-ಗಂಡಾಗಿ ಹುಟ್ಟಿದವರು ಹೇಗೆ ಹೆಣ್ಣಾಗ್ತಾರೆ?
-ಬೆಂಗಳೂರನ್ನೇ ನಡುಗಿಸಿತ್ತು ಆನಂದಿ ಗ್ಯಾಂಗು!
ಆನಂದಿ ಗ್ಯಾಂಗ್… ಈ ಹೆಸರು ಕೇಳಿದಾಕ್ಷಣವೇ ಬೆಂಗಳೂರಿಗರ ಎದೆಯಲ್ಲಿ ಭಯದ ನಗಾರಿ ಬಾರಿಸಲಾರಂಭಿಸುತ್ತೆ. ಸಾಮಾನ್ಯವಾಗಿ ಈ ಮಂಗಳಮುಖಿಯರ ಬಗ್ಗೆ ನಾಗರಿಕ ಸಮಾಜದಲ್ಲೊಂದು ತೆರನಾದ ಭಯವಿದೆ. ಹೇವರಿಕೆಯೂ ಇದೆ. ಗಂಡೂ ಅಲ್ಲದ ಹೆಣ್ಣೂ ಅಲ್ಲದ ಪ್ರಾಕೃತಿಕ ಸಂದಿಗ್ಧಕ್ಕೆ ಸಿಲುಕಿದ ಇಂಥವರನ್ನು ಮನುಷ್ಯರಂತೆ ಪರಿಗಣಿಸುವ ಮನಸ್ಥಿತಿಯೂ ಜನರಿಗಿನ್ನೂ ಬಂದಿಲ್ಲ. ಆದರೆ ಇಂಥಾ ಮಂಗಳಮುಖಿಯರ ಪೈಕಿ ಕೆಲವರು ತೋರಿಸುವ ಪೈಚಾಚಿಕ ವರ್ತನೆಗಳಿಂದ ಒಂದಿಡೀ ಸಮುದಾಯ ಮತ್ತೆ ಮತ್ತೆ ನಿಂದನೆಗೊಳಗಾಗುತ್ತಲೇ ಇದೆ. ಆನಂದಿ ಎಂಬ ಮಂಗಳಮುಖಿಯೊಬ್ಬಳ ಗ್ಯಾಂಗು ಸಹ ಎದೆ ನಡುಗಿಸುವಂಥಾ ಭಯಾನಕ ಕೃತ್ಯವೊಂದನ್ನೆಸಗಿ ಪೊಲೀಸರ ಕೈಗೆ ತಗುಲಿಕೊಂಡಿತ್ತು. ಈ ಗ್ಯಾಂಗ್ ನಡೆಸಿದ ಅಮಾನವೀಯ ಕೃತ್ಯವನ್ನು ಕಂಡು ಜನಸಾಮಾನ್ಯರೂ ಬೆಚ್ಚಿ ಬಿದ್ದಿದ್ದಾರೆ. ಈ ಮೂಲಕ ಎಲ್ಲ ಮಾಫಿಯಾಗಳನ್ನೂ ನಿವಾಳಿಸಿ ಎಸೆಯುವಂಥಾ ಮಹಾ ಕ್ರೌರ್ಯವೊಂದು ಸಪಾಟಾಗಿ ಅನಾವರಣಗೊಂಡಂತಿದೆ!
ಹುಟ್ಟುವಾಗ ಗಂಡಾಗಿ ಆ ನಂತರ ಒಂದೊಂದೇ ಚಹರೆಗಳನ್ನು ಬದಲಾಯಿಸಿಕೊಳ್ಳುತ್ತಾ ಕಡೆಗೆ ಅತ್ತ ಗಂಡೂ ಅಲ್ಲದೇ ಇತ್ತ ಹೆಣ್ಣೂ ಅಲ್ಲದೆ ಬದುಕುವ ನರಕದಂಥಾ ಜೀವನ ಮಂಗಳ ಮುಖಿಯರದ್ದು. ಅವರದ್ದು ನೋವಿನ ಲೋಕ. ಆದರೆ ಮುಖ್ಯವಾಹಿನಿಯಿಂದ ಸದಾ ತಿರಸ್ಕಾರವನ್ನೇ ಕಾಣುವ ಈ ಲೋಕದ ಕೆಲ ಮಂದಿ ಮೃಗಗಳಾಗೋದೂ ಇದೆ. ತಮಗೆ ಪಾಕೃತಿಕವಾಗಿ ಸಿಕ್ಕ ಶಾಪವನ್ನು ಬೇರೆಯವರ ಮೇಲೆ ಒತ್ತಾಯಪೂರ್ವಕವಾಗಿ ಹೇರುವ ಪೈಚಾಶಿಕ ಪವೃತ್ತಿ ಈ ಸಮುದಾಯದ ಕಡೆಯಿಂದ ಆಗಾಗ ನಡೆಯುತ್ತದೆ. ಅದು ಒತ್ತಾಯಪೂರ್ವಕ ಲಿಂಗಪರಿವರ್ತನೆ. ಯಾವ ಶಸ್ತ್ರ ಚಿಕಿತ್ಸೆಯೂ ಇಲ್ಲದೇ ಯುವಕರ ಮರ್ಮಾಂಗ ಕತ್ತರಿಸಿ ತಮ್ಮ ಸಮುದಾಯಕ್ಕೆ ಸೇರಿಸಿಕೊಳ್ಳುವ ಕ್ರೂರ ಕೆಲಸ ಈ ಜಗತ್ತಲ್ಲಿ ಸದ್ದಿಲ್ಲದೆ ನಡೆಯುತ್ತಲೇ ಇದೆ. ಆದರೆ ಆನಂದಿ ಗ್ಯಾಂಗ್ನ ಪೈಶಾಚಿಕ ಕೃತ್ಯ ಮಾತ್ರ ಭಾರೀ ಸದ್ದು ಮಾಡಿದೆ.
ಯಾರೀ ಆನಂದಿ?

ಈ ಆನಂದಿ ಪುಲಕೇಶಿನಗರ ಸುತ್ತಮುತ್ತಲ ಏರಿಯಾಗಳ ಸಮಸ್ತ ಮಂಗಳಮುಖಿಯರ ಗ್ಯಾಂಗಿಗೂ ಡಾನ್. ಇಂಥಾ ಆನಂದಿಯ ತಂಡಕ್ಕೆ ತೀರಾ ಕಳೆದ ವರ್ಷದ ಹೊತ್ತಿಗೆ ಸೇರಿಕೊಂಡಿದ್ದವನು ನರೇಶ್. ಆತ ಈಗ ಸ್ವ ಯಂ ಆಗಿ ಮಲಿಂಗ ಪರಿವರ್ತನೆ ಮಾಡಿಕೊಂಡು ಆನಂದಿ ಗ್ಯಾಂಗಿನಲ್ಲಿ ಐಶು ಹೆಸರಿನಲ್ಲಿ ಗುರುತಿಸಿಕೊಂಡಿದ್ದಾನೆ. ಇಂಥಾ ನರೇಶ ಒಂದು ಗೌರವಸ್ಥ ಮನೆತನದಿಂದಲೇ ಬಂದಿದ್ದವನು. ಓದಿದೆಲ್ಲ ಹೈಫೈ ಶಾಲೆಯಲ್ಲಿಯೇ. ಈ ನರೇಶನಿಗೆ ಬಾಲ್ಯ ಕಾಲದಿಂದಲೂ ಸ್ನೇಹಿತನಾಗಹಿದ್ದಾತ ನಸೀಬುಗೆಟ್ಟ ರಾಜೇಶ. ಆದರೆ ನರೇಶ್ ಮಾತ್ರ ನೋಡ ನೋಡುತ್ತಲೇ ಮಂಗಳಮುಖಿಯರೊಂದಿಗೆ ಸೇರಿಕೊಂಡಿದ್ದ. ಆದರೆ ಆ ನಂತರವೂ ರಾಜೇಶನನ್ನು ಆಗಾಗ ಬಂದು ಭೇಟಿಯಾಗುತ್ತಿದ್ದ. ಆ ಹೊತ್ತಿಗಾಗಲೇ ಕಾಲೇಜು ಮೆಟ್ಟುಲು ಹತ್ತಿದ್ದ ರಾಜೇಶನನ್ನೂ ಕೂಡಾ ತನ್ನ ಗ್ಯಾಂಗಿಗೆ ಸೇರಿಸಿಕೊಳ್ಳುವ ಉದ್ದೇಶದಿಂದ ಇತರೇ ಮಂಗಳಮುಖಿಯರಿಗೂ ಪರಿಚಯಿಸಿದ್ದ. ಹೀಗೆಯೇ ಮುಂದುವರೆದು ಅದೊಂದು ದಿನ ಆನಂದಿಗೂ ರಾಜೇಶನನ್ನು ಪರಿಚಯ ಮಾಡಿಸಿದ್ದ. ಆ ಬಳಿಕ ಶುರುವಾದದ್ದು ಆನಂದಿ ಗ್ಯಾಂಗಿನ ಅಸಲೀ ವರಸೆ!
ರಾಜೇಶನನ್ನು ಮೆಲ್ಲಗೆ ಮನಪರಿವರ್ತನೆ ಮಾಡಿ ಮಂಗಳಮುಖಿಯಾಗಿಸಲು ಮೆಲ್ಲಗೆ ಕೆಲಸ ಶುರುವಾಗಿತ್ತು. ಈ ರಾಜೇಶನಿಗೂ ಕೂಡಾ ವಯಸ್ಸು ಹದಿನೆಂಟಾದರೂ ಧ್ವನಿಪೆಟ್ಟಿಗೆ ಒಡೆದಿರಲಿಲ್ಲ. ಅದನ್ನೇ ಬಳಸಿಕೊಂಡು ಆತ ಮಂಗಳಮುಖಿ ಅಂತಲೇ ನಂಬಿಸುವ ಕೆಲಸವೂ ಸಾಂಘವಾಗಿಯೇ ನೆರವೇರಿತ್ತು. ಈ ನಡುವೆ ಶಾಸ್ತ್ರೋಕ್ತವಾಗಿ ರಾಜೇಶನ ಬದುಕು ಹಾಳು ಮಾಡೋ ಕೆಲಸಕ್ಕೆ ಚಾಲನೆ ಸಿಕ್ಕಿದ್ದು ಶಿವಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿರೋ ಮಾರಿಯಮ್ಮ ದೇವಸ್ಥಾನದಲ್ಲಿ. ಇಲ್ಲಿ ಅರ್ಚಕನಾಗಿರುವಾತ ತುಳಸಿಯಪ್ಪನ್. ಈತ ಕೂಡಾ ಮಂಗಳಮುಖಿಯೇ ಆದರೂ ಗಂಡಸಿನಂತೆಯೇ ಬದುಕುತ್ತಿದ್ದಾನೆ. ಆದರೆ ಹೀಗೆ ಆನಂದಿಯಂಥಾ ಗ್ದಯಾಂಗುಗಳು ಕರೆತರುವ ಹುಡುಗರನ್ನು ಮಂಗಳಮುಖಿಯಾಗಿಸುವ ಏಜೆಂಟನಂತೆ ತುಳಸಿಯಪ್ಪನ್ ಕೆಲಸ ಮಾಡುತ್ತಿದ್ದಾರೆ. ರಾಜೇಶನನ್ನು ನರೇಶ್ ಅಲಿಯಾಸ್ ಐಶು ತಂದು ಬಿಟ್ಟಿದ್ದೂ ಕೂಡಾ ಇದೇ ಅಡ್ಡೆಗೆ. ಹೀಗೆ ಬಂದ ರಾಜೇಶನಿಗೆ ತುಳಸಿಯಪ್ಪನ್ ದೇವರಿಗೆ ಸೀರೆ ಉಡಿಸೋದರಿಂದ ಹಿಡಿದು ಹೆಣ್ಣಿನಂತೆ ಮಾತು ವರ್ತನೆಗಳನ್ನೆಲ್ಲ ಕಲಿಸಿ ಮಂಗಳ ಮುಖಿಯಾಗಿಸೋ ಪ್ರಯತ್ನ ಮಾಡಿದ್ದ. ಒಂದೆರಡು ಸಲ ಮನೆ ಬಿಟ್ಟು ಹೋಗುವಂತೆ ಮಾಡಿದ್ದ. ಆದರೆ ಹೇಗೋ ಬಚಾವಾಗಿ ಬಂದ ಈ ಹುಡುಗನನ್ನು ಆತನ ತಾಯಿ ಹೇಗೋ ಬುದ್ಧಿ ಹೇಳಿ ಸರಿ ದಾರಿಗೆ ತಂದಿದ್ದರು.
ಒತ್ತಾಯದ ಲಿಂಗಪರಿವರ್ತನೆ

ಆದರೆ ಈಗ್ಗೆ ವಾರದ ಹಿಂದೆ ಆನಂದಿ ಗ್ಯಾಂಗು ಈ ಹುಡುಗನ ಬದುಕು ಹಾಳು ಮಾಡಲು ಪಕ್ಕಾ ಮುಹೂರ್ತ ಇಟ್ಟಿತ್ತು. ಆ ದಿನ ಮನೆಯಿಂದ ಹೊರ ಹೊರಟಿದ್ದ ರಾಜೇಶ್ನನ್ನು ಆತನ ಮನೆಯಿಂದ ತುಸು ದೂರದಲ್ಲಿ ಕಂಡು ಮಾತಾಡಿಸಿದ್ದು ನರೇಶ್ ಅಲಿಯಾಸ್ ಐಶು. ಆ ಬಳಿಕೆ ಅಲ್ಲಿಗೆ ಆನಂದಿಯೂ ಬಂದಿದ್ದಳು. ತದನಂತರ ರಾಜೇಶನನ್ನು ಪುಸಲಾಯಿಸಿ ಆಟೋ ಹತ್ತಿಸಿಕೊಂಡ ಇವರಿಬ್ಬರೂ ಆತನಿಗೆ ಹೊಡೆಯುತ್ತಲೇ ಯಶವಂತಪುರ ಬಳಿಯಿದ್ದ ಮನೆಯೊಂದಕ್ಕೆ ಎಳೆದೊಯ್ದಿದ್ದರು. ಆ ನಂತರ ಈ ಹುಡುಗನ ಮೇಲೆ ಆ ಗ್ಯಾಂಗು ನಡೆಸಿದ್ದೆಲ್ಲವೂ ಹೇಳಲೂ ಅಸಹ್ಯ ಹಾಗೂ ಆಘಾತವಾಗುವಂಥಾ ಚಿತ್ರಹಿಂಸೆ. ಅದೇ ದಿನ ರಾತ್ರಿ ಆನಂದಿಯ ಗ್ಯಾಂಗು ರಾಜೇಶನ ಮರ್ಮಾಂಗವನ್ನು ಕತ್ತರಿಸಿ ಹಾಕಿತ್ತು. ಆ ಬಳಿಕ ಕೊತ ಕೊತ ಕುದಿಯುವ ಬ್ರೇಕ್ ಆಯಿಲ್ ಅನ್ನು ಕತ್ತರಿಸಿದ ಮರ್ಮಾಂಗದ ಭಾಗಕ್ಕೆ ಎರಚಿದ್ದರು. ಆ ಬಳಿಕ ಹದಿನೈದು ದಿನಗಳ ಕಾಲ ಅದೇ ಹಿಂಸೆ ಮುಂದುವರೆದಿತ್ತು. ಇತ್ತ ರಾಜೇಶನ ತಾಯಿ ಮಂಗಳಮುಖಿಯರ ಬಗ್ಗೆ ಅನುಮಾನಗೊಂಡು ಪುಲಕೇಶಿ ನಗರ ಪೊಲೀಸರಿಗೆ ದೂರು ಕೊಟ್ಟಿದ್ದರಲ್ಲಾ? ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಕಾಕ್ಸ್ಟೌನ್ನಲ್ಲಿರುವ ಮಂಗಳಮುಖಿಯರ ಅಡ್ಡೆಗೆ ಮುತ್ತಿಗೆ ಹಾಕಿ ಹುಡುಗನನ್ನು ರಕ್ಷಿಸಿದ್ದರು. ಇನ್ನೊಂದಷ್ಟು ದಿನಗಳಾಗಿದ್ದರೆ ಈ ಹುಡುಗ ಸತ್ತೇ ಹೋಗುತ್ತಿದ್ದನೇನೋ…
ಮಂಗಳಮುಖಿಯರ ಜಗತ್ತಿನಲ್ಲಿ ಇಂಥಾ ಕ್ರೌರ್ಯವಿದೆ. ನಿಗೂಢವಿದೆ. ಆದರೆ ಎಲ್ಲ ಮಂಗಳಮುಖಿಯರನ್ನೂ ಇದೇ ತಕ್ಕಡಿಯಲ್ಲಿಟ್ಟು ನೋಡುವ ಅಗತ್ಯವಿಲ್ಲ. ಆದರೆ ಆ ಜಗತ್ತಿನ ಕ್ರೌರ್ಯದಲ್ಲಿ ಮುಖ್ಯವಾಹಿನಿಯ ಪಾಲೂ ಬೆಟ್ಟದಷ್ಟಿದೆ ಎಂಬುದು ವಿವಾದಾತೀತ. ಮಂಗಳಮುಖಿಯರು ತಮ್ಮ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ಗಾಯದ ಗುರುತು ಹೊರ ಜಗತ್ತಿಗೆ ಗೊತ್ತಾ ಗುವುದಿಲ್ಲ. ಇತರರಿಗೆ ಕಾಣಿಸುವುದು ಅವರು ಧರಿಸುವ ಸೀರೆ, ರವಿಕೆ ಮತ್ತು ತುಟಿಗೆ ಹಚ್ಚಿಕೊಳ್ಳುವ ಲಿಪ್ಸ್ಟಿಕ್ ಮಾತ್ರ. ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ. ಆದರೆ ಅವರ ಮನದಾಳದ ಬೇಗುದಿ ಯಾರಿಗೂ ಅರ್ಥವಾಗುವುದಿಲ್ಲ. ಸೀರೆಯುಟ್ಟುಕೊಂಡು ನಮ್ಮ ಸುತ್ತಮುತ್ತ ಓಡಾಡುವ ಅವರನ್ನು ನೋಡಿದ್ದೇವೆ. ಅಂಗಡಿ ಮಳಿಗೆಗಳಲ್ಲಿ ಕಾದು ಬೇಡುತ್ತಾರೆ. ದುಡ್ಡು ಕೊಡದಿದ್ದರೆ ಕೆಲವರು ವಿಲಕ್ಷಣ ವರ್ತನೆಯಿಂದ ಕಾಡುತ್ತಾರೆ.
ಅದೆಂಥಾ ನೋವು…

ಮಂಗಳಮುಖಿ ಎಂದರೆ ನಾಗರಿಕ ಸಮಾಜಕ್ಕೆ ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ. ಆದರೆ ಅವರ ಮನದಾಳದ ಬೇಗುದಿ ಯಾರಿಗೂ ಅರ್ಥವಾಗುವುದಿಲ್ಲ. ನಮ್ಮಲ್ಲಿ ಹಾವು, ಬೆಕ್ಕು, ನಾಯಿಗಳು ಎಷ್ಟಿವೆ ಎಂದು ಗಣತಿ ಮಾಡಲಾಗುತ್ತದೆ. ಆದರೆ ಮಂಗಳಮುಖಿಯರಿಗೆ ಇಂತಹ ಲೆಕ್ಕವೇ ಇಲ್ಲ. ಭಾರತದಲ್ಲಿ ಐವತ್ತು ಸಾವಿರದಿಂದ ಐದು ಲಕ್ಷ ಮಂಗಳಮುಖಿಯರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಐದು ಸಾವಿರಕ್ಕೂ ಅಧಿಕ ಮಂಗಳಮುಖಿಯರನ್ನು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಈಗ ಇರುವ ಮಂಗಳಮುಖಿಯರ ಸಂಖ್ಯೆ ಐನೂರಕ್ಕಿಂತ ಜಾಸ್ತಿ. ಅಷ್ಟಕ್ಕೂ ಮಂಗಳಮುಖಿಯರಾಗಲು ಕಾರಣ ಏನು? ಮಂಗಳಮುಖಿಗಳು ಹುಟ್ಟಿದಾಗ ಪುರುಷ ಎಂದೇ ಗುರುತಿಸಿಕೊಳ್ಳುತ್ತಾರೆ. ದೈಹಿಕ ಸ್ವರೂಪ ಕೂಡ ಹಾಗಿರುತ್ತದೆ. ಆದರೆ ಅಂದಾಜು ಹನ್ನೆರಡು-ಹದಿಮೂರರ ಹರೆಯದ ನಂತರ ಭಾವನೆಗಳಲ್ಲಿ ಪಲ್ಲಟ ಆರಂಭವಾಗಿ ಬಿಡುತ್ತದೆ. ಶಾಲೆಯಲ್ಲಿ ಬಾಲಕ ಸಹಪಾಠಿಯತ್ತ ಲೈಂಗಿಕ ಆಕರ್ಷಣೆಗೆ ಒಳಗಾಗಬಹುದು. ಶಾಲಾ ವಾರ್ಷಿಕೋತ್ಸವದ ನಾಟಕಗಳಲ್ಲಿ ಸ್ತ್ರೀ ಪಾತ್ರವೇ ಬೇಕು ಎಂದು ರಚ್ಚೆ ಹಿಡಿಯಬಹುದು. ತನ್ನಲ್ಲೇಕೆ ಇಂಥ ಭಾವನೆಗಳು ಬರುತ್ತಿವೆ? ಅಥವಾ ಇತರ ಬಾಲಕರಲ್ಲಿ ಕೂಡ ಇಂತಹುದೇ ಸ್ವಭಾವ ಇದೆಯಾ ಅಂತ ಆತ ಹುಡುಕಬಹುದು.
ಉತ್ತರ ಸಿಗದೆ ತಲ್ಲಣಗೊಳ್ಳಬಹುದು. ಹದಿನೆಂಟು ಇಪ್ಪತ್ತರ ಹೊತ್ತಿಗೆ ತಾನು ದೈಹಿಕವಾಗಿ ಪುರುಷನಾಗಿದ್ದರೂ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಹೆಣ್ಣು ಎಂಬುದು ಖಚಿತವಾಗುತ್ತದೆ. ಸಮಸ್ಯೆಗಳ ಪರಂಪರೆಯ ಮುಂದಿನ ಘಟ್ಟ ಅಮಾನುಷ. ಪೋಷಕರು, ಸೋದರ, ಸೋದರಿಯರಿಂದ ಅಪಹಾಸ್ಯ, ನಿಂದನೆ ಗುರಿಯಾಗಿ ಮನೆಯಲ್ಲಿ ನಿಲ್ಲಲಾಗದೆ ಹೊರಬೀಳುತ್ತಾರೆ. ತಮ್ಮ ಸಮುದಾಯವೇ ವಾಸಿ ಎಂದು ಮಂಗಳಮುಖಿಗಳ ಗುಂಪಿಗೆ ಸೇರುತ್ತಾರೆ. ಅಲ್ಲಿ ಅವರಿಗೆ ಬೇಕಾದ ಸಕಲ ಸ್ವಾತಂತ್ರ್ಯ ಸಿಗುತ್ತದೆ. ಭಾವನೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕರಿರುತ್ತಾರೆ. ಆದರೆ ಸಮಸ್ಯೆಗಳ ಸರಪಳಿ ಬದುಕನ್ನು ಕೊನೆಯತನಕ ಕಟ್ಟಿ ಹಾಕುತ್ತದೆ ಎನ್ನುವುದು ಮಂಗಳಮುಖಿಯರ ಕುರಿತು ಅಧ್ಯಯನ ಮಾಡುತ್ತಿರುವ ಮುಂಬಯಿಯ ಮೇರಿ ವೇಲು ಅವರ ಅಭಿಪ್ರಾಯ. ಮಂಗಳಮುಖಿಯರು ಅಂಗಡಿ, ಮಳಿಗೆಗಳಿಗೆ ಹೋಗಿ ಬೇಡುತ್ತಾರೆ. ಎಷ್ಟೋ ಮಂದಿ ಹಣ ಕೊಡದಿದ್ದರೆ ಗದರಿಸುತ್ತಾರೆ. ವಿಚಿತ್ರ ವರ್ತನೆಗಳಿಂದ ಪೀಡಿಸುತ್ತಾರೆ ಎಂಬ ಆಪಾದನೆ ಇದೆ.
ಕರಾವಳಿಯಲ್ಲೂ ಚಪ್ಪಾಳೆ ಸದ್ದು

ಮೂರು ವರ್ಷಗಳ ಹಿಂದೆ ಮಂಗಳೂರು ಪೇಟೆಯಲ್ಲಿ ಹತ್ತಾರು ಮಂಗಳಮುಖಿಯರು ಕಾಣ ಸಿಗುತ್ತಿದ್ದ ಪ್ರಸಂಗ ಇತ್ತು. ಆದರೆ ಈಗೀನ ಪರಿಸ್ಥಿತಿಯೇ ಸಂಪೂರ್ಣ ಭಿನ್ನ. ಮಂಗಳೂರು ನಗರ ಮಾತ್ರವಲ್ಲ ಕರಾವಳಿಯ ತಾಲೂಕು ಕೇಂದ್ರಗಳಲ್ಲಿಯೂ ಇವರ ಸಂಖ್ಯೆ ಏರಿಕೆ ಕಾಣಿಸಿಕೊಂಡಿದೆ. ಮಂಗಳೂರಿನ ಪಣಂಬೂರು ಬಂದರು ಪ್ರದೇಶವೊಂದರಲ್ಲಿಯೇ ಸರಿಸುಮಾರು ೩ಂಂಕ್ಕಿಂತ ಜಾಸ್ತಿ ಸಂಖ್ಯೆಯ ಮಂಗಳಮುಖಿಯರನ್ನು ವೀಕೆಂಡ್ ದಿನಗಳಲ್ಲಿ ಕಾಣಬಹುದು. ಪಣಂಬೂರು ಬಂದರು ಪ್ರದೇಶಕ್ಕೆ ನಾನಾ ಕಡೆಯಿಂದ ಬರುವ ಲಾರಿಗಳ ಚಾಲಕರು ಇವರನ್ನು ಇಲ್ಲಿಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮುಖ್ಯವಾಗಿ ಮುಂಬಯಿಯಿಂದಲೂ ಇಲ್ಲಿಗೆ ಬಂದು ನೆಲೆ ನಿಂತ ಮಂಗಳಮುಖಿಯರು ಇದ್ದಾರೆ. ನಗರದ ಹೊರವಲಯದಲ್ಲಿ ಠಿಕಾಣಿ ಹೂಡುವ ಮಂಗಳಮುಖಿಯರು ತಮ್ಮದೇ ತಂಡ ರಚಿಸಿಕೊಂಡು ಬೇಡುವ ಕೆಲಸದ ಜತೆಯಲ್ಲಿ ಲೈಂಗಿಕ ಕ್ರಿಯೆಯಲ್ಲೂ ತೊಡಗಿಕೊಂಡಿದ್ದಾರೆ. ವೀಕೆಂಡ್ ದಿನಗಳಲ್ಲಿ ಮಾತ್ರ ಹೆಚ್ಚು ಗಳಿಕೆ ಮಾಡುವ ಇವರು ಉಳಿದ ದಿನಗಳಲ್ಲಿ ಪೇಟೆ ಪಟ್ಟಣಗಳಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುವುದಿಲ್ಲ.
ಒರಿಜಿನಾಲಿಟಿ ಎನ್ನುವ ಪದಗಳ ಜತೆಗೆ ಹುಟ್ಟಿಕೊಂಡ ನಕಲಿತನ ಎನ್ನುವ ಪದ ಪ್ರಯೋಗ ಈಗ ಮಂಗಳಮುಖಿಯರಲ್ಲೂ ಕಾಣಿಸಿಕೊಂಡಿದೆ. ಮೈಮುರಿದುಕೊಂಡು ದುಡಿಯಲು ಬಯಸದ ಸೋಮಾರಿ ಯುವಕರು ಮಂಗಳಮುಖಿರಾಗುತ್ತಿದ್ದಾರೆ. ಅದರಲ್ಲೂ ಹಣ ಸುಳಿಗೆ ಮಾಡುವ ಕಾಯಕದಲ್ಲಿ ಭರ್ಜರಿಯಾಗಿ ನಿರತರಾಗಿದ್ದಾರೆ. ಮಹಿಳೆಯರಂತೆ ವೇಷಭೂಷಣ ಮಾಡಿಕೊಂಡು ಅವರ ಹಾವಭಾವಗಳನ್ನೇ ಕಾಫಿ ಮಾಡುವ ಈ ಯುವಕರು ಮಂಗಳಮುಖಿಯರಿಗೆ ಪೈಪೋಟಿ ನೀಡುವಂತೆ ಬೆಳೆದಿರುತ್ತಾರೆ. ಇದು ಬರೀ ಕರಾವಳಿಯ ಮಾತಲ್ಲ. ಇಡೀ ದೇಶದಲ್ಲಿ ಮಂಗಳಮುಖಿಯರು ಎಲ್ಲಿದ್ದರೋ ಅಲ್ಲಿ ಎಲ್ಲ ಈ ನಕಲಿ ಮಂಗಳಮುಖಿಯ ಕೆಲಸ ಕೂಡ ನಡೆಯುತ್ತದೆ. ಇಂತಹ ನಕಲಿ ಮಂಗಳಮುಖಿಯರನ್ನು ಹಿಡಿಯಲು ಪೊಲೀಸ್ ಇಲಾಖೆ ಕೂಡ ಸೋತು ಬಿಟ್ಟಿದೆ. ಮತ್ತೊಂದು ಕಡೆ ನಕಲಿ ಮಂಗಳಮುಖಿಯರ ಪತ್ತೆಗಾಗಿ ಮಂಗಳಮುಖಿಯರು ತಮ್ಮದೇ ತಂಡ ಕಟ್ಟಿಕೊಂಡು ಹುಡುಕಾಟ ಆರಂಭಿಸಿದ್ದಾರೆ ಎನ್ನುತ್ತಾರೆ ಮಂಗಳೂರಿನ ಮಂಗಳಮುಖಿಯರ ಮುಖ್ಯಸ್ಥೆ ರಾಣಿ.
ನಸೀಬುಗೆಟ್ಟ ಜೀವಗಳು








