ಸುಮ್ಮನೆ ಕತ್ತೆತ್ತಿ ಆಕಾಶದತ್ತ ಕಣ್ಣು ಹಾಯಿಸಿದರೂ ಅದೊಂದು ವಿಸ್ಮಯದಂತೆ ಕಾಡುತ್ತದೆ. ಆಕಾಶದಲ್ಲಿ ಬರಿಗಣ್ಣಿಗೆ ಕಾಣುವಂಥಾ ನಕ್ಷತ್ರಗಳು ನಮ್ಮ ಪಾಲಿಗೆಲ್ಲ ಆಧ್ಯಾತ್ಮಿಕ ವಿಚಾರಗಳ ಆಧಾರದಲ್ಲಿ ದಕ್ಕೋದೇ ಹೆಚ್ಚು. ಹೀಗೆ ಅಧ್ಯಾತ್ಮಿಕ ವಿಚಾರದಲ್ಲಿ ನೋಡೋದಾದರೆ ಆಕಾಶ ಕಾಯಗಳಿಗೂ ಒಂದೊಂದು ಪುರಾಣ ಕಥೆಗಳ ಕನೆಕ್ಷನ್ನುಗಳಿವೆ. ಅವೂ ಕೂಡಾ ಒಂದು ರೀತಿಯ ವಿಸ್ಮಯಗಳೇ. ಆದರೆ, ಇಲ್ಲಿನ ವಿಜ್ಞಾನಿಗಳು ಆಕಾಶ ಕಾಯಗಳ ಬಗ್ಗೆ ಸುದೀರ್ಘವಾದ ಸಂಶೋಧನೆ, ಅಧ್ಯಯನಗಳನ್ನು ನಡೆಸುವ ಮೂಲಕ ಭಾಹ್ಯಾಕಾಶ ವಿಸ್ಮಯಗಳ ಬಗ್ಗೆ ಅನೇಕ ಅಸಲೀಯತ್ತುಗಳನ್ನು ತೆರೆದಿಟ್ಟಿದ್ದಾರೆ. ಹೀಗೆ ಅಂತರಿಕ್ಷದ ಬಗ್ಗೆ ಕಣ್ಣಿಟ್ಟು ಹೊರಟಿರೋ ವಿಜ್ಞಾನಿಗಳು ಒಂದು ಗುರಿಯಿಟ್ಟುಕೊಂಡು ಮುಂದುವರೆದರೆ, ಅದರಾಚೆಗೆ ಮತ್ತಷ್ಟು ಅಚ್ಚರಿಗಳು ಅವರನ್ನೆಲ್ಲ ಅಡಿಗಡಿಗೆ ಚಕಿತಗೊಳಿಸಿವೆ.
ಆಕಾಶ ಕಾಯಗಳ ಬಗ್ಗೆ ಲಾಗಾಯ್ತಿನಿಂದಲೂ ವಿಜ್ಞಾನ ಜಗತ್ತು ಬೆರಗಿನ ಕಣ್ಣಿಡುತ್ತಾ ಬಂದಿದೆ. ಭಾರತವಂತೂ ಬಡತನ ತಾಂಡವವವಾಡುತ್ತಿದ್ದ ಘಳಿಗೆಯಲ್ಲಿಯೇ ಇಸ್ರೋದಂಥಾ ಸಂಸ್ಥೆಗೆ ಜೀವ ಕೊಟ್ಟು ಇಡೀ ಜಗತ್ತೇ ಅಚ್ಚರಿಗೀಡಾಗುವಂತೆ ಮಾಡಿತ್ತು. ಆ ಸಂಸ್ಥೆಯೀಗ ಹಂತ ಹಂತವಾಗಿ ಬೆಳೆದು ನಿಂತು ಇಡೀ ಜಗತ್ತೇ ತನ್ನತ್ತ ಕಣ್ಣರಳಿಸಿ ನೋಡುವಂತೆ ಮಾಡಿರೋದು ಭಾರತೀಯರೆಲ್ಲರೂ ಹೆಮ್ಮ ಪಡುವಂಥಾ ಸಂಗತಿ. ಹೀಗೆ ಬೆಳೆದು ನಿಂತಿಒರುವ ವಿಜ್ಞಾನ ಜಗತ್ತನ್ನು ಈಗೊಂದಷ್ಟು ವರ್ಷಗಳಿಂದ ಕಪ್ಪು ರಂಧ್ರವೆಂಬೋ ಮಾಯೆ ಕಾಡುತ್ತಾ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕಪ್ಪು ರಂಧ್ರದ ಬಗ್ಗೆ ನಾನಾ ದಿಕ್ಕಿನ ಚರ್ಚೆಗಳಾಗುತ್ತಿದ್ದಾವೆ.
ಕಪ್ಪು ರಂಧ್ರ ಅಂದ್ರೇನು?
ಹಾಗಾದ್ರೆ ವಿಜ್ಞಾನಿಗಳ ನಿದ್ದೆಗೆಡಿಸಿರುವ ಕಪ್ಪು ರಂಧ್ರ ಅಂದರೇನು? ಯಾಕೆ ಅದರ ಬೆಂಬಿದ್ದು ಅಧ್ಯನಗಳು ಸಂಶೋಧನೆಗಳಾಗುತ್ತಿವೆ? ಈ ಕಪ್ಪು ರಂಧ್ರಗಳು ವಿಜ್ಞಾನದ ಜಗತ್ತಿನಲ್ಲಿಯೇ ಬಹುವಾಗಿ ಕಾಡಿದ ವಿರಳ ಸಂಗತಿಗಳಲ್ಲೊಂದು. ಅರವತ್ತರ ದಶಕದಲ್ಲಿ ಕ್ಯಾಲಿಫೋರ್ನಿಯಾದ ಮೌಂಟ್ ಪಾಲೋಮರ್ ಖಗೋಳ ವೀಕ್ಷಣಾಲಯದಲ್ಲಿ ಖಗೋಳಶಾಸ್ತ್ರಜ್ಞ ಮಾರ್ಟೆನ್ ಸ್ಮಿತ್ ಅವರು ಮಸುಕಾದ, ನಕ್ಷತ್ರದಂತಹ ವಸ್ತುವನ್ನು ಪತ್ತೆಹಚ್ಚಿದ್ದರು. ಆ ದಶಕದಲ್ಲಿಯೇ ಕೇಂಬ್ರಿಡ್ಜ್ನ ಸಂಶೋಧನಾ ವಿದ್ಯಾರ್ಥಿ ಜೋಸೆಲಿನ್ ಬೆಲ್, ಆಕಾಶದಲ್ಲಿ ರೇಡಿಯೋ ತರಂಗಗಳ ಆವಿಷ್ಕಾರದೊಂದಿಗೆ ಕಪ್ಪು ಕುಳಿಗಳ ಅಸ್ತಿತ್ವಕ್ಕೆ ಹೆಚ್ಚಿನ ಚರ್ಚೆ ಹುಟ್ಟಿಕೊಂಡಿತ್ತು. ಆರಂಭದಲ್ಲಿ ವಿಜ್ಞಾನಿಗಳು ನಕ್ಷತ್ರಪುಂಜದಲ್ಲಿ ಅನ್ಯಲೋಕದ ಜೀವಿಗಳು ಸಂಪರ್ಕ ಸಾಧಿಸಿರಬಹುದು ಎಂದೇ ಅಂದುಕೊಂಡಿದ್ದರು.
ಈ ಕಪ್ಪು ರಂಧ್ರಗಳು ತಮ್ಮ ಬಳಿ ಬರುವ ಎಲ್ಲ ವಸ್ತುಗಳನ್ನು ಸೆಳೆದುಕೊಂಡು ಒಳಗೆಳೆದುಕೊಳ್ಳುತ್ಗತವೆ. ಹಾಗು ಆದರೆ, ಹಾಗೆ ಹೋದ ಯಾವುದೇ ವಸ್ತು ಮತ್ತೆ ವಾಪಸ್ ಬರುವುದು ಒಂದು ರಣ ರೋಚಕ ಯಾನ. ಯಾವ ರೀತಿ ಒಂದು ಆಳವಾದ ಭಾವಿಗೆ ವಸ್ತು ಎಸೆದರೆ ಅದು ಭಾವಿಯ ಆಳಕ್ಕೆ ಸೇರುವುದೋ ಹಾಗೆಯೆ ಈ ಬ್ಲಾಕ್ ಹೋಲ್ ಕೂಡಾ ಬ್ರಹ್ಮಾಂಡದಲ್ಲಿ ಇರುವ ನಿಜವಾದ ಅಡಿಪಾಯವಿಲ್ಲದ ಭಾವಿಗಳು ಅಂತ ಕರೆಸಿಕೊಂಡಿವೆ. ತಳವೇ ಇಲ್ಲದ ಬಾವಿ ಎಂಬ ವಿವರಣೆಯೇ ಅದರ ಭಯಾನಕತೆಯ ಸಂಕೇತವಾಗಿ ಕಾಣಿಸುತ್ತದೆ. ಈ ಕಪ್ಪು ರಂಧ್ರವನ್ನು ಬೆಳಕು ಕೂಡಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೊಂದುವೇಳೆ ಬೆಳಕು ಇದರ ಬಳಿ ಬಂದರೆ ಅದೂ ಸಹ ಕಪ್ಪು ಕುಳಿಯ ಒಳಗೆ ಸೇರುತ್ತದೆ. ಅದು ಮತ್ತೆ ವಾಪಸ್ ಬರೋದಿಲ್ಲ. ಯಾಕೆಂದರೆ ಅದು ಪ್ರತಿಫಲಿಸಲಾರದಷ್ಟು ಆಳದವರೆಗೆ ಅದು ಹಬ್ಬಿಕೊಂಡಿರುತ್ತೆ. ಹೀಗಾಗಿ ಬೆಳಕನ್ನು ಪ್ರತಿಫಲಿಸದ ಕಾರಣ ಇವು ಗೋಚರಿಸೋದಿಲ್ಲ. ಈ ಕಾರಣದಿಂದಲೇ ಅವುಗಳಿಗೆ ಕಪ್ಪು ರಂಧ್ರಗಳು ಅಥವಾ ಕಪ್ಪು ಕುಳಿಗಳೆಂಬ ಹೆಸರು ಬಂದಿದೆ.
ಸೃಷ್ಟಿಯ ಅದ್ಭುತ
ಮೇಲ್ಕಂಡ ವಿಶ್ಲೇಷಣೆ ಕೇವಲ ಪದರ ಅರ್ಥದ ಸುತ್ತವಷ್ಟೇ ಚಲಿಸುತ್ತೆ. ಈ ಕಪ್ಪು ರಂಧ್ರಗಳು ಹೇಗೆ ಸೃಷ್ಟಿಯಾಗುತ್ತದೆ? ಇವುಗಳ ಮೂಲ ಯಾವುದು? ಇವು ಯಾಕೆ ಎಲ್ಲವನ್ನು ಆಕರ್ಷಣೆ ಮಾಡುತ್ತದೆ? ಇವು ಬ್ರಹ್ಮಾಂಡದಲ್ಲಿ ಹೇಗೆ ಗೋಚರಿಸುತ್ತದೆ? ಅದರ ಇರುವಿಕೆಯ ಮರ್ಮವೇನು? ಇಂಥಾ ಹತ್ತಾರು ಪ್ರಶ್ನೆಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಹುಡುಕ ಹೋದರೆ ಮತ್ತಷ್ಟು ವಿಸ್ಮಯಗಳು ಎದುರುಗೊಳ್ಳುತ್ತವೆ. ಕಪ್ಪು ರಂಧ್ರಗಳು ಮೂಲದಲ್ಲಿ ನಕ್ಷತ್ರಗಳಾಗಿರುತ್ತವೆ. ಇಂಥಾ ಬಹುತೇಕ ನಕ್ಷತ್ರಗಳು ಮನುಷ್ಯರು ಸೇರಿದಂತಗೆ ಕೋಟ್ಯಂತರ ಜೀವಿಗಳಂತೆ ಹುಟ್ಟುತ್ತದೆ, ಒಂದಷ್ಟು ಹಂತ ದಾಟಿದ ತರುವಾಯ ಸಾಯುತ್ತವೆ. ಇದರ ಹಿಂದೆ ಜೈವಿಕ ಕಾರ್ಯ ಇಲ್ಲದೇ ಹೋದರೂ ಸೃಷ್ಟಿ ಹಾಗೂ ಲಯಕ್ಕೆ ಈ ಪ್ರಕ್ರಿಯೆಯನ್ನು ಹೋಲಿಸಬಹುದು. ಇಂಥಾ ನಕ್ಷತ್ರಗಳು ಯಥೇಚ್ಚವಾಗಿ ಬೆಳಕು ಹಾಗೂ ಶಾಖವನ್ನು ಉತ್ಪಾದನೆ ಮಾಡುತ್ತವೆ.
ಇಂಥಾ ನಕ್ಷತ್ರಗಳು ಎರಡು ವಿಭಿನ್ನವಾದ ಅಂಶದಿಂದ ಅಸ್ತಿತ್ವವನ್ನು ಪಡೆಯುತ್ತದೆ. ಅದರೊಳಗೆ ಹೈಡ್ರೋಜನ್ ಅಪಾರ ಪ್ರಮಾಣದಲ್ಲಿ ಇರುತ್ತದೆ. ಅಣು ಜಲಜನಕ ಸೇರಿ ಹೀಲಿಯಂ ಅಣುಗಳಾಗಿ ಪರಿವರ್ತನೆಯಾಗುತ್ತದೆ. ಪ್ರತಿಯೊಂದು ಪರಮಾಣುವಿನಲ್ಲಿ ನ್ಯೂಟ್ರಾನ್ ಹಾಗೂ ಪ್ರೋಟಾನ್ ಕಣಗಳಿರುತ್ತವೆ. ಅದು ನ್ಯೂಕ್ಲಿಯಸ್ ರಚನೆಗೆ ಕಾರಣವಾಗುತ್ತದೆ. ಜಲಜನಕದಲ್ಲಿ ಕೂಡಾ ಇದೇ ನ್ಯೂಕ್ಲಿಯಸ್ ಅಂಶವಿರುತ್ತೆ. ಈ ಸಂಯೋಜನೆ ಮತ್ತೊಂದು ಬಗೆಯಲ್ಲಿ ಜಲಜನಕದ ನ್ಯೂಕ್ಲಿಯಸ್ ಜೊತೆ ಸೇರುತ್ತದೆ. ಇದೆಲ್ಲದರ ಪರಿಣಾಮವಾಗಿ ಶಕ್ತಿಯ ಉತ್ಪಾದನೆ ಈ ಶಕ್ತಿಯೇ ನಮಗೆ ಬೆಳಕು ಹಾಗೂ ಶಾಖದ ರೂಪದಲ್ಲಿ ವಾಪಾಸಾಗುತ್ತದೆ. ಈ ಶಕ್ತಿಯ ಮತ್ತೊಂದು ಅಂಶ ಹೆಚ್ಚು ಗುರುತ್ವಾಕರ್ಷಣೆಯ ಬಲ ಹೊಂದಿರುತ್ತದೆ. ಹೀಗಾಗಿ ಒಂದು ಗುರುತ್ವ ಬಲ ಎಲ್ಲವನ್ನೂ ಒಳಗೆ ಎಳೆದುಕೊಳ್ಳುತ್ತಿರುತ್ತದೆ. ನಕ್ಷತ್ರದ ಆಂತರ್ಯದಲ್ಲಿ ಉಂಟಾಗುವ ಪಲ್ಲಟ ಎಲ್ಲವನ್ನೂ ಹೊರಗೆ ತಳ್ಳುತ್ತದೆ. ಇಂಥಾ ಸಮಾನಾಂತರ ಬಲಗಳಿಂದಲೇ ನಕ್ಷತ್ರದ ಅಸ್ತಿತ್ವ ಗಟ್ಟಿಯಾಗುತ್ತದೆ.
ನಕ್ಷತ್ರದ ಮರಣ
ಇಂಥಾ ಸಮತೋಲನ ತಪ್ಪಿದಾಗ ಉಂಟಾಗುವ ಪಲ್ಲಟವೇ ನಿಜವಾದ ಅಚ್ಚರಿ. ಹೀಗೆ ನಕ್ಷತ್ರಗಳನ್ನು ಸಮತೋಲನದಲ್ಲಿಡುವ ಬಲಾಬಲಗಳು ಸಮತೋಲನ ತಪ್ಪಿದಾಗಲೇ ನಿಜವಾದ ಅಚ್ಚರಿಯೊಂದು ಸೃಷ್ಟಿಯಾಗುತ್ತೆ. ಹೀಗೆ ಬಲಾಬಲದ ಪೈಪೋಟಿಯಲ್ಲಿ ಅಸಮತೋಲನ ಕಂಡು ಬಂದಾಗ ನಕ್ಷತ್ರವೊಂದರ ಸಾವು ಸಂಭವಿಸುತ್ತೆ. ನಕ್ಷತ್ರದ ಬಹುತೇಕ ಜಲಜನಕ ಉರಿದು ಶಕ್ತಿಯಾಗಿ ರೂಪಾಂತರ ಹೊಂದಿದ ನಂತರ ಆ ನಕ್ಷತ್ರಕ್ಕೆ ಹೊರ ನೂಕುವ ಬಲ ಕಡಿಮೆಯಾಗುತ್ತದೆ. ಇದರಿಂದಾಗಿ ತನ್ನ ಗುರುತ್ವ ಶಕ್ತಿಗೇ ಸಿಕ್ಕಿ ಶಕ್ತಿ ಹೀನವಾಗಲಾರಂಭಿಸುತ್ತದೆ. ಸಾಮಾನ್ಯವಾಗಿ ಯಾವುದೇ ವಸ್ತುಗಳು ತೀರಾ ಹತ್ತತ್ತಿರವಾದಾಗ ಸಾಂಧ್ರತೆ ಹೆಚ್ಚಾಗುತ್ತೆ. ಇಂಥಾದ್ದದೊಂದು ಸಾಮಾನ್ಯ ಫಾರ್ಮುಲಾವೇ ನಕ್ಷತ್ರಗಳ ಸಾವಿನ ಬಳಿಕ ರಂಧ್ರಗಳಾಗಿ ರೂಪಾಂತರ ಹೊಂದುತ್ತವೆ.
ಹಾಗಾದರೆ, ಅದು ಹೆಸರಿಗೆ ತಕ್ಕುದಾಗಿ ಒಂದು ರಂಧ್ರವೇ ಆಗಿರುತ್ತದಾ? ಈ ಪ್ರಶ್ನೆಗೆ ಸಿಗೋ ಉತ್ತರ ಕೂಡಾ ರೋಚಕವಾಗಿದೆ. ಅಷ್ಟಕ್ಕೂ ಅದೊಂದು ರಂಧ್ರವಾಗಿರದೆ ಅನಂತ ಸಾಂಧ್ರೆತೆಯ ಪ್ರದೇಶವಾಗಿರುತ್ತದೆ. ಅಲ್ಲಿ ಗುರುತ್ವದ ತೀಕ್ಷ್ಣತೆ ನಮ್ಮ ಊಹೆಗೂ ಮೀರಿ ಅಧಿಕವಾಗಿರುರುತ್ತದೆ. ಇಂಥಾ ತೀವ್ರಥರವಾದ ಗುರುತ್ವದ ಶಕ್ತಿಯೇ ಕಪ್ಪು ರಂಧ್ರವೊಂದರ ಹುಟ್ಟಿಗೆ ಕಾರಣವಾಗುತ್ತೆ. ಹಾಗಂತ ಹೀಗೆ ಸಾವಿನತ್ತ ತೆರಳುವ ಎಲ್ಲ ನಕ್ಷತ್ರಗಳೂ ಕೂಡಾ ಕಪ್ಪು ರಂಧ್ರವಾಗಿ ರೂಪಾಂತರ ಹೊಂದೋದಿಲ್ಲ. ಈ ವಿಚಾರವನ್ನು ಖಗೋಳಶಾಸ್ತ್ರವೇ ಋಜುವಾತುಪಡಿಸುತ್ತೆ. ನಮ್ಮ ಕಣ್ಣಗೆ ಬೆರಗಾಗಿ ಕಾಣುವ, ಕಾಡುವ ಸೂರ್ಯ ಬೇರೆ ನಕ್ಷತ್ರಗಳಿಗ್ಕೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕದಾಗಿರುತ್ತೆ. ಈ ಕಾರಣದಿಂದಲೇ ಇತರೇ ನಕ್ಷತ್ರಗಳಂತೆ ಅದರಲ್ಲಿ ಪಲ್ಲಟಗಳೂ ಸಂಭವಿಸಿದರೂ ಕೂಡಾ ಸೂರ್ಯ ಕಪ್ಪು ರಂಧ್ರವಾಗಿ ಮಾರ್ಪಾಟಾಗೋದಿಲ್ಲ.
ವಿಜ್ಞಾನಿಗಳು ಹೇಳೋದೇನು?
ಇಂಥಾ ಕಪ್ಪು ರಂದ್ರಗಳ ಬಗ್ಗೆ ವಿಜ್ಞಾನಿಗಳು ಹಂತ ಹಂತವಾಗಿ ವಿವರಣೆಗಳನ್ನು ಕೊಡುತ್ತಾ ಬಂದಿದ್ದಾರೆ. ಆದರೆ ಅಂಥಾ ವಿವರಣೆಗಳ ಸುತ್ತಾ ಒಂದಷ್ಟು ಭಯಾನಕವಾದ ಅಂಶಗಳು ಹಬ್ಬಿವೆಯೇ ಹೊರತು, ವೈಜ್ಞಾನಿಕ ದೃಷ್ಟಿಕೋನದಿಂದ ಅದನ್ನು ದಿಟ್ಟಿಸುವ ಪ್ರಯತ್ನಗಳಾಗಿದ್ದು ವಿರಳ. ಹಾಗಾದ್ರೆ ವಿಜ್ಞಾನಿಗಳು ಕಪ್ಪು ರಂಧ್ರಗಳ ಬಗ್ಗೆ ಹೇಳೋದೇನು? ಅವರ ಪ್ರಕಾರ ನೋಡೋದಾದರೆ, ಕಪ್ಪು ರಂಧ್ರ ಸೃಷ್ಟಿಯಾಗಲು ಯಾವುದೇ ನಕ್ಷತ್ರಕ್ಕೆ ಸೂರ್ಯನಿಗಿಂತ ಹತ್ತು ಪಟ್ಟು ದ್ರವ್ಯರಾಶಿ ಇರಬೇಕು. ಹಾಗಾದಾಗ ಮಾತ್ರವೇ ಅದು ಕಪ್ಪು ರಂಧ್ರವಾಗಿ ಬದಲಾಗಬಹುದಷ್ಟೆ. ಸೂರ್ಯ ಮತ್ತು ಅದಕ್ಕಿಂತ ಹತ್ತು ಪಟ್ಟು ದ್ರವ್ಯರಾಶಿ ಇಲ್ಲದ ನಕ್ಷತ್ರಗಳು ಇಂಥಾ ಪಲ್ಲಟ ಜರುಗಿದ ನಂತರ ಏನಾಗುತ್ತವೆಂಬ ಕುಹೂಹಲ ಸಹಜವಾಗಿಯೇ ಕಾಡುತ್ತೆ.
ಅಂಥಾ ನಕ್ಷತ್ರಗಳೂ ಕೂಡಾ ಸಾಯುತ್ತವೆ. ಆದರೆ ಕಪ್ಪು ರಂಧ್ರಗಳಾಗಿ ಬದಲಾಗದೆ ಬೇರೆ ಬೇರೆ ರೂಪಕ್ಕೆ ಮಾರ್ಮಾಟು ಹೊಂದುತ್ತವೆ. ಹೀಗೆ ಒಂದು ಸುದೀರ್ಘವಾದ ಬದಲಾವಣೆಗಳಿಂದಾಗಿ ಸೃಷ್ಟಿಯಾಗುವ ಕಪ್ಪು ರಂಧ್ರಗಳು ಎಲ್ಲವನ್ನು ಆಕರ್ಷಣೆ ಮಾಡಲೂ ಮೂಲ ಕಾರಣ ಅವುಗಳ ಗುರುತ್ವ. ಇಂಥಾ ಕಪ್ಪು ರಂಧ್ರಗಳು ಸಲೀಸಾಗಿ ಕಾಣಿಸೋದೂ ಇಲ್ಲ. ಬೆಳಕು ಕೂಡಾ ಇದರೊಳಗೆ ಹೋಗಿ ಪ್ರತಿಫಲಿಸದೆ ಅಂತರ್ಧಾನ ಹೊಂದೋದೇ ಅದಕ್ಕೆ ಕಾರಣ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಬೆಳಕೆಂಬ ಶಕ್ತಿಯೇ ಪ್ರತಿಫಲಿಸದಿದ್ದಾಗ ಅದು ನಮಗೆಲ್ಲ ಕಾಣಿಸುವ ಯಾವ ಸಾಧ್ಯತೆಗಳೂ ಇಲ್ಲ. ಈ ಕಾರಣದಿಂದಲೇ ಕಪ್ಪುರಂಧ್ರಗಳ ಅಸ್ತಿತ್ವ ಲಾಗಾಯ್ತಿನಿಂದಲೂ ಕೂಡಾ ರಹಸ್ಯವಾಗುಳಿದಿತ್ತು. ಹೀಗೆ ಕಪ್ಪು ರಂಧ್ರಗಳುತಮ್ಮ ಅಸ್ತಿತ್ವವನ್ನು ಹೊರಜಗತ್ತಿಗೆ ಬಿಟ್ಟುಕೊಟ್ಟಿರಲಿಲ್ಲ. ಕಡೆಗೂ ೨೦೧೯ರಲ್ಲಿ ಖಗೋಳ ಶಾಸ್ತ್ರಜ್ಞರು ಇಂಥಾ ಕಪ್ಪು ರಂಧ್ರದ ಮೊದಲ ಫೋಟೋ ಬಿಡುಗಡೆಗೊಳಿಸಿದಾಗ ಇಡೀ ವಿಶ್ವವೇ ಬೆರಗಾಗಿತ್ತು.
ಹತ್ತೆ ಹಚ್ಚೋದು ಹೇಗೆ?
ಹಾಗಾದರೆ, ಇದೇ ವಿಜ್ಞಾನಿಗಳು ಇಂಥಾ ಕಪ್ಪು ರಂಧ್ರದ ಮುಂದೆ ಬೆಳಕಿನ ಆಟವೂ ನಡೆಯೋದಿಲ್ಲ ಅಂದಿದ್ದಾರೆ. ಹೀಗಿರುವಾಗ ಅದನ್ನು ಪತ್ತೆ ಹಚ್ಚೋದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿಕೊಳ್ಳುತ್ತೆ. ಇಂಥಾ ಕಪ್ಪುರಂಧ್ರಗಳನ್ನು ಖಗೋಳ ವಿಜ್ಞಾನಿಗಳು ಪತ್ತೆಹಚ್ಚೋದೇ ಒಂದು ರಣ ರೋಚಕ ವಿಚಾರ. ಅದೆಷ್ಟೇ ತೀಓಕ್ಷಣವಾದ ಬೆಳಕನ್ನೂ ಕೂಡಾ ಪ್ರತಿಫಲಿಸದ ಇಂಥಾ ಕಪ್ಪು ರಂಧ್ರಗಳು ಬೇರೆ ನಕ್ಷತ್ರಗಳ ಮೂಲಕ ತಮ್ಮ ಅಸ್ತಿತ್ವದ ಸುಳಿವು ನೀಡುತ್ತವೆ. ಯಾವುದೇ ಒಂದು ಕಪ್ಪು ಕುಳಿಯ ಬಳಿ ಒಂದು ನಕ್ಷತ್ರವಿದ್ದರೆ, ಆ ನಕ್ಷತ್ರದ ಬೆಳಕು ಕಾಣಿಸುತ್ತೆ. ಅದನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತ ಬೆಳಕಿನ ಪ್ರಭಾವ ಗಮನಿಸಿದರೆ ಕಪ್ಪು ರಂಧ್ರ ಅಂಥಾ ನಕ್ಷತ್ರದ ಸುತ್ತ ಸುತ್ತುತ್ತದೆ. ಇಂಥಾ ಫಾರ್ಮುಲಾ ಮೂಲಕ ಅವುಗಳನ್ನು ಪತ್ತೆ ಹಚ್ಚುತ್ತಾರಾದರೂ ಅದೊಂದು ಸವಾಲಿನ ಸಂಗತಿ.
ಇಂಥಾ ಕಪ್ಪು ರಂಧ್ರವನ್ನು ಪತ್ತೆ ಹಚ್ಚಿರೋದು ವಿಜ್ಞಾನ. ಆದರೆ, ಅದರ ಸುತ್ತ ಹಬ್ಬಿಕೊಂಡಿರುವ ವಿಚಾರಗಳು ಮಾತ್ರ ಪಕ್ಕಾ ಮೌಢ್ಯದಿಂದ ಕೂಡಿದಂಥವುಗಳು. ಕಪ್ಪು ರಂಧ್ರದ ಬಳಿ ಹೋದಾಕ್ಷಣ ಅದಕ್ಕೆ ಬಲಿ ಬೀಳೋದಿಲ್ಲ. ಅದು ಅದರ ಸುತ್ತ ಸುತ್ತುವಂಥವುಗಳನ್ನು ಬರಸೆಳೆದು ನುಂಗಿಕೊಳ್ಳೋದೂ ಇಲ್ಲ. ಯಾವುದೇ ಗ್ರಹವಾಗಲಿ ನಕ್ಷತ್ರವಾಗಲಿ ಅದರೊಳಗೆ ಕಳೆದು ಹೋಗುವುದಿಲ್ಲ. ಇಂಥಾ ಕಪ್ಪು ರಂಧ್ರಗಳ ಶಕ್ತಿಗೊಂದು ಮಿತಿ ಇದ್ದೇ ಇದೆ. ಕಪ್ಪು ರಂಧ್ರಗಳ ಸುತ್ತ ಇರುವ ಒಂದು ಪರಿಧಿ ಎಲ್ಲವನ್ನೂ ಕೂಡಾ ಸಂಭಾಳಿಸುತ್ತದೆ. ಇಂಥಾ ಪರಿಧಿಯ ಆವರಣದಲ್ಲಿರುವಂಥವು ಕಪ್ಪು ರಂಧ್ರದ ಸೆಳೆತದಲ್ಲಿರುತ್ತವೆಯೇ ಹೊರತು, ಅವ್ಯಾವುವೂ ಕಪ್ಪು ರಂಧ್ರಕ್ಕೆ ಬಲಿಯಾಗೋದಿಲ್ಲ. ಒಂದು ವೇಳೆ ಅಂಥಾ ಪರಿಧಿಯನ್ನು ದಾಟಿದರೆ ಕ್ಪ್ಪು ರಂಧ್ರದೊಳಗೆ ಅಂತರ್ಧಾನ ಹೊಂದಬೇಕಾಗುತ್ತದಂತೆ!
ಹಾಗೊಂದುವೇಳೆ ಸೂರ್ಯ ಗ್ರಹವೇ ಕಪ್ಪು ರಂಧ್ರವಾಯ್ತು ಅಂತಿಟ್ಟುಕೊಳ್ಳಿ. ಅದರ ಸುತ್ತ ಚಲಿಸುವ ಗ್ರಹಗಳೆಲ್ಲ ಸೂರ್ಯನ ಕಪ್ಪು ರಂಧ್ರಕ್ಕೆ ಬಲಿಯಾಗೋದಿಲ್ಲ. ಅದರ ವ್ಯಾಸ ಕಡಿಮೆಯಾಗಿರೋದೇ ಇಂಥಾ ಚಮತ್ಕಾರಕ್ಕೆ ಕಾರಣ. ಕಪ್ಪು ರಂಧ್ರಗಳ ಒಳಗೆ ಹೋದ ಯಾವುದೇ ವಸ್ತು ಏನಾಗುತ್ತೆ ಅನ್ನೋ ಕುತೂಹಲ ಕಾಡುತ್ತೆ. ಅದಕ್ಕೂ ಖಗೋಳ ವಿಜ್ಞಾನಿಗಳು ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತರ್ತಿದ್ದಾರೆ. ಈ ಕಾರಣದಿಂದ ಆ ಪ್ರಶ್ನೆಗೆ ಮುಂದ್ಯಾವತ್ತೋ ನಿಖರ ಉತ್ತರ ಸಿಕ್ಕೀತು. ಈ ರಂಧ್ರದ ಪರಿಧಿಗೆ ಸಿಕ್ಕ ವಸ್ತುಗಳು ವಾಪಾಸಾಗೋದಿಲ್ಲ ಅನ್ನೋದಂತೂ ಸತ್ಯ. ಹೆಚ್ಚಿನ ಸಾಂಧ್ರತೆ ಹೊಂದಿದ ಇವು ಯಾವುದೇ ವಸ್ತುವನ್ನು ಆಕರ್ಷಣೆ ಮಾಡೋದು ಮಾತ್ರವಲ್ಲದೇ, ಅವುಗಳನ್ನು ಹಂತ ಹಂತವಾಗಿ ಸೀಳುತ್ತ ತನ್ನೊಳಗೆ ಅಂತರ್ಧಾನ ಹೊಂದಿಸಿಕೊಳ್ಳುತ್ತೆ. ನಾವು ಮಾಯವಾಗೋದು ಅಂತೀವಲ್ಲಾ? ಕಪ್ಪು ರಂಧ್ರದ ಒಳ ಹೋದ ವಸ್ತುಗಳು ಹಾಗೆಯೇ ಮಾಯವಾಗುತ್ತವೆ!
ಒಂದಂತೂ ಸತ್ಯ. ಇಂಥಾ ಕಪ್ಪುರಂಧ್ರಗಳಿಗೆ ಯಾವುದೇ ಕೊನೆಯಿಲ್ಲ. ಆ ಕೊನೆ ಮೊದಲುಗಳನ್ನು ಅರಿತುಕೊಳ್ಳುವ ಪ್ರಯತ್ನವಂತೂ ಈ ಕ್ಷಣಕ್ಕೂ ಕೂಡಾ ಚಾಲ್ತಿಯಲ್ಲಿದೆ. ಅದರೊಳಗೆ ಹೋದ ವಸ್ತುವಿನ ಕಥೆ ಏನಾಗುತ್ತೆ ಅನ್ನೋ ಪ್ರಶ್ನೆ ಖಗೋಳ ವಿಜ್ಞಾನಿಗಳ ನಿದ್ದೆಗೆಡಿಸಿದೆ. ಅವರ ಪ್ರಕಾರ ಪ್ರಕಾರ ಕಪ್ಪು ರಂಧ್ರಗಳಲ್ಲಿ ಬ್ರಹ್ಮಾಂಡ ಅಸ್ತಿತ್ವವಕ್ಕೆ ಬರುವ ಮುನ್ನ ಇದ್ದ ಸ್ಥಿತಿಯೇ ಚಾಲ್ತಿಯಲ್ಲಿರುತ್ತದೆ. ಖಗೋಳ ವಿಜ್ಞಾನಿಗಳ ಪ್ರಕಾರ ಹೇಳೋದಾದರೆ ನಮ್ಮ ಪಾಲಿಗೆ ಶೂನ್ಯ ಕಪ್ಪು ಪ್ರದೇಶದಂತೆ ಕಾಣಿಸುವ ಕಪ್ಪು ರಂಧ್ರಗಳು ಶುಶ್ಕವಾಗಿರಲಿಕ್ಕಿಲ್ಲ. ಅದರೊಳಗೂ ಒಂದು ಜಗತ್ತು ಸೃಷ್ಟಿಯಾಗಿದ್ದರೂ ಅಚ್ಚರಿಯೇನಿಲ್ಲ. ಖಗೋಳ ವಿಜ್ಞಾನಿಗಳು ಕಪ್ಪು ರಂಧ್ರದ ಪರಿಧಿ ದಾಟಿ ಹೋದರೆ, ಕತ್ತಲ ಗರ್ಭದಲ್ಲಿ ಮತ್ತೊಂದು ಬ್ರಹ್ಮಾಂಡವಿದ್ದರೂ ಅಚ್ಚರಿಯೇನಿಲ್ಲ!