ಟಾಲಿವುಡ್ನ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಹಾಗೂ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಸೈಮಾ ಕಾರ್ಯಕ್ರಮಕ್ಕಾಗಿ ಇಬ್ಬರು ದುಬೈಗೆ ತೆರಳಿದ್ದು, ಪ್ರಶಸ್ತಿ ಪ್ರದಾನ ವೇಳೆ ರಿಷಬ್ರನ್ನು ನೋಡಿ ತಾರಕ್ ಮಾತನಾಡಿಸಿದ್ದಾರೆ. ಹೇಗಿದ್ದೀರಾ ರಿಷಬ್ ಅಂತ ಕನ್ನಡದಲ್ಲೇ ಮಾತು ಶುರು ಮಾಡಿದ ಜೂನಿಯರ್ ಎನ್ಟಿಆರ್, `ಕಾಂತಾರ’ ಚಿತ್ರಕ್ಕಾಗಿ ಬೆಸ್ಟ್ ಡೈರೆಕ್ಟರ್ ಅಂಡ್ ಬೆಸ್ಟ್ ಆ್ಯಕ್ಟರ್ ಕ್ರಿಟಿಕ್ಸ್ ಪ್ರಶಸ್ತಿ ಪಡೆದ ರಿಷಬ್ಗೆ ಶುಭಕೋರಿದರು. ಈ ವೇಳೆ ನಿರೂಪಕ ಅಕುಲ್ ಬಾಲಾಜಿ ಎಂಟ್ರಿಯಾಗಿ `ಏನ್ ಸರ್ ಇಷ್ಟು ಚೆಂದ ಕನ್ನಡ ಮಾತನಾಡ್ತೀರಾ, ಕುಂದಾಪುರದಲ್ಲೂ ಹಿಂಗೆ ಮಾತನಾಡ್ತಾರೆ ಅಂತಾರೆ. ಆಗ ತಾರಕ್ ನಾನು ನಮ್ಮ ಅಮ್ಮ ಜೊತೆನೂ ಹಿಂಗೆ ಮಾತನಾಡ್ತೀನಿ ಅಂತೇಳಿದರು. ಇಲ್ಲಿಗೆ ಸುಮ್ಮನಾಗದ ಅಕುಲ್ ಬಾಲಾಜಿ, ಏನೇ ಹೇಳಿ ಸರ್ ನಿಮ್ಮ ಬಾಯಲ್ಲಿ ಕನ್ನಡ ಕೇಳೋದೇ ಒಂದು ಅದ್ಭುತ ಅಂತಾರೇ. ಇದಕ್ಕೆ ಮತ್ತೆ ರಿಯಾಕ್ಟ್ ಮಾಡಿದ ಯಂಗ್ ಟೈಗರ್, ರಿಷಬ್ ಮುಂದೆ ನಮ್ಮ ಕನ್ನಡ ಏನೇನು ಇಲ್ಲ ಬಿಡಿ ಎಂದೇಳಿ ಡಿವೈನ್ಸ್ಟಾರ್ ಕನ್ನಡ ಭಾಷಾ ಪ್ರಯೋಗವನ್ನು ಕೊಂಡಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಟಾಲಿವುಡ್ ಸೂಪರ್ ಸ್ಟಾರ್ ಕನ್ನಡ ಪ್ರೇಮಕ್ಕೆ, ಭಾಷಾಭಿಮಾನಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ.
#RishabShetty & #JrNTR Conversation at #SIIMA2023 #SIIMAAwards2023 #Kannada pic.twitter.com/yacCQ625iW
— Filmy Corner ꭗ (@filmycorner9) September 16, 2023
ಜೂನಿಯರ್ ಎನ್ಟಿಆರ್ ಮೂಲತಃ ತೆಲುಗಿನವರು. ಹುಟ್ಟಿ, ಬೆಳೆದಿದ್ದು ಎಲ್ಲಾ ಆಂಧ್ರಪ್ರದೇಶದಲ್ಲಿ ಈಗ ನೆಲೆಸಿರುವುದು ಕೂಡ ತೆಲಂಗಾಣದಲ್ಲಿ. ಆದರೆ, ತಾರಕ್ ಅವರ ತಾಯಿಯ ಮೂಲ ಕುಂದಾಪುರ. ಹೀಗಾಗಿ, ಯಂಗ್ ಟೈಗರ್ ಗೆ ಕರ್ನಾಟಕದ ಜೊತೆ ಕನೆಕ್ಷನ್ ಇದೆ. ಮನೆಯಲ್ಲಿ ತಾಯಿ ಜೊತೆ ಕನ್ನಡದಲ್ಲೇ ಮಾತನಾಡ್ತೀನಿ ಅಂತೇಳಿಕೊಳ್ಳುವ ತಾರಕ್, ಕನ್ನಡಿಗರು ಸಿಕ್ಕಾಗ ಅಥವಾ ಕರ್ನಾಟಕಕ್ಕೆ ಬಂದಾಗ ಕನ್ನಡದಲ್ಲೇ ಮಾತನಾಡ್ತಾರೆ. ನಿರರ್ಗಳವಾಗಿ ಮಾತನಾಡಲಿಲ್ಲ ಎಂದರೂ ಕೂಡ ಜೂನಿಯರ್ ಎನ್ಟಿಆರ್ ಅವರ ಬಾಯಲ್ಲಿ ಬರುವ ಕನ್ನಡದ ಶಬ್ದಗಳನ್ನೇ ಕೇಳುವುದಕ್ಕೆ ಅಭಿಮಾನಿಗಳು ಪ್ಲಸ್ ಕನ್ನಡಿಗರು ಕಿವಿಯನ್ನರಳಿಸುತ್ತಾರೆ. ತೆಲುಗು ಸ್ಟಾರ್ ನಟನ ಕನ್ನಡ ಪ್ರೇಮಕ್ಕೆ ಉಘೇ ಉಘೇ ಎನ್ನುತ್ತಾರೆ.

ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆಗಿನ ಸ್ನೇಹ-ಸಂಬಂಧಕ್ಕೆ `ಚಕ್ರವ್ಯೂಹ’ ಸಿನಿಮಾ ಸಾಕ್ಷಿಯಾಗಿದ್ದು ನಿಮಗೆಲ್ಲ ಗೊತ್ತೆಯಿದೆ. ಗೆಳೆಯನಿಗೋಸ್ಕರ ಚಕ್ರವ್ಯೂಹ ಸಿನಿಮಾದಲ್ಲಿ `ಗೆಳೆಯಾ…ಗೆಳೆಯಾ… ಗೆಲುವು ನಿನದಯ್ಯಾ’ ಅಂತ ಹಾಡಿ ಕುಣಿದಿದ್ದರು. ಆ ಗೆಳೆಯಾ ಇನ್ನಿಲ್ಲ ಅಂತ ಗೊತ್ತಾದಾಗ ಕೆಲಸ-ಕಾರ್ಯ ಎಲ್ಲಾ ಬಿಟ್ಟು ಫ್ಲೈಟ್ ಏರಿ ಬೆಂಗಳೂರಿಗೆ ಬಂದು ಕಣ್ಣೀರಿಟ್ಟಿದ್ದರು. ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಾಗಲೂ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದು ದೊಡ್ಮನೆ ರಾಜಕುಮಾರನ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದರು. ವ್ಯಕ್ತಿತ್ವದಿಂದ ಯಾರಾದ್ರೂ ರಾಜ್ಯ ಗೆದ್ದಿದ್ರೆ ಅದು ನಮ್ಮ ಅಪ್ಪು ಮಾತ್ರ ಅಂತೇಳಿ ದೊಡ್ಮನೆ ಅಭಿಮಾನಿಗಳ ಪ್ರೀತಿ ಸಂಪಾದನೆ ಮಾಡಿದ್ದರು. ಅನಂತರ ಆರ್ ಆರ್ ಆರ್ ಸಿನಿಮಾದ ಕನ್ನಡ ವರ್ಷನ್ ಟ್ರೇಲರ್ ಗೆ ತಮ್ಮದೇ ಧ್ವನಿ ನೀಡಿ ಕನ್ನಡ ಭಾಷೆಯ ಮೇಲಿಟ್ಟಿರುವ ಅಭಿಮಾನ ಎಂತಹದ್ದು ಅನ್ನೋದನ್ನ ಸಾಬೀತುಪಡಿಸಿದ್ದರು.

ಸದ್ಯ ತಾರಕ್ `ದೇವರ’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ನೆಕ್ಸ್ಟ್ ಪಿಕ್ಚರ್ `ಎನ್ಟಿಆರ್-31′ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಡೈರೆಕ್ಟ್ ಮಾಡ್ತಿದ್ದು, ಆ ಸಿನಿಮಾ ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಏಕಕಾಲಕ್ಕೆ ಚಿತ್ರೀಕರಣಗೊಳ್ಳುವ ಸುದ್ದಿಯಿದೆ. ಈ ಚಿತ್ರ ಅನೌನ್ಸ್ ಆದ ಘಳಿಗಿಯಿಂದಲೇ ಗ್ಲೋಬಲ್ ಲೆವೆಲ್ನಲ್ಲಿ ಸುದ್ದಿಯಾಗಿದೆ. ಕೆಜಿಎಫ್ ಕ್ಯಾಪ್ಟನ್ ಹಾಗೂ ಕೊಮರಮ್ ಭೀಮ್ ಕಾಂಬಿನೇಷನ್ ನಲ್ಲಿ ಬರಲಿರೋ ಆ ಮಾಸ್ ಸಿನಿಮಾ ಹೇಗಿರಬಹುದು ಅಂತ ವಲ್ಡ್ವೈಡ್ ಚಿತ್ರಪ್ರೇಮಿಗಳು ಕಾತುರರಾಗಿದ್ದಾರೆ.

ಈಗ ದೇವರ ಚಿತ್ರಕ್ಕೆ ರೆಡಿಯಾಗಿರುವುದನ್ನ ನೋಡಿದ್ರೇನೇ ಅಚ್ಚರಿಯಾಗುತ್ತಿದೆ. ಸೈಮಾಗೆ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ತಾರಕ್ನ ನೋಡಿ ಅಭಿಮಾನಿಗಳು ಮಾತ್ರವಲ್ಲ ಸ್ವತಃ ಸಿನಿಮಾ ಮಂದಿಯೇ ಕ್ಲೀನ್ಬೋಲ್ಡ್ ಆಗಿದ್ದಾರೆ. ಏನ್ ಸ್ವ್ಯಾಗು, ಏನ್ ಫೈಯರ್ರು ಅಂತ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಹೊಸ ಲುಕ್ಕೇ ಹಿಂಗಿದೆ, ಇನ್ನೂ `ದೇವರ’ ಪಿಕ್ಚರ್ ಹೆಂಗಿರಬಹುದು ಅಂತ ಈಗಾಗಲೇ ಲೆಕ್ಕಚ್ಚಾರ ಶುರುವಾಗಿದೆ.





