ಅಪ್ಪ ಮತ್ತು ಅಪ್ಪು ಪರಂಪರೆಯನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮುಂದುವರೆಸಿದ್ದಾರೆ.ತಂದೆ ಹಾಗೂ ತಮ್ಮನ ಹಾದಿಯಲ್ಲೇ ಸಾಗುತ್ತಿರುವ ದೊಡ್ಮನೆಯ ಹಿರಿಮಗ ಸಂಭಾವನೆ ಪಡೆಯದೇ ಕೆಎಂಫ್ ಉತ್ಪನ್ನಗಳನ್ನು ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ.
ಕರ್ನಾಟಕದ ಹೆಮ್ಮೆ, ಅಸ್ಮಿತೆ ಕೆಎಂಎಫ್ ಉತ್ಪನ್ನಗಳಿಗೆ ರಾಯಭಾರಿಯಾಗಿ ‘ಕರುನಾಡ ಚಕ್ರವರ್ತಿ’ ಡಾ ಶಿವರಾಜ್ಕುಮಾರ್ ನೇಮಕವಾಗಿದ್ದಾರೆ. ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಶಿವಣ್ಣ ಅವರನ್ನು ಭೇಟಿಯಾಗಿ, ಅಭಿನಂದಿಸಿದ್ದಾರೆ. ಕೆಎಂಎಫ್ ನ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳನ್ನು ಪ್ರಚಾರ ಮಾಡುವುದಕ್ಕೆ ಶಿವಣ್ಣ ಒಪ್ಪಿರುವುದಕ್ಕೆ ಅವರಿಗೆ ಹಾಲು ಒಕ್ಕೂಟ ಅಭಿನಂದನೆ ಸಲ್ಲಿಸಿದೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅಷ್ಟೇ ಅಲ್ಲದೇ, ಡಾ. ರಾಜ್ ಕುಮಾರ್ ಕೂಡಾ ನಂದಿನಿ ಹಾಲಿಗೆ ರಾಯಬಾರಿಯಾಗಿ ಪ್ರಚಾರ ಮಾಡಿದ್ದರು.
ನೂತನ ರಾಯಭಾರಿ ಆಗಿ ನೇಮಕವಾದ ಬಳಿಕ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ‘ ನಮ್ಮ ಕರ್ನಾಟಕದ ಹೆಮ್ಮೆ ನಂದಿನಿ ಹಾಲಿನ ಉತ್ಪನ್ನಗಳಿಗೆ ರಾಯಭಾರಿ ಆಗಿರುವುದು ತುಂಬಾ ಖುಷಿ ಕೊಟ್ಟಿದೆ. ಇದು ನಮಗೆ ಹೆಮ್ಮೆಯ ವಿಚಾರ. ಹೀಗಾಗಿ ನಾವು ಸರ್ಕಾರಕ್ಕೆ ಧನ್ಯವಾದ ಹೇಳಬೇಕು. ಇದು ರೈತರಿಗೆ ಸಂಬಂಧಿಸಿದ ವಿಚಾರವಾಗಿದ್ದು, ‘ನಂದಿನಿ’ ಅನ್ನೋ ಭರವಸೆಯನ್ನ ಬೆಳಸಬೇಕು. ನಂದಿನಿ ಭಾರತದ ಹೆಮ್ಮೆ ಅದನ್ನ ಉಳಿಸಿಕೊಳ್ಳಬೇಕು. ಸದ್ಯದಲ್ಲೇ ನಂದಿನಿ ಜಾಹೀರಾತಿನ ಶೂಟಿಂಗ್ ಕೂಡ ನಡೆಯಲಿದೆ’ ಎಂದು ಶಿವಣ್ಣ ಹೇಳಿದ್ದಾರೆ.
‘ನಮ್ಮ ‘ನಂದಿನಿ’ ಭಾರತದಲ್ಲೇ ಅತೀ ಬೇಡಿಕೆ ಇರುವ ಉತ್ಪನ್ನ. ಆ ಬೇಡಿಕೆಯನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ನಮ್ಮ ಸಹಕಾರ ಖಂಡಿತ ಇರುತ್ತದೆ. ನನಗೆ ಸಮಯ ಆದಾಗೆಲ್ಲ ಎಲ್ಲೆಲ್ಲಿ ಕೆಎಂಎಫ್ ಶಾಖೆಗಳಿವೆಯೋ, ಅಲ್ಲೆಲ್ಲ ಹೋಗುತ್ತೇನೆ. ಕೆಲಸ, ಕಾರ್ಯ ವೈಖರಿ ಬಗ್ಗೆ ತಿಳಿದುಕೊಳ್ಳುತ್ತೇನೆ. ನಂದಿನಿ ಹಾಲಿನಲ್ಲಿ ಗುಣಮಟ್ಟ ಜಾಸ್ತಿ ಇದೆ. ಹಾಗಾಗಿ ದರ ಹೆಚ್ಚಾದರೂ, ಅದರಿಂದ ತೊಂದರೆ ಆಗುವುದಿಲ್ಲ ಎಂದುಕೊಂಡಿದ್ದೇನೆ’ ಎಂದು ಶಿವಣ್ಣ ಹೇಳಿದ್ದಾರೆ.
ನಂದಿನಿ ಉತ್ಪನ್ನಗಳಿಗೆ ಅಂಬಾಸಿಡರ್ ಆಗಲು ಶಿವರಾಜ್ಕುಮಾರ್ ಕೂಡ ಸಂಭಾವನೆ ಪಡೆಯುತ್ತಿಲ್ಲ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ‘ಇದು ನಮ್ಮ ಸರ್ಕಾರದ ಕಾರ್ಯಕ್ರಮ. ನಮ್ಮ ರೈತರ ಪ್ರಾಡೆಕ್ಟ್. ನಮ್ಮ ರೈತರ ಪರ ನಾವು ಸದಾ ಬೆಂಬಲವಾಗಿ ನಿಂತುಕೊಳ್ಳಬೇಕು. ನಾವು ನಮ್ಮ ರೈತರಿಗೋಸ್ಕರ ಯಾವಾಗಲು ಜೊತೆಯಲ್ಲಿರುತ್ತೇನೆ. ಇದು ನಮ್ಮ ತ್ಯಾಗ ಅಲ್ಲ ನಮ್ಮ ಕರ್ತವ್ಯ. ಇದರಿಂದ ನಾವು ಏನನ್ನೂ ನಿರೀಕ್ಷಿಸಬಾರದು’ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.