ಅಂಬಾರಿ ಹಾಗೂ ದೇವರ ಹೆಸರಲ್ಲಿ ಪ್ರಮಾಣ ಈ ಎರಡು ಪದಗಳು ನಿಮಗೆ ಚಿರಪರಿಚಿತ. ಆದರೆ, ಈ ಮಾವಳ್ಳಿ ಕಾರ್ತಿಕ್ ಪರಿಚಯ ಎಲ್ಲರಿಗೂ ಆಗಿರಲ್ಲ. ಅಷ್ಟಕ್ಕೂ, ನಾವು ಇವತ್ತು ಈ ವ್ಯಕ್ತಿಯ ಬಗ್ಗೆ ಮಾತನಾಡಲಿಕ್ಕೆ ಕಾರಣ ಇದೆ. ಅದೇನು? ಎಂಥಾ ಎಲ್ಲವನ್ನು ಸವಿಸ್ತಾರವಾಗಿ ನಿಮ್ಮ ಮುಂದೆ ಹರವಿಡುತ್ತಾ? ಚಿತ್ರ ಜಗತ್ತಲ್ಲಿ ಒಂದೊಂದೆ ಮೆಟ್ಟಿಲೇರುತ್ತಾ ಶೈನ್ ಆಗುತ್ತಿರುವ ಸಿನಿಮಾ ವರದಿಗಾರ ಹಾಗೂ ನಿರೂಪಕ ಮಾವಳ್ಳಿ ಕಾರ್ತಿಕ್ರ ಯಶೋಗಾಥೆ ಪ್ಲಸ್ ಸಾಹಸಗಾಥೆನಾ ಬಿಚ್ಚಿಡಲಿದ್ದೇವೆ.

ಮಾಯಲೋಕ ಎಲ್ಲರನ್ನೂ ಕೈ ಬೀಸಿ ಕರೆಯೋದಿಲ್ಲ. ಮಾಯೆಯ ಸೆಳೆತಕ್ಕೆ ಸಿಲುಕಿದವರೆಲ್ಲರನ್ನೂ ಕೂಡ ಈ ಮಾಯಲೋಕದಲ್ಲಿ ಮಿಂಚು ಹರಿಸಿ ಮೇನಿಯಾ ಸೃಷ್ಟಿಸುವುದಕ್ಕೆ ಸಾಧ್ಯವಾಗಿಲ್ಲ. ಅದು ಎಷ್ಟೇ ದೊಡ್ಡವರಿರಲಿ, ಅದೆಷ್ಟೇ ದುಡ್ಡು ಇರುವವರಾಗಲಿ ಮಾಯಲೋಕ ಅಷ್ಟು ಬೇಗ ತಲೆಮೇಲೆ ಹೊತ್ತು ಮೆರೆಸಲ್ಲ. ಆದರೆ, ಬಣ್ಣದ ಜಗತ್ತಿನೆಡೆಗೆ ಆಕರ್ಷಣೆಗೊಂಡು ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡು ಬಂದ ಅದೆಷ್ಟೋ ಕಲಾವಿದರನ್ನು ಆ ಕಲಾಸರಸ್ವತಿ ಕೈ ಬಿಟ್ಟಿಲ್ಲ. ಗಾಡ್ ಫಾದರ್ ಇರಲಿ, ಇಲ್ಲದೇ ಇರಲಿ ಕಲೆಯೊಂದನ್ನೇ ಅಸ್ತ್ರವನ್ನಾಗಿಸಿಕೊಂಡು ಅಖಾಡಕ್ಕಿಳಿದವರನ್ನು ಆ ತಾಯಿ ಕೈ ಹಿಡಿದು ನಡೆಸುತ್ತಿದ್ದಾಳೆ ಇದಕ್ಕೆ ಮಾವಳ್ಳಿ ಕಾರ್ತಿಕ್ ಕೂಡ ಹೊರತಾಗಿಲ್ಲ ಎಂಬುದೇ ವಿಶೇಷ
ಮಾವಳ್ಳಿ ಕಾರ್ತಿಕ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯವರು. ಆದರೆ, ಹುಟ್ಟಿ ಬೆಳೆದಿದ್ದೆಲ್ಲ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಸಸ್ಯಕಾಶಿ ಲಾಲ್ ಭಾಗ್ ಪಕ್ಕದಲ್ಲಿರುವ ಮಾವಳ್ಳಿಯಲ್ಲಿ ನೆಲೆಸಿರುವ ಕಾರ್ತಿಕ್ ಮಾವಳ್ಳಿ ಕಾರ್ತಿಕ್ ಅಂತಲೇ ಹೆಸರುವಾಸಿ. ಮಾಧ್ಯಮ ಲೋಕದಲ್ಲಿ ಸಿನಿಮಾ ವರದಿಗಾರನಾಗಿ, ನಿರೂಪಕನಾಗಿ ಜನಪ್ರಿಯಗೊಂಡಿರುವ ಇವರು, ಬಣ್ಣದ ಲೋಕದಲ್ಲಿ ತಮ್ಮದೊಂದು ಛಾಪು ಮೂಡಿಸುವತ್ತ ಹೆಜ್ಜೆ ಹಾಕ್ತಿದ್ದಾರೆ. ಸದ್ಯ `ದೇವರ ಹೆಸರಲ್ಲಿ ಪ್ರಮಾಣ’ ಮಾಡುವ ಮೂಲಕ ಸುದ್ದಿಮನೆಗೆ ಎಂಟ್ರಿಕೊಟ್ಟಿರುವ ಮಾವಳ್ಳಿ ಕಾರ್ತಿಕ್, ಹೀರೋಗಳಿಗೆ ಮೈಕ್ ಹಿಡಿಯುತ್ತಲೇ ಹೀರೋ ಆಗಲು ಕನಸು ಕಂಡಿರುವ ಎಷ್ಟೋ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದ್ದಾರೆ.

ದಿನ ಬೆಳಗಾದರೆ ಹೀರೋಗಳಿಗೆ ಮೈಕ್ ಹಿಡಿದು ಪ್ರಶ್ನಿಸುವ ಮತ್ತು ಸಂದರ್ಶಿಸುವ ಕೆಲ ವರದಿಗಾರರಿಗೆ ತಾನು ಹೀರೋ ಆಗಬೇಕು, ಮುಂದೊಂದು ದಿನ ನನ್ನ ಸಹದ್ಯೋಗಿಗಳು ಹೀಗೆಯೇ ಮೈಕ್ ಹಿಡಿದು ನನ್ನನ್ನು ಸಂದರ್ಶನ ಮಾಡಬೇಕು ಎನ್ನುವ ಕನಸು ಹುಟ್ಟಿಕೊಂಡಿರುತ್ತೆ. ಆ ಕನಸಿನ ಬೆನ್ನೇರಿ ಹೊರಟ ಕೆಲ ಸಿನಿಮಾ ವರದಿಗಾರರು ಥಿಯೇಟರ್ ಮುಂದೆ ಕಟೌಟ್ ಹಾಕಿಸಿಕೊಂಡಿದ್ದಾರೆ. ನಾಯಕನಾಗಿ ಬೆಳ್ಳಿಭೂಮಿ ಮೇಲೆ ದಿಬ್ಬಣ ಹೊರಟು ಪ್ರೇಕ್ಷಕ ಮಹಾಷಯರಿಂದ ಜೈಕಾರನೂ ಹಾಕಿಸಿಕೊಂಡಿದ್ದಾರೆ. ಸದ್ಯ ಆ ದಿಸೆಯಲ್ಲಿ ಸಾಗುತ್ತಿರುವ ಸಿನಿಮಾ ವರದಿಗಾರ ಕಂ ನಿರೂಪಕ ಕಾರ್ತಿಕ್ಗೆ, `ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ನಿರ್ದೇಶಕ ಗುರುಪ್ರಸಾದ್ ಚಂದ್ರಶೇಖರ್ ಹೊಸೆದಿರೋ ಈ ಪಾತ್ರ ಕಾರ್ತಿಕ್ ಕರಿಯರ್ಗೆ ಪ್ಲಸ್ ಆಗುತ್ತೆನ್ನುವ ನಿರೀಕ್ಷೆ ಹೆಚ್ಚಿದೆ

ಅಷ್ಟಕ್ಕೂ, ಕಲಾವಿದ ಕಾರ್ತಿಕ್ಗೆ ಇದೇನು ಡೆಬ್ಯೂ ಚಿತ್ರವಲ್ಲ. ಈಗಾಗಲೇ ಅವರು ಮೂಕವಿಸ್ಮಿತ, ಕಿನಾರೆ, ಧಮಾಕ, ತೂತು ಮಡಿಕೆ, ದಿ. ಮಂಜುನಾಥನ ಗೆಳೆಯರು, ಗಜಾನನ ಗ್ಯಾಂಗ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಪಾತ್ರದಿಂದಲೇ ಗುರ್ತಿಸಿಕೊಂಡು ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ರಂಗಭೂಮಿಯ ಪ್ರತಿಭೆ ಆಗಿರುವುದರಿಂದ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಗೆಲ್ಲುವ ತಾಕತ್ತು ಕಾರ್ತಿಕ್ ಅವರಲ್ಲಿದೆ. ಈಗಲೂ ಅವರ ಕೈಯಲ್ಲಿ ಒಂದಿಷ್ಟು ಸಿನಿಮಾಗಳಿದ್ದು ಬಿಡುಗಡೆಗೆ ಸಜ್ಜಾಗ್ತಿವೆ. ಆ ಬೆನ್ನಲ್ಲೇ `ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಎನ್ನುವ ಸಿನಿಮಾ ಸಿಕ್ಕಿದ್ದು ದಿಲ್ ಖುಷ್ ಆಗಿದ್ದಾರೆ.
ಒಟ್ನಲ್ಲಿ ನಟನಾಗುವ ಕನಸು ಕಂಡು ಶಾಲಾ ಕಾಲೇಜು ದಿನಗಳಲ್ಲೇ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದ ಕಾರ್ತಿಕ್, ಹವ್ಯಾಸಿ ರಂಗಭೂಮಿಯಲ್ಲಿ ಪಳಗಿದ್ದರು. ಸಮುದಾಯ, ರಂಗ ನಿರಂತರ, ಪ್ರಸಂಗ, ಕಲಾವೇದಿಕೆ, ಬಿಟಿಇ ಸೇರಿದಂತೆ ಹಲವು ತಂಡಗಳಲ್ಲಿ ಭಾಗಿಯಾಗಿ ಅಭಿನಯ ಮೈಗೂಡಿಸಿಕೊಂಡರು. ಕಲಾಸರಸ್ವತಿಯ ಆಶೀರ್ವಾದದಿಂದ `ಅಂಬಾರಿ’ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದರು. ಅಲ್ಲಿಂದ ಒಂದಿಷ್ಟು ಸೀರಿಯಲ್, ಸಿನಿಮಾಗಳಿಗೆ ಬಣ್ಣ ಹಚ್ಚುವ ಅವಕಾಶ ಸಿಗ್ತು. ಮಾಧ್ಯಮ ಲೋಕದಲ್ಲಿ ಸಿನಿಮಾ ವರದಿಗಾರಿಕೆ, ನಿರೂಪಣೆಯ ಜವಾಬ್ದಾರಿ ಹೆಗಲೇರಿತು. ಈಗ ಈ ಮೂರನ್ನು ಸಂಬಾಳಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಮಾಯಲೋಕದಲ್ಲಿ ತನ್ನ ಮೇನಿಯಾ ಸೃಷ್ಟಿ ಮಾಡುವ ಕನಸೊತ್ತಿದ್ದಾರೆ. ಅವರ ಕನಸು ಈಡೇರಲಿ. ಕರುನಾಡು ಮಾತ್ರವಲ್ಲ ಇಡೀ ಜಗತ್ತು ಕಲಾವಿದ ಕಾರ್ತಿಕ್ನ ಅಪ್ಪಿ ಒಪ್ಪಿಕೊಳ್ಳಲಿ ಎಂಬುದೇ ಮಜ್ಜಾ ಕನ್ನಡದ ಆಶಯ





