ್ರೀ, ಪದ್ಮಾ ವಾಸಂತಿ, ವಿಜಯ ಕಾಶಿ, ತಬಲ ನಾಣಿ, ನಾಗೇಂದ್ರ ಅರಸ್, ಶೋಭ್ ರಾಜ್, ಪ್ರಕಾಶ್, ಹನುಮಂತೇ ಗೌಡ ಮುಂತಾದವರು ಚಿತ್ರದಲ್ಲಿದ್ದಾರೆ. ನಾಯಕ ಹಾಗೂ ನಿರ್ದೇಶಕ ಕೀರ್ತಿ ಕುಮಾರ್ ನಾಯ್ಕ್ ಮಾತನಾಡಿ ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ ನನ್ನ ತಂದೆ ಕಿಶೋರ್ ಕುಮಾರ್ ನಾಯ್ಕ್ ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಧನ್ಯವಾದ. ಇದು ನನ್ಮ ಮೊದಲ ಚಿತ್ರ. ನಟನೆಗೆ ಸಹಕಾರ ನೀಡಿದ ಹಿರಿಯ ಕಲಾವಿದರು ಹಾಗೂ ತಂತ್ರಜ್ಞರನ್ನು ಈ ಸಮಯದಲ್ಲಿ ನೆನೆಯುತ್ತೇನೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದ್ರು. ಕೀರ್ತಿ ಕ್ರಿಯೇಷನ್ಸ್ ಲಾಂಛನದಲ್ಲಿ ಸುಜಾತ ಕಿಶೋರ್ ನಾಯ್ಕ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಗಂ ಸಂಗೀತ ಸಂಯೋಜಿಸಿದ್ದಾರೆ.