ಮಿಲಿಯನ್ ಡಾಲರ್ ಸ್ವರೂಪ ಪಡೆದಿದ್ದ ಪ್ರಶ್ನೆಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕೊನೆಗೂ ಉತ್ತರಿಸಿದ್ದಾರೆ. ನಟ ಕಂ ನಿರ್ದೇಶಕ ರಾಜ್ ಬಿ ಶೆಟ್ಟಿಯವರಿಗೆ ಜೋಡಿಯಾಗಲಿಲ್ಲವೇಕೆ? `ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾಗೆ ನಾಯಕಿಯಾಗಲಿಲ್ಲವೇಕೆ? ಎಂಬುದಕ್ಕೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ದುನಿಯಾದಲ್ಲಿ ಸುಂಟರಗಾಳಿ ಎಬ್ಬಿಸಿರೋ ಹಲವು ರೂಮರ್ಸ್ಗೆ ಗೌರಮ್ಮ ಬಿಗ್ ಬ್ರೇಕ್ ಹಾಕಿದ್ದಾರೆ. ಅಂತೆಕಂತೆ ಸುದ್ದಿಗೆ ಪದ್ಮಾವತಿ ಅಂತ್ಯ ಹಾಡಿದ್ದಾರೆ. ಹಾಗಾದ್ರೆ ದಿಲ್ಲಿ ಮೇಡಂ ಸೋಷಿಯಲ್ ಮೀಡಿಯಾ ಮೂಲಕ ಕೊಟ್ಟ ಸ್ಪಷ್ಟೀಕರಣ ಏನು ಇಲ್ಲಿದೆ ಓದಿ.

ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವು ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ವಿಶೇಷವೆಂದರೆ, ಇದು ನಟಿ ರಮ್ಯಾ ನಿರ್ಮಾಣದ ಮೊದಲ ಸಿನಿಮಾ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ನಾಯಕಿಯಾಗಿ ರಮ್ಯಾ ಅವರೇ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗದೆ, ಕೊನೆಗೆ ಆ ಜಾಗಕ್ಕೆ ನಟಿ ಸಿರಿ ರವಿಕುಮಾರ್ ಆಗಮಿಸಿದರು. ಇದೀಗ ಚಿತ್ರ ತೆರೆಗೆ ಬರುವ ಹೊತ್ತಿನಲ್ಲಿ, ತಾನೇಕೆ ಈ ಸಿನಿಮಾದಲ್ಲಿ ನಟಿಸಲಿಲ್ಲ ಎಂಬ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಬಗ್ಗೆ ವಿವರಿಸುತ್ತಾ, “ದೀಪಾವಳಿ ಹಬ್ಬದ ಶುಭಾಶಯಗಳು.. ಹಳೆಯದನ್ನು ಮರೆತು ಹೊಸತಿನೆಡೆಗಿನ ಪಯಣ.. ‘ಸ್ವಾತಿ ಮುತ್ತಿನ ಮಳೆ ಹನಿಯೇ’- ಇದು ನನಗೆ ಬಹಳ ವಿಶೇಷವಾದ ಚಿತ್ರ. ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ ಎಂದಷ್ಟೇ ಅಲ್ಲ, ಬದಲಿಗೆ ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ವಿಷಯಾಧರಿತ ಚಿತ್ರ. ಪ್ರೀತಿಸಿದವರ ಅಗಲಿಕೆಯ ನೋವು, ಅದರಿಂದ ಹೊರ ಬರಲು ಅಸಾಧ್ಯವೆಂದು ತಿಳಿದಿದ್ದರೂ, ನಾವು ಮಾಡುವ ಪ್ರಯತ್ನ. ಈ ಅನುಭವವು ನಮ್ಮನ್ನು ಹೆಚ್ಚು ಪಕ್ಷಗೊಳಿಸುತ್ತದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವು ಈ ಪ್ರಕ್ರಿಯೆಯನ್ನು ಮನಸ್ಸಿಗೆ ನಾಟುವಂತೆ ಸೆರೆಹಿಡಿದಿದೆ” ಎಂದು ರಮ್ಯಾ ಬರೆದುಕೊಂಡಿದ್ದಾರೆ. “ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದದ್ದು ಏಕೆಂದರೆ, ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದೆಂದು ನಿರ್ಧರಿಸಿದ್ದೆವು. ನನ್ನ ಕಂಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗಬೇಕೆಂದು ನಾನು ಬಯಸಿದ್ದೆ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ ಓಟಿಟಿ ವೇದಿಕೆಯು ನಂತರ ಹಿಂದೆ ಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ” ಎಂದು ರಮ್ಯಾ ಹೇಳಿದ್ದಾರೆ.
“ಸಿನಿಮಾದಲ್ಲಿನ ಸಿರಿಯ ನಟನೆ ಅದ್ಭುತ. ರಾಜ್ ತಾವು ಒಬ್ಬ ಪ್ರತಿಭಾನ್ವಿತ ನಟರೆಂದು ನಿರೂಪಿಸಿದ್ದಾರೆ. ಕಥೆಯನ್ನು ಅವರು ವಿವರಿಸಿದಾಗ, ಕಥೆಯ ಬಗೆಗಿನ ವಿವರಣೆ ನನ್ನನ್ನು ಭಾವುಕಳನ್ನಾಗಿಸಿತು. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಧುನ್ ಮುಕುಂದನ್ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿ ಮೂಡಿಬಂದಿದ್ದು, ‘ಪ್ರೇರಣಾ ಥೀಮ್..’ ನನ್ನ ನೆಚ್ಚಿನ ಹಾಡಾಗಿದೆ. ನೀವೆಲ್ಲರೂ ಈ ಹಾಡು ಕೇಳಬೇಕೆಂಬ ಕಾತುರ ನನಗಿದೆ. ಈ ಚಿತ್ರದ ತಿರುಳು ನಿಮ್ಮ ಮನದಲ್ಲಿ ಬಹಳ ಸಮಯ ಉಳಿಯುತ್ತದೆ ಎಂಬುದು ನನ್ನ ಆಶಯ, ಇಡೀ ಚಿತ್ರತಂಡಕ್ಕೆ, ವಿಶೇಷವಾಗಿ ಸುನಯನಾ, ಕೆವಿನ್, ಕಾರ್ತಿಕ್ ಮತ್ತು ಯೋಗಿ ಇವರಿಗೆ ನನ್ನ ಮನಃಪೂರ್ವಕ ಧನ್ಯವಾದಗಳು” ಎಂದು ಈ ನಟಿ ತಿಳಿದ್ದಾರೆ. ನಟಿ ರಮ್ಯಾ ಕೊನೆಯದಾಗಿ “ನಿಮ್ಮನ್ನು ಸೇರಲು ಹಲವು ಮಾರ್ಗಗಳನ್ನು ನಾವು ಹುಡುಕುತ್ತೇವೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವು ಇದೇ ನವೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಿನಿಮಾವನ್ನು ವೀಕ್ಷಿಸಿ. ಪ್ರೀತಿಯ ಸ್ವಾದವನ್ನು ಸವಿಯಿರಿ..’ ಎಂದು ಹೇಳುತ್ತ ಮತ್ತೊಮ್ಮೆ ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ






