`ಘೋಸ್ಟ್’…. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಮೋಸ್ಟ್ ಅವೈಟೆಡ್ ಮೂವೀ. ಇನ್ನೇನು ಎರಡೇ ಎರಡು ದಿನದಲ್ಲಿ `ಘೋಸ್ಟ್’ ಕಣಕ್ಕಿಳಿಯಲಿದ್ದು, ವಿಶ್ವದಾದ್ಯಂತ `ಘೋಸ್ಟ್’ ಘರ್ಜನೆ ಶುರುವಾಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಪ್ರೇಮಿಗಳೆಲ್ಲರೂ ಕೂಡ, ಮಾಸ್ ಗೆ ಬಾಸ್ ಆಗಿರುವ ಬಿಗ್ಡ್ಯಾಡಿನಾ ಸ್ವಾಗತಿಸಿಕೊಳ್ಳೋದಕ್ಕೆ ರೆಡಿಯಾಗಿದ್ದಾರೆ. ಹೀಗಿರುವಾಗಲೇ ಅದೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ, ಟಾಲಿವುಡ್ ಅಂಗಳದಲ್ಲಿ `ಘೋಸ್ಟ್’ ದರ್ಬಾರ್ ಗೆ ಬಿಗ್ ಬ್ರೇಕ್ ಹಾಕಿರುವ ಬಡಾಖಬರ್ ರಿವೀಲ್ ಆಗಿದೆ.
ನಿಮ್ಮೆಲ್ಲರಿಗೂ ಗೊತ್ತಿರುವಂತೆ ಕನ್ನಡದ `ಘೋಸ್ಟ್’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಸಿನಿಮಾ. ನಿರ್ದೇಶಕ ಶ್ರೀನಿ ಹಾಗೂ ನಿರ್ಮಾಪಕರಾದ ಸಂದೇಶ್ ಪ್ರೊಡಕ್ಷನ್ ಹೌಸ್ನವರು ಅದ್ದೂರಿಯಾಗಿ ಐದು ಭಾಷೆಯಲ್ಲಿ ಸಿನಿಮಾ ನಿರ್ಮಿಸಿದ್ದಾರೆ. ಕಳೆದ 37 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಚಕ್ರವರ್ತಿಯಾಗಿ ಮೆರೆಯುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಗೆ ಪ್ಯಾನ್ ಇಂಡಿಯಾ ಹೀರೋ ಪಟ್ಟಕ್ಕೇರಿಸಿದ್ದಾರೆ. ಆಗಿದ್ದಾಗ್ಲೀ ಘೋಸ್ಟ್ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಿಂದಿಯಲ್ಲಿ ಒಂದೇ ದಿನ ರಿಲೀಸ್ ಆಗ್ಬೇಕು ಅಂತ ಪ್ಲ್ಯಾನ್ ಮಾಡಿದ್ದಾರೆ. ಅದರಂತೇ, ಪರಭಾಷಾ ಅಂಗಳದಲ್ಲೂ ಚಿತ್ರದ ಭರ್ಜರಿ ಪ್ರಚಾರಕ್ಕೆ ತಯ್ಯಾರಿಯೂ ನಡೆಸಿದ್ದಾರೆ. ಹೀಗಿರುವಾಗಲೇ ಟಾಲಿವುಡ್ ಅಂಗಳದಲ್ಲಿ `ಘೋಸ್ಟ್’ ಘರ್ಜನೆಗೆ ಅಡ್ಡಗಾಲು ಹಾಕುವ ಕೆಲಸ ಆಗಿದೆ. ಟಿಟೌನ್ ಅಖಾಡದಲ್ಲಿ ಕನ್ನಡದ `ಘೋಸ್ಟ್’ ಸಿನಿಮಾವನ್ನ ಮುಂದೂಡುವ ರಣತಂತ್ರವೂ ಸಫಲವಾಗಿದೆ.
ಅಷ್ಟಕ್ಕೂ ಟಾಲಿವುಡ್ ಅಖಾಡದಲ್ಲಿ ನಡೆದಿರುವ ಈ ತಂತ್ರವನ್ನ ಕುತಂತ್ರ ಎನ್ನಬೇಕಾ ಅಥವಾ ಅವರ ಭಾಷೆಯ ಸಿನಿಮಾಗಳ ಮೇಲಿರುವ ಪ್ರೀತಿ ಗೌರವ ಎನ್ನಬೇಕಾ ಗೊತ್ತಿಲ್ಲ. ಆದರೆ, ಟಾಲಿವುಡ್ ನ ನಟಸಿಂಹ ಬಾಲಯ್ಯ ಅಭಿನಯದ ಬಹುನಿರೀಕ್ಷಿತ `ಭಗವಂತ್ ಕೇಸರಿ’ ಹಾಗೂ ಮಾಸ್ ಮಹರಾಜ ರವಿತೇಜಾ ನಟನೆಯ `ಟೈಗರ್ ನಾಗೇಶ್ವರ್ ರಾವ್’ ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗ್ತಿವೆ. ಹೀಗಾಗಿ, ಥಿಯೇಟರ್ ಸಮಸ್ಯೆಯಾಗ್ತಿದ್ದು `ಘೋಸ್ಟ್’ ಸಿನಿಮಾವನ್ನು ಮುಂದೂಡಿಕೊಳ್ಳುವ ಬಗ್ಗೆ ಅಲ್ಲಿನ ವಿತರಕರು ತಿಳಿಸಿದ್ದಾರಂತೆ. ಹೀಗಾಗಿ, `ಘೋಸ್ಟ್’ ಸಿನಿಮಾ ತಂಡ ತಮ್ಮ ಚಿತ್ರವನ್ನ ಪೋಸ್ಟ್ ಪೋನ್ ಮಾಡಿದೆ. ಅಕ್ಟೋಬರ್ 19ರಂದು ತೆಲುಗು ಅಂಗಳದಲ್ಲಿ ಬಿಡುಗಡೆಯಾಗ್ಬೇಕಿದ್ದ `ಘೋಸ್ಟ್’ ಒಂದು ವಾರ ಮುಂದಕ್ಕೆ ಹೋಗಿದೆ. ಫೈನಲೀ ತೆಲುಗು ಅಖಾಡದಲ್ಲಿ ಕನ್ನಡ ಚಿತ್ರವನ್ನು ಕಡೆಗಣಿಸುವಂತಹ ಕೆಲಸವಂತೂ ಆಗಿದೆ.
ಅಚ್ಚರಿ ಅಂದರೆ ನಮ್ಮ ಕರ್ನಾಟಕದಲ್ಲಿ ನಮ್ಮ ಭಾಷೆಯ ಹೈವೋಲ್ಟೇಜ್ `ಘೋಸ್ಟ್’ ಬಿಡುಗಡೆಯಾಗ್ತಿದ್ರೂ ಕೂಡ ಪರಭಾಷಾ ಸಿನಿಮಾಗಳಿಗೂ ಥಿಯೇಟರ್ ಬಿಟ್ಟುಕೊಡ್ತಿದ್ದಾರೆ. ನಮ್ಮ ಸಿನಿಮಾಗಿಂತ ಪರಭಾಷಾ ಸಿನಿಮಾಗಳ ಸ್ಕ್ರೀನಿಂಗ್ ಹೆಚ್ಚು ಅವಕಾಶ ನೀಡಲಾಗ್ತಿದೆ. ಹೀಗಿರುವಾಗ ಅವರು ಮಾತ್ರ ಥಿಯೇಟರ್ ಪ್ರಾಬ್ಲಂ ನೆಪ ಹೇಳಿ ನುಣುಚಿಕೊಂಡಿದ್ದಾರೆ. ಇದರ ಹಿಂದೆ ಅಡಗಿರುವ ಅಸಲಿ ಸತ್ಯ ಮಾಸ್ ಲೀಡರ್ ಶಿವಣ್ಣನ ಹವಾ ಎನ್ನಬಹುದು. ಜೈಲರ್ ಸಿನಿಮಾ ನಂತರ ತೆಲುಗು ಚಿತ್ರರಂಗದಲ್ಲಿ ಸಿಂಹದ ಮರಿ ಸೈನ್ಯ ಹುಟ್ಟಿಕೊಂಡಿದೆ. ಸೆಂಚುರಿ ಸ್ಟಾರ್ ಸ್ವ್ಯಾಗ್ಗೆ ಕಳೆದುಹೋಗಿರುವ ಟಾಲಿವುಡ್ ಪ್ರೇಕ್ಷಕರು `ಘೋಸ್ಟ್’ ಕಣ್ತುಂಬಿಕೊಳ್ಳೋದಕ್ಕೆ ಕಾತುರರಾಗಿದ್ದಾರೆ. ಬಹುಷಃ ಈ ಕ್ರೇಜ್ ನೋಡಿ ನಮ್ಮ ಸಿನಿಮಾಗೆ ಹೊಡೆತ ಬೀಳಬಹುದೆನ್ನುವ ಕಾರಣಕ್ಕೆ `ಘೋಸ್ಟ್’ ನ ಪೋಸ್ಟ್ ಪೋನ್ ಮಾಡಿಸುವ ಕೆಲಸ ಆಗಿರಬಹುದು ? ಅನ್ನೋದು ಚಾಯ್ಪೇ ಚರ್ಚೆಯಲ್ಲಿರುವ ಸಂಗತಿ.

ಅದೇನೇ ಇರಲಿ ಟಗರು ಶಿವನ ಆರ್ಭಟವನ್ನ ಯಾರ್ ಕೈಲೂ ತಡೆಯೋಕೆ ಆಗಲ್ಲ. ಯಾಕಂದ್ರೆ, ಬೇರೆಯವರೆಲ್ಲಾ ಗನ್ ಇಡ್ಕೊಂಡು ಹೆದರಿಸಿದ್ರೆ, ಶಿವಣ್ಣ ಬರೀ ಕಣ್ಣಲ್ಲೇ ಹೆದರಿಸ್ತಾರೆ. ರೀಸೆಂಟಾಗಿ ಜೈಲರ್ನಲ್ಲಿ ಮತ್ತೊಮ್ಮೆ ಪ್ರೂವ್ ಮಾಡಿರುವ ಮಾಸ್ ಲೀಡರ್ ಶಿವಣ್ಣ ಈಗ ಮಾಸ್ಗೆ ಬಾಸ್ ಆಗಿ ನಯಾ ಖದರ್ ತೋರಿಸಲು ಹೊರಟಿದ್ದಾರೆ. ಟೀಸರ್, ಟ್ರೇಲರ್ ಝಲಕ್ನಲ್ಲೇ ಪ್ಯಾನ್ ಇಂಡಿಯಾವನ್ನು ಕಬ್ಜ ಮಾಡಿಕೊಳ್ಳುವ ಸೂಚನೆ ಕೊಟ್ಟು ಎದುರಾಳಿ ಸಿನಿಮಾ ಪಡೆಗಳ ಎದೆ ನಡುಗಿಸಿದ್ದಾರೆ. ಏಜ್ ಈಸ್ ಜಸ್ಟ್ ಎ ನಂಬರ್ ಅನ್ನೋದನ್ನ ಸಿನಿಮಾದಿಂದ ಸಿನಿಮಾಗೆ ಪ್ರೂವ್ ಮಾಡಿಕೊಂಡು ಬರುತ್ತಿರುವ ಶಿವರಾಜ್ಕುಮಾರ್ `ಘೋಸ್ಟ್’ ಸಿನಿಮಾದಲ್ಲಿ ಭರ್ಜರಿಯಾಗೇ ಕಾದಾಡಿದ್ದಾರೆ. ಹೈವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್ ಗೆ ಕಿಚ್ಚು ಹಚ್ಚಿರೋ ಕರುನಾಡ ಚಕ್ರವರ್ತಿ, ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನ ಆ್ಯಕ್ಷನ್ ಥ್ರಿಲ್ಲರ್ ರೈಡ್ ಕರೆದುಕೊಂಡು ಹೋಗಲು ರೆಡಿಯಾಗಿದ್ದಾರೆ.
ಇಂಟ್ರೆಸ್ಟಿಂಗ್ ಅಂದರೆ ಶಿವಣ್ಣ ಡಿಫರೆಂಟ್ ಶೇಡ್ಗಳಲ್ಲಿ ಕಾಣಿಸಿಗ್ತಾರೆ. ಕ್ಲಾಸ್, ಮಾಸ್ ಹಾಗೂ ವಿಂಟೇಜ್ ಲುಕ್ನಲ್ಲಿ ಕಿಕ್ಕೇರಿಸಲು ಬರುತ್ತಿದ್ದಾರೆ. ನಿರ್ದೇಶಕ ಎಂ.ಜಿ ಶ್ರೀನಿವಾಸ್ ಹೊಸ ಟೆಕ್ನಾಲಜಿನಾ ಬಳಸಿಕೊಂಡು ಹ್ಯಾಟ್ರಿಕ್ ಹೀರೋ ಶಿವಣ್ಣ ವಿಭಿನ್ನವಾಗಿ ತೋರಿಸಲು ಹೊರಟಿದ್ದಾರೆ. ಗ್ಯಾಂಗ್ಸ್ಟರ್ ಬ್ಯಾಕ್ಡ್ರಾಪ್ನಲ್ಲಿ ಒಂದು ಮಾಸ್ ಸಿನಿಮಾ ಕಟ್ಟಿಕೊಟ್ಟಿರುವ ಶ್ರೀನಿಯವರು, ಬೀರ್ ಬಲ್ ಸಿನಿಮಾದ ಮಹೇಶ್ ದಾಸ್ ಪಾತ್ರವನ್ನ ಘೋಸ್ಟ್ ನಲ್ಲಿ ತರುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದಾರೆ. ಸಿನಿಮ್ಯಾಟಿಕ್ ಯೂನಿವರ್ಸ್ ಟಚ್ ಕೊಟ್ಟಿರುವ ಮೊದಲ ಕನ್ನಡ ಸಿನಿಮಾ ಇದಾಗಿದ್ದು ನಯಾ ಚರಿತ್ರೆಗೆ ಘೋಸ್ಟ್ ಡೈರೆಕ್ಟರ್ ಅಡಿಪಾಯ ಹಾಕಿದ್ದಾರೆ. ಅರ್ಜುನ್ ಜನಾ ಮ್ಯೂಸಿಕ್ `ಘೋಸ್ಟ್’ಗೆ ಬಲತುಂಬುತ್ತಿದ್ದು, ಮಹೇಂದ್ರ ಸಿಂಹ ಕೈಚಳಕ ಎದ್ದುಕಾಣುತ್ತಿದೆ.

ಜಗತ್ತು ಒಮ್ಮೆ ಹಿಂತಿರುಗಿ ನೋಡ್ಬೇಕು, ಹಂಗೇನಾದರೂ ನಾನು ಸಾಧನೆ ಮಾಡ್ಬೇಕು ಅಂತ ಹಠಕ್ಕೆ ಬಿದ್ದಿರುವ ಡೈರೆಕ್ಟರ್ ಶ್ರೀನಿ, `ಘೋಸ್ಟ್’ ಮೂಲಕ ಪ್ಯಾನ್ ಇಂಡಿಯಾ ರೀಚ್ ಆಗುವ ಭರವಸೆ ಇಟ್ಟುಕೊಂಡಿದ್ದಾರೆ. ಬಾಲಿವುಡ್ನಿಂದ ಅನುಪಮ್ ಖೇರ್, ಮಾಲಿವುಡ್ನಿಂದ ಜಯರಾಮ್ `ಘೋಸ್ಟ್’ ತಂಡ ಸೇರಿಕೊಂಡು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಅರ್ಚನ ಜೋಯಿಸ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದು, ನಿರ್ದೇಶಕ ಶ್ರೀನಿವಾಸ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವ್ರು ಬಹುಕೋಟಿ ಬಂಡವಾಳ ಸುರಿದು ಈ ಚಿತ್ರ ನಿರ್ಮಿಸಿದ್ದಾರೆ. ಗ್ಲೋಬಲ್ ಲೆವೆಲ್ನಲ್ಲಿ ಘೋಸ್ಟ್ ನ ರೀಚ್ ಮಾಡಿಸಬೇಕು ಅಂತ ಪ್ಲ್ಯಾನ್ ಮಾಡಿರೋ ಚಿತ್ರತಂಡ ದಸರಾ ಹಬ್ಬಕ್ಕೆ ಸ್ಪೆಷಲ್ಲಾಗಿ ಸಿನಿಮಾ ತೆರೆಗೆ ತರುತ್ತಿದೆ. ಅಕ್ಟೋಬರ್ 19ರಂದು ತಮಿಳು, ಮಲೆಯಾಳಂ, ಹಿಂದಿಯಲ್ಲಿ ಘೋಸ್ಟ್ ಗ್ರ್ಯಾಂಡ್ ಎಂಟ್ರಿಯಾಗ್ತಿದೆ. ಅಕ್ಕ-ಪಕ್ಕದ ರಾಜ್ಯ ಮಾತ್ರವಲ್ಲದೇ ಯುಎಸ್, ಯುಕೆ, ಕೆನಡಾ, ಯುರೋಪ್ನಂತಹ ದೇಶಗಳಲ್ಲೂ `ಘೋಸ್ಟ್’ ಧಗಧಗಿಸಲಿದೆ. ಈಗಾಗಲೇ ಬುಕ್ಕಿಂಗ್ ಶುರುವಾಗಿದ್ದು, ಟಿಕೆಟ್ ಸೋಲ್ಡ್ಔಟ್ ಆಗ್ತಿವೆ. ಬೆಂಗಳೂರಿನಲ್ಲಿ ಅಕ್ಟೋಬರ್ 18ರ ಮಧ್ಯರಾತ್ರಿಯಿಂದಲೇ ಫ್ಯಾನ್ಸ್ ಶೋ ಶುರುವಾಗ್ತಿದೆ.





