ಕಾತರಕ್ಕೆ ತೆರೆಬಿದ್ದಾಗಿದೆ. ಕಾಂತಾರ ಮೊದಲ ಅಧ್ಯಾಯದ ಚಾಪ್ಟರ್ ಓಪನ್ ಆಗಿದೆ. ಇದು ಬೆಳಕಲ್ಲ ದರ್ಶನ ಎನ್ನುತ್ತಾ ಭೂತಕಾಲ ಹಾಗೂ ಭವಿಷ್ಯದ ಕಥೆ ಹೇಳೋದಿಕ್ಕೆ ಕಾಡುಬೆಟ್ಟ ಶಿವ ಹೊಸ ರೂಪದಲ್ಲಿ ದರ್ಶನ ಕೊಟ್ಟಿದ್ದಾನೆ. ಕಾಂತಾರ ಪ್ರೀಕ್ವೆಲ್ ಫಸ್ಟ್ ಲುಕ್ ಟೀಸರ್ ಹೊರಬಿದ್ದಿದೆ. ಟೀಸರ್ ನೋಡಿದವ್ರೇ ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ ಎನ್ನುತ್ತಿದ್ದಾರೆ. ಹಾಗಿದ್ರೆ ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ಟೀಸರ್ ಸ್ಪೆಷಾಲಿಟಿಗಳೇನು? ಹೇಗಿದೆ ಟೀಸರ್ ಧಮಾಕ ಅನ್ನೋದನ್ನು ವಿವರಿಸೋದಿಕ್ಕೂ ಮುನ್ನ ಕಾಂತಾರ 1 ಸೆಟ್ಟೇರಿದ ಕಥೆಯನ್ನು ನಿಮ್ಮ ಮುಂದೆ ಹರವಿಡ್ತೀವಿ ಕೇಳಿ.

ಕಾಂತಾರ ಸಿನಿಮಾದ ಮೊದಲ ಅಧ್ಯಾಯದ ಮುಹೂರ್ತ ರಿಷಬ್ ಹುಟ್ಟೂರಿನಲ್ಲಿಯೇ ಅದ್ಧೂರಿಯಾಗಿ ನೆರವೇರಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಸಿ ಶ್ರೀವಿನಾಯಕ ದೇಗುಲದಲ್ಲಿ ಕಾಂತಾರ ಪ್ರೀಕ್ವೆಲ್ ಗೆ ಚಾಲನೆ ಸಿಕ್ಕಿದೆ. ವಿಶೇಷ ಅಂದ್ರೆ ಇದೇ ದಿವ್ಯಾಜಾಗದಲ್ಲಿಯೇ ಕಾಂತಾರ ಸೀಕ್ವೆಲ್ ಹಾಗೂ ಕೆಜಿಎಫ್ ಸರಣಿ ಚಿತ್ರಗಳ ಮುಹೂರ್ತ ನಡೆದಿತ್ತು. ಈ ಜಾಗದ ಮಹಿಮೆಯೋ ಏನೋ ಈ ಎರಡು ಸಿನಿಮಾಗಳು ಗಡಿ ಗುಡಿ ದಾಟಿ ಸದ್ದು ಸುದ್ದಿ ಮಾಡಿದ್ದು ಕೋಟಿ ಕೋಟಿ ಹಣ ಲೂಟಿದ್ದು ಎಲ್ಲವೂ ಕಣ್ಮುಂದೆಯೇ ಇದೆ. ಇದೀಗ ಇದೇ ಜಾಗದಲ್ಲಿ ದಿವ್ಯಘಳಿಗೆಯಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ.

ಕಾಂತಾರ-1 ಮುಹೂರ್ತಕ್ಕೂ ಮುನ್ನ ಹೊಂಬಾಳೆ ಫಿಲ್ಮಂಸ್ ಯೂಟ್ಯೂಬ್ ನಲ್ಲಿ ಫಸ್ಟ್ ಲುಕ್ ಟೀಸರ್ ಹರಿಬಿಡಲಾಯ್ತು.. ಯೂಟ್ಯೂಬ್ ಗೆ ಕಾಡುಬೆಟ್ಟ ಶಿವನ ತಂದೆಯ ಮೊದಲ ನೋಟ ಲಗ್ಗೆ ಇಡ್ತಿದ್ದಂತೆ ರಾಕೆಟ್ ವೇಗದಲ್ಲಿಯೇ ವೀವ್ಸ್ ಕಂಡಿದೆ. ಕಾಂತಾರ ಮುಂದುವರೆದ ಪಯಣ ಹೇಗಿರಲಿದೆ? ಕಾಡುಬೆಟ್ಟ ಶಿವನ ತಂದೆ ಲುಕ್ ಗೆಟಪ್ ಹೇಗಿರಲಿದೆ? ಎಂಬ ಪ್ರಶ್ನೆಗೀಗ ಉತ್ತರ ಸಿಕ್ಕಿದೆ.
ಜಬರ್ದಸ್ತ್ ಮೈಕಟ್ಟು , ರಕ್ತಸಿಕ್ತ ದೇಹ..ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿ ಹಿಡಿದಿರುವ ರಿಷಬ್ ಕೊರಳಲಿ ರುದ್ರಾಕ್ಷಿ ಮಾಲೆ ತೊಟ್ಟು ಉದ್ದವಾದ ಕೂದಲು, ಗಡ್ಡ ಬಿಟ್ಟು ಭಯಂಕರವಾಗಿ ಕಾಣಿಸಿಕೊಂಡಿದ್ದಾರೆ. ಕಾಡುಬೆಟ್ಟು ಶಿವ ಈಗ ರೌದ್ರಾವತಾರ ತಾಳಿದ್ದಾರೆ. ಆತ ಅಘೋರಿನಾ ಅಥವಾ ಪರಶುರಾಮನಾ ಎಂಬ ನಾನಾ ಪ್ರಶ್ನೆ ಹುಟ್ಟುಹಾಕಿದೆ.

ರಿಷಬ್ ರೌಧ್ರನರ್ತನ ಅಜನೀಶ್ ಲೋಕನಾಥ್ ಮ್ಯೂಸಿಕ್ ಮಂಥನ..ನೋಡುಗರಿಗೆ ಕಿಕ್ ಕೊಡ್ತಿದೆ. ಕಾಂತಾರ ವಿಸ್ಮಯ ಪ್ರಪಂಚವನ್ನು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಿನಿಮಾಪ್ರೇಮಿಗಳ ಎದುರು ತೆರೆದಿಟ್ಟಿದ್ದಾರೆ. ಕಾಂತಾರ ಮೊದಲ ಅಧ್ಯಾಯದ ಹೊಸ ಪಯಣದಲ್ಲಿ ಜೊತೆಯಾಗುವವರು ಯಾರು? ಪ್ರೀಕ್ವೆಲ್ ನಲ್ಲಿ ರಿಷಬ್ ಜೊತೆ ಬಣ್ಣ ಹಚ್ಚುವವರು ದಿಬ್ಬಣ ಹೊರಡುವವರು ಯಾರು? ಎಂಬ ಪ್ರಶ್ನೆಗಳಿಗೆ ರಿಷಬ್ ಕುತೂಹಲ ಕಾಯ್ದುಗೊಂಡಿದ್ದಾರೆ. ಕನ್ನಡ ಕಲಾವಿದರಿಗೆ ಮೊದಲ ಆದ್ಯತೆ ಎಂದಿರುವ ಕಾಂತಾರ ಅಧಿಪತಿ ಫ್ಲಸ್ ಸಾರಥಿ ರಿಷಬ್, ಬೇರೆ ರಾಜ್ಯದ ಕಲಾವಿದರಿಗೂ ಚಾನ್ಸ್ ಕೊಡವ ಬಗ್ಗೆ ಹಿಂಟ್ ಬಿಟ್ಟು ಕೊಟ್ಟಿದ್ದಾರೆ.

ಕಾಂತಾರ ಪ್ರೀಕ್ವೆಲ್ ಫಸ್ಟ್ ಲುಕ್ ಟೀಸರ್ ಏಳು ಭಾಷೆಯಲ್ಲಿ ಅನಾವರಣಗೊಂಡಿದೆ. ಮೊದಲ ಭಾಗವನ್ನು ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಆದ್ರೆ ಕಾಂತಾರ ಸೀಕ್ವೆಲ್ ಗೆ ಸಿಕ್ಕ ಅಭೂತಪೂರ್ವ ಯಶಸ್ಸಿನ ನಂತ್ರ ಚಿತ್ರತಂಡ ಬೇರೆ ಭಾಷೆಯಲ್ಲಿಯೂ ದಂತಕಥೆಯನ್ನು ಪ್ರೇಕ್ಷಕರ ಎದುರು ತೆರೆದಿಟ್ಟಿತ್ತು. ಆ ನಂತ್ರ ಆಗಿದ್ದೆಲ್ಲವೂ ಮ್ಯಾಜಿಕ್. ಡಿವೈನ್ ಹಿಟ್ ಕಂಡ ಕಾಂತಾರ ಚಾಪ್ಟರ್ 2 ಸಿನಿಮಾದಲ್ಲಿ ಕಾಡು ಮನುಷ್ಯ ಮತ್ತು ಮಾವನ ಸಂಘರ್ಷ ಪಂಜುರ್ಲಿ ಕಥೆ ಹೇಳಲಾಗಿತ್ತು. ಕಾಂತಾರ ಮುಂದುವರೆದ ಭಾಗದಲ್ಲೀಗ ಕದಂಬರ ಕಥೆಯನ್ನು ಡಿವೈನ್ ಸ್ಟಾರ್ ಹೇಳೋದಿಕ್ಕೆ ಹೊರಟಿದ್ದಾರೆ. 14ರ ಶತಮಾನದಿಂದ ಶುರುವಾಗುವ ಕಥೆಗೆ ರಿಷಬ್ ಜೊತೆ ಅನಿರುದ್ಧ್ ಮಹೇಶ್ ಹಾಗೂ ಸುನಿಲ್ ಗುರು ಸಾಥ್ ಕೊಟ್ಟಿದ್ದಾರೆ.

ಕಾಂತರ ಸೀಕ್ವೆಲ್ ನಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗವೂ ಪ್ರೀಕ್ವೆಲ್ ಗೆ ದುಡಿಯಲಿದೆ. ಅಜನೀಶ್ ಸಂಗೀತದ ಇಂಪು, ಅರವಿಂದ್ ಕಶ್ಯಪ್ ಕ್ಯಾಮೆರಾ ತಂಪು ಕಾಂತಾರ ಚಾಪ್ಟರ್ 1 ಸಿನಿಮಾಕ್ಕಿರಲಿದೆ. ಕಥೆ ರೆಡಿಯಾಗಿದ್ದು, ಪ್ರೀ ಪ್ರೊಡಕ್ಷನ್ ಕೆಲಸ ಭರದಿಂದ ಸಾಗ್ತಿದ್ದು, ಡಿಸೆಂಬರ್ ನಿಂದ ಶೂಟಿಂಗ್ ಅಖಾಡಕ್ಕೆ ಕಾಡುಬೆಟ್ಟು ಶಿವ ತಂಡ ಕಟ್ಟಿಕೊಂಡು ಧುಮುಕಲಿದ್ದಾರೆ. ಅಲ್ಲಿವರೆಗೂ ಕಾಂತಾರ ದಂತಕಥೆಯ ಮೊದಲ ನೋಟ ನೋಡ್ತಾ ಜಸ್ಟ್ ಚಿಲ್ ಹಿಟ್ ಗುರು..ಒಂದಂತೂ ನಿಜ..ಕಾಂತಾರ ಎರಡನೇ ಅಧ್ಯಾಯಕ್ಕಿಂತ ಮೊದಲ ಅಧ್ಯಾಯ ಅದ್ಭುತವಾಗಿ ಮೂಡಿ ಬರಲಿದೆ ಅನ್ನೋದಕ್ಕೆ ಈ ಝಲಕ್ ಸಾಕ್ಷಿ.. ಹೊಂಬಾಳೆ ಕೋಟಿ ಕೋಟಿ ಫಂಡಿಂಗ್, ರಿಷಬ್ ಟೇಕಿಂಗ್ ಫ್ಲಸ್ ಆಕ್ಟಿಂಗ್ ತುಂಬಿರುವ ಕಾಂತಾರ ಪ್ರೀಕ್ವೆಲ್ ಕಣ್ತುಂಬಿಕೊಳ್ಳಬೇಕು ಅಂದ್ರೂ ಬರೋಬ್ಬರಿ ಒಂದು ವರ್ಷವಂತೂ ಕಾಯ್ಲೇಬೇಕು..





