ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಅಗಲಿಕೆಯ ನೋವಲ್ಲಿದ್ದಾರೆ. ಉಸಿರಲ್ಲಿ ಉಸಿರಾಗಿ ಬೆರತು ಹೋಗಿದ್ದ, ಜೀವಜ್ಜೀವವಾಗಿದ್ದ ಹೆಂಡ್ತಿನಾ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಸ್ಪಂದನಾ ಮರೆಯಾಗಿ ಎರಡು ತಿಂಗಳು ಕಳೆದವು. ಆದರೆ, ವಿಜಯ್ ಮನಸ್ಸಿಗೆ ಆಗಿರುವ ಆಘಾತ, ದುಃಖ, ನೋವು, ಸಂಕಟ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ. ಈ ಕ್ಷಣಕ್ಕೂ ಸ್ಪಂದನಾ ಉಸಿರು ಚೆಲ್ಲಿರುವ ನೋವನ್ನು ವಿಜಯ್ ಅವ್ರ ಕೈಲಿ ಭರಿಸೋದಕ್ಕೆ ಆಗ್ತಿಲ್ಲ. ಸಾರ್ವಜನಿಕ ವಲಯದಲ್ಲಿರುವುದರಿಂದ, ಸ್ಟಾರ್ ಆಗಿರುವುದರಿಂದ ಜನರೊಟ್ಟಿಗೆ ಬೆರೆಯುತ್ತಿದ್ದಾರೆ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಾಗ ಸ್ಮೈಲ್ ಮಾಡುತ್ತಿದ್ದಾರೆ ಬಿಟ್ಟರೆ ಮೊದಲಿನ ಕಳೆ ಚಿನ್ನಾರಿ ಮೊಗದಲ್ಲಿ ಕಾಣುತ್ತಿಲ್ಲ. ಸ್ಪಂದನಾ ಬದುಕಿದ್ದಾಗ ವಿಜಯ್ ಮೊಗವನ್ನು ಅಲಂಕರಿಸಿದ್ದ ಆ ಹಸನ್ಮುಖ ನಗು, ಮಂದಹಾಸ ಈಗ ವಿಜಯ್ ಮುಖದಲ್ಲಿಲ್ಲ. ಆದರೆ, ಮಗನಿಗೋಸ್ಕರ ನಗು ಬೀರಬೇಕಿದೆ. ಸ್ಪಂದನಾ ಕೊಟ್ಟು ಹೋದ ಕುಡಿಯನ್ನು ದೀಪದಂತೆ ಕಾಯಬೇಕಿದೆ. ಹೀಗಾಗಿಯೇ ನಟ ವಿಜಯ್ ಮೈಕೊಡವಿಕೊಂಡು ಎದ್ದುನಿಂತಿದ್ದಾರೆ. ಒಳಗೊಳಗೆ ನೋವು ಅನುಭವಿಸುತ್ತಿರುವುದಾದರೂ ಯಾರ ಮುಂದೆಯೂ ತೋರಿಸಿಕೊಳ್ಳದೇ ಎಂದಿನಂತೆ ಕಾಯಕ ಮುಂದುವರೆಸಿದ್ದಾರೆ. ಈ ನಡುವೆ ಮನೆ ಬದಲಿಸಿದ್ದಾರೆ. ಮಗನ ಜೊತೆ ಹೊಸ ಮನೆ ಪ್ರವೇಶ ಮಾಡಿದ್ದಾರೆ.

ಹೌದು, ನಟ ವಿಜಯ್ ರಾಘವೇಂದ್ರ ಹಳೆಯ ಮನೆ ಖಾಲಿ ಮಾಡಿದ್ದಾರೆ. ಪತ್ನಿ ಸ್ಪಂದನಾ ಜೊತೆ ವಾಸ ಮಾಡಿದ್ದ ಜಕ್ಕೂರು ನಿವಾಸವನ್ನು ತೊರೆದು ಈಗ ಹೊಸ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇದಕ್ಕೆ ಕಾರಣ ಕಾಡುತ್ತಿರುವ ಪತ್ನಿ ಸ್ಪಂದನಾರ ನೆನಪುಗಳು. ಹೌದು, ಜಕ್ಕೂರು ಮನೆಯಲ್ಲಿ ವಿಜಯ್ ಹಾಗೂ ಸ್ಪಂದನಾ ಸುಮಾರು ಎಂಟು ವರ್ಷ ಸಂಸಾರ ಮಾಡಿದ್ದಾರೆ. ಹೀಗಾಗಿ ಸಹಸ್ರಾರು ನೆನಪುಗಳು ಈ ಮನೆಯಲ್ಲಿಡಗಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಅಂದದ ಅರಮನೆಯಲ್ಲಿ ವಿಜಯ್ ಎಲ್ಲಿ ಕುಂತ್ರೂ, ನಿಂತ್ರೂನು ಸ್ಪಂದನಾ ನೆನಪಾಗುತ್ತಿದ್ದಾರೆ. ಹಾಲು-ಜೇನಿನಂತೆ ಬೆರೆತು ಬಾಳಿದ್ದು, ಮಗನೊಟ್ಟಿಗೆ ಸುಂದರ ಕ್ಷಣಗಳನ್ನು ಕಳೆದಿದ್ದು, ಹಬ್ಬ ಮಾಡಿ ಸಂಭ್ರಮಿಸಿದ್ದು, ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಬದುಕಿದ್ದು ಹೀಗೆ ಎಲ್ಲವೂ ಒಂದೊಂದಾಗಿ ಕಣ್ಣಮುಂದೆ ಬಂದರೆ ವಿಜಯ್ ಪರಿಸ್ತಿತಿ ಏನಾಗಬಹುದು. ಬೆಲೆಯೇ ಕಟ್ಟಲಾಗದ ಆ ಬಂಗಾರದಂತಹ ನೆನಪುಗಳನ್ನ ಸಂಭ್ರಮಿಸ್ಬೇಕಾ? ಅಥವಾ ಇಷ್ಟೆಲ್ಲಾ ಸಂತೋಷಕ್ಕೆ ಕಾರಣವಾಗಿದ್ದ ನನ್ನ ಅಚ್ಚು, ನನ್ನ ಚಿನ್ನಮ್ಮಾ ಈಗ ನನ್ನೊಟ್ಟಿಗೆ ಇಲ್ಲವಲ್ಲಾ ಅಂತ ತಲೆ ತಲೆ ಚಚ್ಚಿಕೊಂಡು ಕಣ್ಣೀರಿಡಬೇಕಾ? ಬಹುಷಃ ಇದೆಲ್ಲವನ್ನೂ ಮಾಡಿಯೇ ಇನ್ಮೇಲೆ ನನ್ನ ಕೈಲಿ ಇಲ್ಲಿ ಇರೋದಕ್ಕೆ ಸಾಧ್ಯವಿಲ್ಲವೆಂದು ಹಳೆ ಮನೆ ಖಾಲಿ ಮಾಡಿದ್ದಾರೆ. ಹೊಸ ಮನೆಯಲ್ಲಿ ಮಗ ಶೌರ್ಯನ ಜೊತೆ ಹೊಸ ಜೀವನ ಶುರು ಮಾಡಿದ್ದಾರೆ. ಈ ಬಗ್ಗೆ ಖಾಸಗಿ ಪತ್ರಿಕೆಗೆ ಸಂದರ್ಶನ ನೀಡಿರುವ ನಟ ವಿಜಯ್ ರಾಘವೇಂದ್ರ ಸ್ಪಂದನಾ ಬಿಟ್ಟೋದ ನೆನಪುಗಳನ್ನು ಜೋಪಾನವಾಗಿ ಕಾಪಾಡಿಕೊಂಡು, ಮಗನನ್ನೂ ಜೋಪಾನ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಇದೇ ವೇಳೆ ಮಗನ ಬಗ್ಗೆ ಮಾತನಾಡಿರುವ ವಿಜಯ್ ಅವರು, ಅಮ್ಮನಂತೆ ಮಗ ಕೂಡ ಯಾವ ಫೀಲಿಂಗ್ಸ್ ನೂ ಎಕ್ಸ್ ಪ್ರೆಸ್ ಮಾಡುವುದಿಲ್ಲ. ಅವನಿಗೆ ಎಷ್ಟೇ ನೋವಾದರೂ, ಅವರಮ್ಮನನ್ನೂ ಎಷ್ಟೇ ಮಿಸ್ ಮಾಡಿಕೊಂಡರೂ ಒಬ್ಬನೇ ಫೀಲ್ ಮಾಡ್ತಾನೆ ಬಿಟ್ಟರೆ ನನ್ನೊಟ್ಟಿಗೆ ಮುಕ್ತವಾಗಿ ಮಾತನಾಡಲ್ಲ. ಅವನು ಒಳಗೊಳಗೆ ದುಃಖ ಪಡುವುದು ನೋಡಿದರೆ ನನ್ನ ಕರುಳು ಹಿಂಡುತ್ತೆ. ಆದರೆ, ಏನ್ಮಾಡೋದು ನನ್ನೊಳಗೂ ಖಾಲಿತನ ಆವರಿಸಿದೆ. ಅದನ್ನು ನಿಭಾಯಿಸಿಕೊಂಡು ಹೋಗುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಸದ್ಯಕ್ಕೆ ನನ್ನ ಕಣ್ಣಮುಂದೆ ಇರುವುದು ಸಿನಿಮಾ ಜೊತೆಗೆ ನನ್ನ ಮಗ ಶೌರ್ಯ. ಶೂಟಿಂಗ್ ಹೋಗುವಷ್ಟರಲ್ಲಿ ಮಗನಿಗೆ ಏನು ಬೇಕು, ಏನು ಬೇಡ ಎಲ್ಲವನ್ನೂ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಭರ್ತಿ ಹದಿನಾರು ವರ್ಷ ಸ್ಪಂದನಾ ಆ ಜವಾಬ್ದಾರಿನಾ ಅದ್ಭುತವಾಗಿ ನಿಭಾಯಿಸಿದ್ದಳು. ಈಗ ನನಗೆ ಆ ಜವಾಬ್ದಾರಿ ಕೊಟ್ಟು ಹೋಗಿದ್ದಾಳೆ. ಒಮ್ಮೊಮ್ಮೆ ರಿಸ್ಕ್ ಎಂದೆನಿಸುತ್ತೆ. ಆದರೆ, ನಿಭಾಯಿಸ್ತೀನಿ ಎನ್ನುವ ಭರವಸೆ ನಂಗಿದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಶಿರಡಿ ಸಾಯಿಬಾಬ ಸನ್ನಿಧಿಗೆ ಹೋಗಿಬಂದಿದ್ದಾರೆ. ಎಂದಿನಂತೆ ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜನರು ತೋರಿಸ್ತಿರುವ ಪ್ರೀತಿ ಮತ್ತು ಅವರು ತುಂಬುತ್ತಿರುವ ಧೈರ್ಯಕ್ಕೆ ನಾನೆಂದೆಂದಿಗೂ ಆಭಾರಿ ಎಂದಿರುವ ಚಿನ್ನಾರಿ ಮುತ್ತ, ಪತ್ನಿ ಹಾಕಿಕೊಟ್ಟ ಹಾದಿಯಲ್ಲಿ ನಡೆಯಲು ಮುಂದಾಗಿದ್ದಾರೆ. ನಾನು ಏನು ಮಾಡಬೇಕು, ಏನು ಮಾಡಬಾರದು ಎಲ್ಲವನ್ನೂ ನನಗೆ ಹೇಳಿಕೊಟ್ಟಿದ್ದಾಳೆ. ನನಗಾಗಿಯೇ ಒಂದು ಬ್ಲೂ ಪ್ರಿಂಟ್ ಹಾಕಿಕೊಟ್ಟಿದ್ದಾಳೆ. ಇದೀಗ ನಾನು ಅವಳು ಹಾಕಿಕೊಟ್ಟ ಹಾದಿಯಲ್ಲೇ ಸಾಗುವೆ ಎಂದಿದ್ದಾರೆ. ಒಬ್ಬ ಪತಿಯಾಗಿ ಇದ್ದಕ್ಕಿಂತ ಇನ್ನೇನು ಮಾಡಲಿಕ್ಕೆ ಸಾಧ್ಯ ನೀವೇ ಹೇಳಿ





