ಈಗಾಗಲೇ ಹತ್ತು ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ, ಸಹ ನಟ, ಪೋಷಕ ನಟ, ಖಳ ನಟನಾಗಿ ಮಿಂಚಿರುವ ನಟ ರಂಗಾಯಣ ರಘು ಈಗ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ರಂಗಾಯಣ ರಘು ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ ‘ಶಾಖಾಹಾರಿ’ ಎಂದು ಟೈಟಲ್ ಇಡಲಾಗಿದೆ. ಇತ್ತೀಚೆಗೆ ‘ಶಾಖಾಹಾರಿ’ ಸಿನಿಮಾದ ಟೈಟಲ್ ನ್ನು ನಿರ್ದೇಶಕ ಯೋಗರಾಜ್ ಭಟ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ‘ಕೀಳಂಬಿ ಮೀಡಿಯಾ ಲ್ಯಾಬ್’ ಮೂಲಕ ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ ಜೊತೆಗೂಡಿ ಚೊಚ್ಚಲ ಬಾರಿಗೆ ನಿರ್ಮಿಸಿರುವ ‘ಶಾಖಾಹಾರಿ’ ಸಿನಿಮಾದ ಕಥೆ ಮಲೆನಾಡಿನ ತೀರ್ಥಹಳ್ಳಿಯ ಊರೊಂದರಲ್ಲಿ ನಡೆಯುವ ನಿಗೂಢ ಘಟನೆಯ ಸುತ್ತ ಸಾಗುತ್ತದೆ.
‘ಶಾಖಾಹಾರಿ’ ಸಿನಿಮಾದಲ್ಲಿ ಹೋಟೆಲ್ ಭಟ್ಟನಾಗಿ ರಂಗಾಯಣ ರಘು, ಎಸ್.ಐ ಆಗಿ ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಹರಿಣಿ, ಪ್ರತಿಮಾ ನಾಯಕ್, ವಿನಯ್ ಯು.ಜೆ., ನಿಧಿ ಹೆಗ್ಡೆ, ಶ್ರೀಹರ್ಷ ಗೋಭಟ್ಟ ಮತ್ತಿತರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ, ಅಸೋಸಿಯೇಟ್ ಡೈರೆಕ್ಟರ್ ಆಗಿ, ಬರಹಗಾರರಾಗಿ ಅನುಭವವಿರುವ ಯುವ ಪ್ರತಿಭೆ ಸಂದೀಪ್ ಸುಂಕದ್ ಈ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ & ಆಶಿಕ್ ಕುಸುಗೊಳ್ಳಿರವರ ಗ್ರೇಡಿಂಗ್ ಈ ಚಿತ್ರಕ್ಕಿದೆ. ಸಂಪೂರ್ಣ ಮಲೆನಾಡಿನಲ್ಲೇ ಚಿತ್ರೀಕರಣವಾಗಿರೋ ಈ ಸಿನಿಮಾದಲ್ಲಿ ಅನೇಕ ಮಲೆನಾಡಿಗರು ಕೆಲಸ ಮಾಡಿರೋದು ಮತ್ತೊಂದು ವಿಶೇಷದ ಸಂಗತಿ. ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.