ಯುವ ಪ್ರತಿಭಮ ಗೌತಮ್ ಬಸವರಾಜು ನಿರ್ಮಿಸಿ, ನಿರ್ದೇಶಿಸಿರುವ ‘ಯಥಾಭವ’ ಚಿತ್ರದ ಟೀಸರ್ ವರಮಹಾಲಕ್ಷ್ಮೀ ಹಬ್ಬದ ಶುಭದಿನ ಬಿಡುಗಡೆಯಾಯಿತು. ಇದೇ ವೇಳೆ ಮಾತನಾಡಿದ ‘ಯಥಾಭವ’ ಚಿತ್ರತಂಡದ ಸದಸ್ಯರು ತಮ್ಮಹೊಸ ಚಿತ್ರದ ಕುರಿತು ಒಂದಷ್ಟು ಮಾಹಿತಿ ನೀಡಿದರು. ಮೊದಲಿಗೆ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಗೌತಮ್ ಬಸವರಾಜು, ‘ನಾನು ಕಳೆದವರ್ಷ ಹೈದರಾಬಾದ್ ನಲ್ಲಿ ಈ ಚಿತ್ರದ ಕಥೆ ಸಿದ್ದ ಮಾಡಿದೆ. ನಂತರ ಚಿತ್ರೀಕರಣ ಆರಂಭವಾಯಿತು. ಇಪ್ಪತ್ತೊಂದು ದಿನಗಳಲ್ಲಿ ಚಿತ್ರೀಕರಣ ಪೂರ್ಣ ಮಾಡಿದ್ದೇವೆ. ‘ಯಥಾಭವ’ ಕೋರ್ಟ್ ರೂಮ್ ಜಾನರ್ ನ ಚಿತ್ರವಾಗಿದ್ದು, ಶೇಕಡಾ 70 ರಷ್ಟು ಭಾಗದ ಚಿತ್ರೀಕರಣ ಕೋರ್ಟ್ ನಲ್ಲೇ ನಡೆಯುತ್ತದೆ. ಸಿನಿಮಾದಲ್ಲಿ ನಾಲ್ಕು ಹಾಡುಗಳಿದೆ. ಈಗಾಗಲೇ ಟೀಸರ್ ಬಿಡುಗಡೆಯಾಗಿ, ಎಲ್ಲರ ಮನಸೂರೆಗೊಳ್ಳುತ್ತಿದೆ. ಹೈದರಾಬಾದ್ ಹಾಗೂ ಮುಂಬೈನಲ್ಲಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ’ ಎಂದರು.
‘ಯಥಾಭವ’ ಸಿನಮಮಾದಲ್ಲಿ ನ್ಯಾಯಾಧೀಶರಾಗಿ ಹಿರಿಯ ನಟ ದತ್ತಣ್ಣ ಅಭಿನಯಿಸಿದ್ದಾರೆ . ಗೋಪಾಲಕೃಷ್ಣ ದೇಶಪಾಂಡೆ ವಕೀಲರಾಗಿ ಹಾಗೂ ಬಾಲ ರಾಜವಾಡಿ ಅವರು ಗೃಹ ಮಂತ್ರಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಶಂಕರ್, ಸಹನ ಸುಧಾಕರ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದು, ನಟ ರಾಕ್ ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಕನ್ನಡದಲ್ಲಿ ಈಗ ಹೊಸ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದೆ. ಹೊಸ ಚಿತ್ರಗಳು ಗೆಲ್ಲುತ್ತಿದೆ. ನಾನು ಈ ಚಿತ್ರದಲ್ಲಿ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ಬಹುತೇಕರು ಸಿನಿಮಾ ಕುರಿತು ಓದಿಕೊಂಡಿರುವವರು. ಈ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದು ಸಂತೋಷವಾಗಿದೆ’ ಎಂದರು ಹಿರಿಯನಟ ದತ್ತಣ್ಣ.
ಉಳಿದಂತೆ ನೀನಾಸಂ ಆನಂದ್, ಮಹೇಶ್ ಕಲಿ, ಯಶಸ್ವಿನಿ ರವೀಂದ್ರ, ಮಾಸ್ಟರ್ ಶಮಂತ್ ಮೊದಲಾದವು ‘ಯಥಾಭವ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ನವೆಂಬರ್ ತಿಂಗಳಿನಲ್ಲಿ ‘ಯಥಾಭವ’ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.