ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ `ಹುಚ್ಚ’ ಚಿತ್ರದ ಮೂಲಕ ಕನ್ನಡಿಗರ ಮನೆಮಾತಾದ ನಾಯಕಿ ರೇಖಾ ವೇದವ್ಯಾಸ್ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಭರಪೂರ ಅವಕಾಶಗಳಿಲ್ಲದೇ ಸಿನಿಮಾ ಲೋಕದಿಂದ ದೂರ ಉಳಿದಿರೋ ನಟಿ ರೇಖಾ, ಸ್ಲಿಮ್ ಆಗಲು ಹೋಗಿ ಎಡವಟ್ಟು ಮಾಡಿಕೊಂಡರೋ ಅಥವಾ ಆರೋಗ್ಯ ಸಮಸ್ಯೆಗೆ ತುತ್ತಾದರೋ ಗೊತ್ತಿಲ್ಲ? ಸಿಕ್ಕಾಪಟ್ಟೆ ಸಣ್ಣ ಆಗಿದ್ದಾರೆ. ಬದಲಾದ ಲುಕ್ನಲ್ಲಿ ರೇಖಾರನ್ನ ನೋಡಿದ ಆಪ್ತರು ಹಾಗೂ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.
ಕೆಲ ವರ್ಷಗಳ ಹಿಂದೆ ತೂಕ ಹೆಚ್ಚಿಸಿಕೊಂಡು ದಪ್ಪ ಆಗಿದ್ದ ರೇಖಾ ಮತ್ತೆ ತೂಕ ಇಳಿಸಿ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಕಳೆದ 9 ವರ್ಷಗಳಿಂದ ರೇಖಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.ಇದೀಗ ನಟಿ ಇದ್ದಕ್ಕಿಂದ್ದಂತೆ ತೆಲುಗು ಕಿರುತೆರೆ ‘ಶ್ರೀದೇವಿ ಡ್ರಾಮಾ ಕಂಪೆನಿ’ ಶೋಗೆ ಅತಿಥಿಯಾಗಿ ಬಂದಿದ್ದಾರೆ. ನಟಿಯನ್ನು ನೋಡಿದ ಕೆಲವರು ಅಚ್ಚರಿಗೊಂಡಿದ್ದಾರೆ. ಬಹಳ ಸಣ್ಣಗಾಗಿರುವ ರೇಖಾ ಗುರುತು ಸಿಗದ್ದಷ್ಟು ಬದಲಾಗಿದ್ದಾರೆ. ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಆರೋಗ್ಯದ ಕುರಿತು ನಟಿ ಮಾತನಾಡುವಂತಿದೆ. ಈ ಪ್ರೋಮೊ ಇದೀಗ ವೈರಲ್ ಆಗುತ್ತಿದೆ.

ಸಿನಿಮಾ ಮಂದಿ ಫಿಟ್ ಇದ್ದಷ್ಟು ಮತ್ತು ದೇಹ ಸೌಂದರ್ಯ ಕಾಪಾಡಿಕೊಂಡಷ್ಟು ಬಾಳಿಕೆ ಹೆಚ್ಚು. ಹಾಗಾಗಿ ಡಯಟ್, ಫಿಟ್ನೆಸ್ ಎಂದೆಲ್ಲ ಸಾಕಷ್ಟು ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿರುತ್ತಾರೆ. ದೇಹ ತೂಕ ಹೆಚ್ಚಳ, ಕಡಿಮೆ ಮಾಡಿಕೊಂಡ ಸಾಕಷ್ಟು ಸೆಲೆಬ್ರಿಟಿಗಳು ಉದಾಹರಣೆ ರೀತಿ ಕಣ್ಣಿಗೆ ಕಾಣಿಸುತ್ತಾರೆ. ಇದೀಗ ನಟಿ ರೇಖಾ ಸಹ ಹತ್ತಾರು ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡಂತೆ ಕಾಣುತ್ತಿದೆ. ಅಷ್ಟಕ್ಕೂ, ರೇಖಾ ಅವಕಾಶಕ್ಕೋಸ್ಕರ ಸ್ಲಿಮ್ ಆದರಾ? ಇದರಿಂದ ಏನಾದರೂ ಸೈಡ್ ಎಫೆಕ್ಟ್ ಆಗಿದೆಯಾ? ಹೀಗಾಗಿಯೇ ನೋಡಲಿಕ್ಕೆ ಸಣ್ಣ ಕಾಣುತ್ತಿದ್ದಾರಾ ಅಥವಾ ಆರೋಗ್ಯದಲ್ಲಿ ಭಾರೀ ಸಮಸ್ಯೆಯುಂಟಾಗಿ ನರುಳುತ್ತಿದ್ದಾರಾ? ಈ ಪ್ರಶ್ನೆಗೆ ರೇಖಾ ಅವರೇ ಉತ್ತರ ಕೊಡಬೇಕು.
ಸದ್ಯ ಶ್ರೀದೇವಿ ಡ್ರಾಮಾ ಕಂಪೆನಿ’ ಶೋ ಪ್ರೋಮೊ ವೈರಲ್ ಆಗುತ್ತಿದ್ದು, ಕಾರ್ಯಕ್ರಮದ ತೀರ್ಪುಗಾರ್ತಿ ಇಂದ್ರಜ, ರೇಖಾರನ್ನು ನೋಡಿ ಏನಾಯ್ತು ಎಂದು ಕೇಳಿದ್ದಾರೆ. ನಿಮ್ಮನ್ನು ಹೀಗೆ ನೋಡಿ ಅಚ್ಚರಿಯಾಗುತ್ತಿದೆ ಎಂದಿದ್ದಾರೆ. ಅದಕ್ಕೆ ಸ್ಪಂದಿಸಿದ ರೇಖಾ, “ಸಡನ್ ಆಗಿ ಈ ರೀತಿ ಆಗಿಬಿಡ್ತು” ಎಂದಿದ್ದಾರೆ. ಆದರೆ ಏನಾಯ್ತು ,ನಟಿಗೆ ಆರೋಗ್ಯ ಸಮಸ್ಯೆಯಾ? ಇದ್ಯಾವುದು ಪ್ರೋಮೊದಲ್ಲಿ ರಿವೀಲ್ ಆಗಿಲ್ಲ. ಶೋ ಪ್ರಸಾರವಾದಾಗ ಅದಕ್ಕೆ ಉತ್ತರ ಸಿಗಲಿದೆ.
ಅಂದ್ಹಾಗೇ, ರೇಖಾ ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದವರು. `ಹುಚ್ಚ’ ‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ‘ಚೆಲ್ಲಾಟ’ ‘ಹುಡುಗಾಟ’ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ವುಡ್ನಲ್ಲಿ ಸೈ ಎನೆಸಿಕೊಂಡವರು. ಬಳಿಕ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಗೆದ್ದರು. ಹುಚ್ಚ ಸಿನಿಮಾದಲ್ಲಿ ಸುದೀಪ್ಗೆ ನಾಯಕಿಯಾಗಿ ನಟಿಸಿರುವ ರೇಖಾ, ಇಂದಿಗೂ ಫೇಮಸ್ಸು. 2014ರಲ್ಲಿ ಕೊನೆಯದಾಗಿ ‘ತುಳಸಿ’ ಕನ್ನಡ ಚಿತ್ರದಲ್ಲಿ ರೇಖಾ ಕಾಣಿಸಿಕೊಂಡಿದ್ದರು. ಮೂರು ವರ್ಷಗಳ ಹಿಂದೆಯಷ್ಟೆ ತೆಲುಗು ಸಂದರ್ಶನವೊಂದರಲ್ಲಿ ಭಾಗಿ ಆಗಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಬಗ್ಗೆ ವ್ಯಕ್ತಪಡಿಸಿದ್ದರು.





