ಈ ಹಿಂದೆ ‘ಗೋವಿಂದಾಯ ನಮಃ’, ‘ಶಿವಲಿಂಗ’ ಮೊದಲಾದ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದ ಕೆ. ಎ. ಸುರೇಶ್ ನಿರ್ಮಾಣದ ‘ತೋತಾಪುರಿ -2’ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ಸೆಪ್ಟೆಂಬರ್ 29 ರ ಶುಕ್ರವಾರ ‘ತೋತಾಪುರಿ -2’ ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ.

ಕಳೆದ ವರ್ಷ ತೆರೆಕಂಡಿದ್ದ ನವರಸನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಅಭಿನಯದ ‘ತೋತಾಪುರಿ’ ಚಿತ್ರದ ಸೀಕ್ವೇನ್ಸ್ ಇದಾಗಿದ್ದು, ‘ನೀರ್ ದೋಸೆ’ ಖ್ಯಾತಿಯ ವಿಜಯಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ‘ಸುರೇಶ್ ಆರ್ಟ್ಸ್, ಮೋಲನಿ ಫ್ಲಿಕ್ಸ್ ಸ್ಟುಡಿಯೋಸ್’ ಲಾಂಚನದಲ್ಲಿ ಕೆ. ಎ. ಸುರೇಶ್ ಅವರು ಅದ್ದೂರಿಯಾಗಿ ನಿರ್ಮಿಸಿದ್ದಾರೆ.

‘ತೋತಾಪುರಿ-2’ ಸಿನಿಮಾದಲ್ಲಿ ಜಗ್ಗೇಶ್ ಜೊತೆಗೆ ನಟ ರಾಕ್ಷಸ ಡಾಲಿ ಧನಂಜಯ್ ಕೂಡ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಈ ಸಿನಿಮಾದಲ್ಲೂ ಮುಂದುವರಿದಿವೆ. ಚಿತ್ರಕ್ಕೆ ನಿರಂಜನ ಬಾಬು ಛಾಯಾಗ್ರಹಣ, ಅರುಣ್ ಆಂಡ್ರ್ಯೂ ಸಂಗೀತ ಸಂಯೋಜನೆಯಿದೆ. ಉತ್ತಮ ಮನರಂಜನೆಯ ಜೊತೆ ಸದಭಿರುಚಿಯ ಹಾಸ್ಯ ‘ತೋತಾಪುರಿ-2’ ಚಿತ್ರದ ಹೈಲೈಟ್ ಎಂದು ಹೇಳಿಕೊಳ್ಳುತ್ತಿದೆ ಚಿತ್ರತಂಡ.





