ಕಸ್ತೂರಿ ನಿವಾಸ ಚೆಲುವೆ ಜ್ಯೋತಿ ರೈ ತಮ್ಮ ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ. ಆಗಸ್ಟ್ 27ರಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ದರು. ತೆಲುಗು ಮಾಸ್ಟರ್ ಪೀಸ್ ಡೈರೆಕ್ಟರ್ ಜೊತೆಗಿನ ಫೋಟೋ ಹಂಚಿಕೊಂಡು ಶೀಘ್ರದಲ್ಲೇ ಗುಡ್ನ್ಯೂಸ್ ಕೊಡ್ತೀನಿ ಎಂದಿದ್ದರು. ಕೊನೆಗೂ, ತಮ್ಮನ್ನು ಪ್ರೀತಿಸುವ ಫ್ಯಾನ್ಸ್ ಗೆ ಸರ್ಪೈಸ್ ಕೊಟ್ಟಿದ್ದಾರೆ. ಟಾಲಿವುಡ್ ಯಂಗ್ ಡೈರೆಕ್ಟರ್ ಸುಕು ಪೂರ್ವಜ್ ಜೊತೆ ಎಂಗೇಜ್ ಆಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಕನ್ನಡತಿ ಜ್ಯೋತಿ ರೈ ಹಾಗೂ ತೆಲುಗು ನಿರ್ದೇಶಕ ಸುಕು ಪೂರ್ವಜ್ ಲವ್ವಿಡವ್ವಿ ಗುಟ್ಟಾಗೇನು ಉಳಿದಿರಲಿಲ್ಲ. ಶೂಟಿಂಗ್, ಔಟಿಂಗ್ ಅಂತ ಸುತ್ತಾಡುತ್ತಿದ್ದರಿಂದ ಇವರಿಬ್ಬರ ನಡುವಿನ ಸಂಬಂಧ ಚಾಯ್ ಪೇ ಚರ್ಚೆಯಾಗಿತ್ತು. ಶೂಟಿಂಗ್ ಸೆಟ್ನಲ್ಲಿ ಚಿಗುರಿದ ಸ್ನೇಹ ಪ್ರೀತಿಯಾಗಿ ಮದುವೆವರೆಗೂ ಬಂದು ನಿಂತಿದೆ ಎನ್ನುವ ಸುದ್ದಿ ಟಾಕ್ ಆಫ್ ದಿ ಟೌನ್ ಆಗಿತ್ತು. ಇದೀಗ ಆ ಸುದ್ದಿಗೆ ಜೀವ ಬಂದಿದೆ. ಜ್ಯೋತಿ ರೈ ಹಾಗೂ ಸುಕು ಪೂರ್ವಜ್ ಇಬ್ಬರು ಕೂಡ ತಮ್ಮಿಬ್ಬರ ಸಂಬಂಧಕ್ಕೆ ದಾಂಪತ್ಯದ ಮುದ್ರೆ ಹೊತ್ತಿಕೊಂಡಿದ್ದು ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಗ್ಗೆ ಹೇಳಿಕೊಂಡಿಲ್ಲವಾದರೂ ಕೂಡ, ಇವರಿಬ್ಬರು ಹಂಚಿಕೊಂಡಿರುವ ಫೋಟೋಗಳಲ್ಲಿ ನಟಿ ಜ್ಯೋತಿ ಕೊರಳಲ್ಲಿ ಮಾಂಗಲ್ಯಸೂತ್ರ ಇರುವುದನ್ನು ಕಾಣಬಹುದಾಗಿದೆ.
ನಟಿ ಜ್ಯೋತಿ ಪೂರ್ವಜ್ ಮೂಲತಃ ಮಡಿಕೇರಿಯವರು. 20ನೇ ವಯಸ್ಸಿಗೆ ಮದುವೆಯಾಗಿದ್ದರು. ಪದ್ಮನಾಭ ರೈ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಗಂಡು ಮಗು ಪಡೆದಿದ್ದರು. ಆ ಮಗು ಆಟಿಸಂ ಎನ್ನುವ ಖಾಯಿಲೆಗೆ ತುತ್ತಾಗಿತ್ತು. ಆಗ ಮಗನನ್ನುನ ಉಳಿಸಿಕೊಳ್ಳುವುದಕ್ಕೆ ತುಂಬಾ ಶ್ರಮಪಟ್ಟಿದ್ದರು. ಈಗ ಮಗ ಎಲ್ಲಿದ್ದಾನೆ? ಹೇಗಿದ್ದಾನೆ? ಈ ಪ್ರಶ್ನೆಗೆ ಉತ್ತರವಿಲ್ಲ. ಜ್ಯೋತಿಯವ್ರ ಸಾಮಾಜಿಕ ಜಾಲತಾಣದಲ್ಲಿ ಮಗನ ಫೋಟೋವೂ ಕಾಣಸಿಗ್ತಿಲ್ಲ. ಮೊದಲ ದಾಂಪತ್ಯ ಜೀವನ ಮುರಿದುಬಿದ್ದಿರುವ ಬಗ್ಗೆ ನಮಗೂ ಮಾಹಿತಿ ಲಭ್ಯವಾಗಿಲ್ಲ.ಆದ್ರೀಗ, ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಸಹಜೀವನ ನಡೆಸುವ ಮೂಲಕ ಸುದ್ದಿಯಲ್ಲಿದ್ದಾರೆ.
ನಟಿ ಜ್ಯೋತಿ ಹಾಗೂ ಸುಕುಪೂರ್ವಜ್ ಒಟ್ಟಿಗೆ ಕೆಲಸ ಮಾಡಿದ್ದಾರೆ. `ಶುಕ್ರ’, `ಮೌತರಾನಿ ಮೌನಮಿದಿ’, `ಎ ಮಾಸ್ಟರ್ಪೀಸ್’ ಸಿನಿಮಾಗಳನ್ನ ಸುಕುಪೂರ್ವಜ್ ನಿರ್ದೇಶನ ಮಾಡಿದ್ದು, ಮಾಸ್ಟರ್ ಪೀಸ್ ಚಿತ್ರದಲ್ಲಿ ನಟಿ ಜ್ಯೋತಿ ರೈ ಮಿಂಚಿದ್ದಾರೆ. ಅಲ್ಲಿ ಇವರಿಬ್ಬರಿಗೂ ಪರಿಚಯವಾಗಿ, ಆ ಪರಿಚಯ ಸ್ನೇಹಕ್ಕೆ ತಿರುಗಿ ಡೇಟಿಂಗ್ ಶುರುಮಾಡಿದ್ದರಂತೆ. ಈಗ ಪರಸ್ಪರ ಒಪ್ಪಿಕೊಂಡು ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಸಂಬಂಧವನ್ನ ಅಧಿಕೃತಗೊಳಿಸಿದ್ದಾರೆ. ಇಬ್ಬರ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ವೈಯಕ್ತಿಕ ಬದುಕಲ್ಲಿ ಏಳುಬೀಳು ಕಂಡಿರುವ ನಟಿ ಜ್ಯೋತಿ ರೈ ಬಣ್ಣದಲೋಕದಲ್ಲಿ ಕನ್ನಡತಿ ಜ್ಯೋತಿ ಬಹುದೊಡ್ಡ ಹೆಸರು ಮಾಡಿದ್ದಾರೆ. 20ನೇ ವಯಸ್ಸಿಗೆ ಮದುವೆಯಾದ್ಮೇಲೆ ಮುಖಕ್ಕೆ ಬಣ್ಣ ಹಚ್ಚಿಕೊಂಡು ವಿನು ಬಳಂಜ ಅವರ `ಬಂದೇ ಬರತಾವ ಕಾಲ’ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದರು. ಕಿನ್ನರಿ, ಜೋಗುಳ, ಕಸ್ತೂರಿ ನಿವಾಸ, ಜೋ ಜೋ ಲಾಲಿ, ಗೆಜ್ಜೆಪೂಜೆ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕನ್ನಡ ಸೀರಿಯಲ್ ಗಳಲ್ಲಿ ಮಿಂಚಿದ್ದರು. ಸೀತರಾಮ ಕಲ್ಯಾಣ ಸೇರಿದಂತೆ ಹಲವು ಸೂಪರ್ ಹಿಟ್ ಕನ್ನಡ ಸಿನಿಮಾಗಲ್ಲಿ ಸ್ಕ್ರೀನ್ ಶೇರ್ ಮಾಡಿದರು. ನಡುವೆ ತೆಲುಗಿಗೆ ಹಾರಿ ಅಲ್ಲೂ ಸಿನಿಮಾ, ಸೀರಿಯಲ್ ನಲ್ಲಿ ಮಿಂಚಿ ಟಾಲಿವುಡ್ ಪ್ರೇಕ್ಷಕರಿಗೆ ಹತ್ತಿರವಾದರು. `ಗುಪ್ಪೆದಂಥ ಮನಸು’ ಧಾರಾವಾಹಿ ಮೂಲಕ ತೆಲುಗು ಮಂದಿಯ ಮನಸ್ಸು ಗೆದ್ದ ಜ್ಯೋತಿ ರೈ, ಈಗ ಪ್ರಿಟಿಗರ್ಲ್ ಆಗಿದ್ದಾರೆ. ಇದೇ ಹೆಸರಿನ ವೆಬ್ ಸೀರೀಸ್ ಮೂಲಕ ಕಮಾಲ್ ಮಾಡಲು ಹೊರಟಿದ್ದಾರೆ.
ಅಚ್ಚರಿ ಅಂದರೆ ಜ್ಯೋತಿ ರೈ ತುಂಬಾ ಚೇಂಜ್ ಆಗಿದ್ದಾರೆ. ಇಂಡಸ್ಟ್ರಿಗೆ ಬಂದಾಗಿಂದ ಪಕ್ಕದ್ಮನೆ ಹುಡುಗಿಯಂತಿದ್ದ ಇವರು ಈಗ ಪಡ್ಡೆಹೈಕ್ಳ ಕನಸಿನ ಕನ್ಯೆಯಾಗಿ ಬದಲಾಗಿದ್ದಾರೆ. 35ರಲ್ಲೂ 24ರ ಹರೆಯದ ಹುಡುಗಿಯಂತೆ ಕಾಣುತ್ತಿದ್ದಾರೆ. ಇದ್ದಕ್ಕಿದ್ದಂತೆ ವರಸೆ ಬದಲಿಸಿದ್ದರ ಬಗ್ಗೆ ಮಾತನಾಡಿರುವ ಈ ನಟಿ, ಒಂದೇ ಥರ ಇದ್ದು ಇದ್ದು ನಂಗು ಬೋರಾಗಿದೆ. ಲೈಫ್ನಲ್ಲಿ ಚೇಂಜಸ್ ಇರಲಿ ಎನ್ನುವ ಕಾರಣಕ್ಕೆ ಮಾಡ್ರನ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸೀರೆಯುಟ್ಟರೆ ಸಾಕ್ಷಾತ್ ಲಕ್ಷ್ಮಿಯಂತೆ ಕಾಣುತ್ತಿದ್ದ ಈಕೆ, ಈಗ ಬಿಗ್ಗಿಬಿಗ್ಗಿ ಜೀನ್ಸ್ ತೊಟ್ಟು, ಸಿಂಗಲ್ ಪೀಸ್ ಹಾಕ್ಕೊಂಡು ಪಡ್ಡೆಹೈಕ್ಳ ಮೈ ಬೆವರಿಳಿಸುತ್ತಿದ್ದಾರೆ. ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸಿ ಬೋಲ್ಡ್ ಲುಕ್ಕಲ್ಲೇ ನೋಡುಗರನ್ನ ಕೆಣಕುತ್ತಿದ್ದಾರೆ. ಕಸ್ತೂರಿ ನಿವಾಸ ಸೀರಿಯಲ್ನಲ್ಲಿ, ದೇವಕಿ ಧಾರವಾಹಿಯಲ್ಲಿ, ಸೀತರಾಮ ಕಲ್ಯಾಣ ಸಿನಿಮಾದಲ್ಲಿ ನಾವು ನೋಡಿದ್ದು ಇದೇ ಜ್ಯೋತಿನಾ? ಅಮ್ಮನ ಪಾತ್ರದಲ್ಲಿ ಪಕ್ಕದ್ಮನೆ ಸೀತಮನ್ನಂತೆ ಕಾಣುತ್ತಿದ್ದದ್ದು ಇದೇ ನಾಯಕಿನಾ ಅಂತ ಕಣ್ಣುಜ್ಜಿಕೊಳ್ಳುತ್ತಿದ್ದಾರೆ.