ಆಕಾಶ್ ಶ್ರೀವತ್ಸ ನಿರ್ದೇಶನದ ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ ‘ಶಿವಾಜಿ ಸುರತ್ಕಲ್ 2’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಸಮಯದಲ್ಲಿ ಚಿತ್ರದ ಟ್ರೇಲರ್ ಅನ್ನು ಚಿತ್ರತಂಡ ಇತ್ತಿಚೆಗೆ ಬಿಡುಗಡೆ ಮಾಡಿದೆ. ಆನಂದ್ ಆಡಿಯೋ ಯೂ ಟ್ಯೂಬ್ ಮೂಲಕ ರಿಲೀಸ್ ಆಗಿರುವ ಟ್ರೈಲರ್ ಚಿತ್ರದ ಮೇಲಿನ ಭರವಸೆಯನ್ನ ಹೆಚ್ಚಿಸಿದ್ದು, ವೀಕ್ಷಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಕಾರ್ಯಕ್ರಮದಲ್ಲಿ ಪತ್ರಿಕೆ ಗಳ ಮುಂದೆ ಚಿತ್ರದ ಕುರಿತು ಮಾತನಾಡಿದ ಆಕಾಶ್ ಶ್ರೀವತ್ಸ ಅವರು ಶಿವಾಜಿ ಸುರತ್ಕಲ್ 2 ಕಥೆ, ಲಾಕ್ ಡೌನ್ ಸಮಯದಲ್ಲಿ ಜನಿಸಿದ್ದು, ಹಾಗಾಗಿ ಎಲ್ಲರಿಗೂ ಲಾಕ್ ಡೌನ್ ನಿಂದ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲವಾಯಿತು. ನಾನು ಹಾಗೂ ರಮೇಶ್ ಸರ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯನ್ನು ಚರ್ಚಿಸಿದೆವು.ಚಿತ್ರ ಬಹಳ ಕ್ಯೂರಿಯಾಸಿಟಿ ಇಂದ ಮೂಡಿಬಂದಿದೆ. ಇದು ಸಾಧ್ಯವಾಗಲು ನಮ್ಮ ತಂಡದ ಶ್ರಮ ಬಹಳಷ್ಟಿದೆ ಎಂದರು. ಹಾಗೇಯೇ, ಚಿತ್ರದ ಟ್ರೈಲರ್ ಸಧ್ಯ ರಿಲೀಸ್ ಆಗಿದೆ, ಎಲ್ಲರಲ್ಲೂ ಮನೆ ಮಾಡಿರುವ ‘ಮಾಯಾವಿ ಯಾರು?’ ಎಂಬ ಪ್ರಶ್ನೆಗೆ ಶಿವಾಜಿ ಸುರತ್ಕಲ್ 2 ನಲ್ಲಿ ಉತ್ತರ ಸಿಗಲಿದೆ ಎಂದು ಹೇಳಿ ಚಿತ್ರದ ಮೇಲಿನ ಕುತೂಹಲವನ್ನ ಇನ್ನಷ್ಟು ಹೆಚ್ಚಿಸಿದ್ರು.

ಚಿತ್ರದ ಕುರಿತು ಮಾತನಾಡಿದ ನಟ ರಮೇಶ್ ಅರವಿಂದ್ ಅವರು “ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ ಖುಷಿಯಿದೆ. ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೈಲರ್ ಚೆನ್ನಾಗಿ ಮೂಡಿ ಬಂದಿದೆ. ಇದೇ ಏಪ್ರಿಲ್ ನಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಾನು ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ’ ಎಂದರು.

ಚಿತ್ರದಲ್ಲಿ ನಟಿಸಿರುವ ರಾಧಿಕಾ ಚೇತನ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ ಜೋಶಿ, ವಿದ್ಯಾಮೂರ್ತಿ ಮುಂತಾದವರು ಮಾತನಾಡಿ ತಮ್ಮ ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು. ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಾಣದ ಸಾರಥ್ಯದಲ್ಲಿ ಶಿವಾಜಿ ಸುರತ್ಕಲ್ 2ನಿರ್ಮಾಣ ವಾಗಿದೆ. ಈ ಕುರಿತು ತಮ್ಮ ಅನುಭವ ಹಂಚಿಕೊಂಡ ನಿರ್ಮಾಪಕ ಅನೂಪ್ ಗೌಡ, ,ನನ್ನ ಮಿತ್ರರ ಸಹಕಾರದಿಂದ ಈ ಚಿತ್ರವನ್ನು ನಿರ್ಮಿಸಿದ್ದೇನೆ. ಸದಭಿರುಚಿಯ ಚಿತ್ರ ನಿರ್ಮಿಸಿರುವ ಹೆಮ್ಮೆಯಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು. ಸಧ್ಯ ಟ್ರೈಲರ್ ನೋಡಿ ಮೆಚ್ಚಿರುವ ಪ್ರೇಕ್ಷಕರು ಏಪ್ರಿಲ್ ತಿಂಗಳಿನಲ್ಲಿ ಚಿತ್ರವನ್ನ ತೆರೆಯ ಮೇಲೆ ನೋಡಲು ಕಾತುರಾಗಿರೋದಂತು ನಿಜ.